ರಾಜಕಾರಣ ಕಲುಷಿತ - ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ - ಇನ್ನೂ ಅನೇಕರಿಂದಲೂ ನಿರ್ಧಾರ : ಕಾಂಗ್ರೆಸ್ ಶಾಸಕ

ಸಾರಾಂಶ

ರಾಜಕಾರಣ ಸಂಪೂರ್ಣ ಕಲುಷಿತವಾಗಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನನ್ನಂತೆ ಇನ್ನೂ ಅನೇಕರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ಯೋಚನೆ ಮಾಡಿದ್ದಾರೆ

 ಬೆಂಗಳೂರು: ರಾಜಕಾರಣ ಸಂಪೂರ್ಣ ಕಲುಷಿತವಾಗಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನನ್ನಂತೆ ಇನ್ನೂ ಅನೇಕರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ಯೋಚನೆ ಮಾಡಿದ್ದಾರೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಬಿ.ಆರ್‌.ಪಾಟೀಲ್‌ ಹೇಳಿದ್ದಾರೆ. ಭಾನುವಾರ ನಗರದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಅವರು ಈ ರೀತಿ ಹೇಳಿದರು.

ಮಿಡಾಸ್‌ ಸ್ಕೂಲ್‌ ಎಂಟರ್‌ಪ್ರನರ್‌ಶಿಪ್‌ ಸಭಾಂಗಣದಲ್ಲಿ ಸಮಾಜಮುಖಿ ಪ್ರಕಾಶನದ ಚಂದ್ರಕಾಂತ ವಡ್ಡು ಅವರ ‘ಚುಂಬಕ ಗಾಳಿ’ ಪುಸ್ತಕ ಬಿಡುಗಡೆಗೊಳಿಸಿ, ‘ಲೋಹಿಯಾ ಸಮಾಜವಾದ ಮತ್ತು ಇಂದಿನ ಸರ್ಕಾರಗಳು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಸಂಪತ್ತಿನ ಕೇಂದ್ರೀಕರಣ ವ್ಯಾಪಕವಾಗಿದೆ. ಅಂಬಾನಿ, ಅದಾನಿ ಮಾತ್ರವಲ್ಲದೆ ಅನೇಕ ಶಾಸಕರೂ ಭಾರಿ ಶ್ರೀಮಂತರಾಗಿದ್ದಾರೆ. ಲೋಹಿಯಾವಾದಿಯಾಗಿದ್ದ ನನ್ನನ್ನು ಕಾಂಗ್ರೆಸ್‌ ಸರ್ಕಾರ 6 ತಿಂಗಳು ಜೈಲಿಗೆ ಹಾಕಿತ್ತು. ಆದರೆ ಇಂದು ಅದೇ ಪಕ್ಷದಿಂದ ಶಾಸಕನಾಗಿದ್ದೇನೆ. ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಗಾಂಧಿಯನ್ನೇ ವಿಲನ್‌ ಆಗಿ ಮಾಡುತ್ತಿವೆ. ಇದು ಬಹಳ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು. 

Share this article