ಯಲಹಂಕ : ಮತದಾನದಾರರಲ್ಲಿ ನೀರಿನ ಮಿತವ್ಯಯ, ನೀರಿನ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಮಹತ್ವದ ಉದ್ದೇಶದಿಂದ ಬೆಂ.ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ರಾಜಾನುಕುಂಟೆ ಗ್ರಾಮ ಪಂಚಾಯತಿಯ ಮತಗಟ್ಟೆ ಸಂಖ್ಯೆ-28 ರಲ್ಲಿ "ನೀರನ್ನು ಉಳಿಸಿ " ಎನ್ನುವ ಆಕಾಶ ನೀಲಿ ಬಣ್ಣದ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿತ್ತು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ದೆಬಾಶಿಶ್ ಮಜುಮ್ದಾರ್ ರಾಜಾನುಕುಂಟೆ ಗ್ರಾಮದಲ್ಲಿ ಸ್ಥಾಪಿಸಲಾಗಿದ್ದ ಈ ಮತಗಟ್ಟೆಗೆ ಭೇಟಿ ನೀಡಿ, ವಿಶೇಷ ಬ್ಲೂ ಬೂತ್ ಸ್ಥಾಪಿನೆಗೆ ಕಾರಣರಾದ ಡೆಡಿಕೇಟೆಡ್ ಎ.ಇ.ಆರ್.ಓ. ಅಪೂರ್ವ ಎ ಕುಲಕರ್ಣಿರವರನ್ನು ಅಭಿನಂದಿಸಿದರು.
ನಂತರ ಮಾತನಾಡಿದ ಅವರು, ದೈನಂದಿನ ಬದುಕಿನಲ್ಲಿ ಹಲವು ಉದ್ದೇಶಗಳಿಗಾಗಿ ನಾವು ನೀರನ್ನೇ ಅವಲಂಬಿ ಸಿದ್ದೇವೆ. ನೀರನ್ನು ನಾವು ಕುಡಿಯಲು, ಅಡುಗೆ ಮಾಡಲು, ಸ್ವಚ್ಛಗೊಳಿಸಲು, ಸ್ನಾನ ಮಾಡಲು, ಕೃಷಿ ನೀರಾವರಿ, ಕೈಗಾರಿಕೆ ಸೇರಿದಂತೆ ಹಲವು ಉದ್ದೇಶ ಗಳಿಗೆ ಬಳಸುತ್ತೇವೆ ಅಲ್ಲದೆ ನೀರನ್ನು ಶೀತಕ, ದ್ರಾವಕ ವಾಗಿ ಮತ್ತು ಇತರ ಉತ್ಪಾದನಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ನೀರು ಹೇಗೆ ಜೀವನದ ಅತ್ಯವಶ್ಯಕ ಅಂಶವಾಗಿದೆ ಮತ್ತು ಪ್ರತಿ ಹನಿ ನೀರು ಜೀವನಾಧಾರಕ್ಕೆ ಹೇಗೆ ಪ್ರಮುಖವಾಗಿದೆ ಎಂಬುದರ ಕುರಿತು ಜಾಗೃತಿ ಮೂಡಿಸಲು ಬ್ಲೂ ಬೂತ್ ಸ್ಥಾಪಿಸಿರುವುದು ಸಂತೋಷದ ಸಂಗತಿ. ಇದನ್ನು ನೋಡಿರುವ ನಾಗರೀಕರು ನೀರನ್ನು ಮಿತವಾಗಿ ಬಳಸುವ ಮೂಲಕ ಉಳಿಸುವಂತಾದರೆ ನಮ್ಮ ಈ ಪ್ರಯತ್ನ ಸಾರ್ಥಕ ವಾಗುತ್ತದೆ ಎಂದರು.
ಬ್ಲೂ ಬೂತ್ ನೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟ ಜನತೆ
ಇದುವರೆಗೂ ಪಿಂಕ್ ಸಖೀ ಬೂತ್, ಯೂತ್ ಬೂತ್, ವಿಕಲಚೇತನರ ಬೂತ್ ಇರುತ್ತಿತ್ತು, ಇದೀಗ ಈ ವಿಶೇಷ ಮತಗಟ್ಟೆಯ ಸಾಲಿಗೆ ಸೇವ್ ವಾಟರ್ ಫಾರ್ ಬ್ಲೂ ಥೀಮ್ ಮತಗಟ್ಟೆ ಸೇರ್ಪಡೆಯಾಗಿರುವುದು ಹೊಸ ಮೈಲುಗಲ್ಲು ಸಾಧಿಸಿದಂತಾಗಿದೆ. ವಿಶೇಷವೇನೆಂದರೆ ಮತಗಟ್ಟೆ ಆಕಾಶ ನೀಲಿ ಬಣ್ಣದಂತೆ ಕಂಗೊಳಿಸುತ್ತಿದ್ದು'''' ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಆಕಾಶ ನೀಲಿಬಣ್ಣದ ಶರ್ಟ್ ಧರಿಸಿ ಮತದಾರರನ್ನು ಸ್ವಾಗತಿಸುತ್ತಿದ್ದ ದೃಶ್ಯ ವಿನೂತನವಾಗಿತ್ತು. ಇನ್ನು ಮತದಾರರು ಮತಗಟ್ಟೆಗೆ ಹೋಗಿ ತಮ್ಮ ಅಮೂಲ್ಯ ವಾದ ಮತಹಾಕಿ ಹೊರಗೆ ಬಂದು ಬ್ಲೂ ಬೂತ್ ನೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.