ವಿಜಯ್ ಮಲಗಿಹಾಳ
ಲೋಕಸಭಾ ಚುನಾವಣೆ ವೇಳೆ ತಮ್ಮ ರಾಜಕೀಯ ನಡೆಯಿಂದ ಸಾಕಷ್ಟು ಸುದ್ದಿ ಮಾಡಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹಿಂದೆ ಬಿಜೆಪಿಯಲ್ಲಿದ್ದ ವೇಳೆ ರಾಯಣ್ಣ ಬ್ರಿಗೇಡ್ ಆರಂಭಿಸಿ ರಾಜ್ಯಾದ್ಯಂತ ಸಂಚರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆದಿದ್ದರು. ಬಳಿಕ ಈಶ್ವರಪ್ಪ ಅವರು ಯಡಿಯೂರಪ್ಪ ಅವರ ನಡೆ ವಿರೋಧಿಸಿಯೇ ಪಕ್ಷದಿಂದ ಹೊರಬಂದಿದ್ದಾರೆ. ರಾಯಣ್ಣ ಬ್ರಿಗೇಡ್ಗೆ ಹೊಸ ಸ್ವರೂಪ ನೀಡಿ ರಾಯಣ್ಣ ಚನ್ನಮ್ಮ ಬ್ರಿಗೇಡ್ ಹೆಸರಿನಲ್ಲಿ ಹೊಸ ಸಂಘಟನೆ ಸ್ಥಾಪಿಸುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಟಕ್ಕರ್ ನೀಡುವ ಲಕ್ಷಣ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...
ಮತ್ತೊಂದು ಹೊಸ ಹೋರಾಟಕ್ಕೆ ಸಜ್ಜಾಗಿದ್ದೀರಿ? ಅಂಥ ಅನಿವಾರ್ಯತೆ ಇದೆಯೇ?
ರಾಜ್ಯದಲ್ಲಿನ ಈಗಿನ ಪರಿಸ್ಥಿತಿ ನೋಡಿದರೆ ಇಡೀ ಹಿಂದೂ ಸಮಾಜಕ್ಕೆ ತೊಂದರೆ ಇದೆ. ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲ ಸಮುದಾಯಗಳು ಒಟ್ಟಾಗುವ ಅಗತ್ಯ ಕಾಣುತ್ತಿದೆ. ಯಾರಿಗೂ ಸಂಪೂರ್ಣ ರಕ್ಷಣೆ ಇದೆ ಎಂದು ಅನಿಸುತ್ತಿಲ್ಲ. ಹೀಗಾಗಿ, ಒಂದು ಸಂಘಟನೆ ಮಾಡಬೇಕು ಎಂಬ ಉದ್ದೇಶ ಮನಸ್ಸಿನಲ್ಲಿತ್ತು. ಕಳೆದ ವಾರ ವಿಜಯಪುರ ಜಿಲ್ಲೆಗೆ ತೆರಳಿದ ವೇಳೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಇದಕ್ಕೆ ಇಂಬು ನೀಡಿದರು. ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರೂ ಇದ್ದರು. ರಾಯಣ್ಣ ಮತ್ತು ಚನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಡಿದವರು. ನೀವಿಬ್ಬರೂ ಈಗ ಆ ಎರಡು ಹೆಸರುಗಳನ್ನು ಒಳಗೊಂಡು ಒಂದು ಸಂಘಟನೆ ಮಾಡಿ ಎಂದು ಸಲಹೆ ನೀಡಿದರು. ಇದಕ್ಕೆ ಅಲ್ಲಿ ನೆರೆದಿದ್ದ ಸಹಸ್ರಾರು ಜನರು ಚಪ್ಪಾಳೆ ಮೂಲಕ ಸಹಮತ ಸೂಚಿಸಿದರು.
ಹಿಂದೂಗಳ ರಕ್ಷಣೆಗೆಂದೇ ಆರ್ಎಸ್ಎಸ್ ಸೇರಿದಂತೆ ಅನೇಕ ಸಂಘಟನೆ ಇವೆಯಲ್ಲ?
ಅವೆಲ್ಲವೂ ಸಂಘಟನೆ ಮಾಡುತ್ತಿವೆ. ಆದರೆ, ಹೋರಾಟಕ್ಕೆ ಇಳಿಯುವುದು ಸಮಸ್ಯೆಯಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಗೋಹತ್ಯೆ, ಗಣಪತಿ ಮೆರವಣಿಗೆಗೆ ಅಡ್ಡಿ, ರಾಷ್ಟ್ರವಿರೋಧಿ ಚಟುವಟಿಕೆಗಳು ಹೆಚ್ಚುತ್ತಿವೆ. ಹೀಗಾಗಿ, ನೇರವಾಗಿ ಹೋರಾಟಕ್ಕೆ ಇಳಿಯವಂಥ ಕೆಲಸ ಆಗಬೇಕಾಗಿದೆ. ಅದಕ್ಕಾಗಿ ನಾವು ಸಂಘಟನೆ ಸ್ಥಾಪಿಸುವ ಬಗ್ಗೆ ನಿರ್ಧರಿಸಿದ್ದೇವೆ. ಹಿಂದೂಗಳ ಪರವಾಗಿ ಹೋರಾಟ ಮಾಡುವ ಸಂಘಟನೆಗಳ ಸಂಖ್ಯೆ ಹೆಚ್ಚಿದಷ್ಟೂ ಒಳ್ಳೆಯದು.
ಹಿಂದುತ್ವ ಪ್ರತಿಪಾದಕ ಎನ್ನುವ ಬಿಜೆಪಿ ಇಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಕೆಲಸ ಮಾಡುತ್ತಿಲ್ಲವೇ?
ಅಧಿಕಾರಕ್ಕಾಗಿ ಹೊಂದಾಣಿಕೆ ರಾಜಕಾರಣ ಈಗ ಬಿಜೆಪಿಯಲ್ಲಿ ಆರಂಭವಾಗಿದೆ. ಹಿಂದೆಂದೂ ಹೀಗೆ ಇರಲಿಲ್ಲ. ಸತ್ಯಶೋಧನಾ ಸಮಿತಿ ಮಾಡಿದರು. ಆ ಸಮಿತಿ ಹೋಗಿ ಬಂದು ವರದಿ ನೀಡಿತು. ಮುಂದೇನು ಎಂದು ಹೇಳಲೇ ಇಲ್ಲ. ಬಿಜೆಪಿ ಮಾಡದಿರುವ, ಮಾಡಬೇಕಾದ ಕೆಲಸವನ್ನು ನಾವು ಸಂಘಟನೆ ಸ್ಥಾಪಿಸಿ ಮಾಡುತ್ತೇವೆ ನೋಡುತ್ತಿರಿ.
ರಾಯಣ್ಣ ಮತ್ತು ಚನ್ನಮ್ಮ ಹೆಸರೇ ಯಾಕೆ? ಎರಡು ಪ್ರಬಲ ಜಾತಿ ಮಾತ್ರ ಬಿಂಬಿಸಿದಂತೆ ಆಗುವುದಿಲ್ಲವೇ?
ಇದನ್ನು ಕೆಲವು ಹಿಂದೂ ಸಮಾಜದ ಮುಖಂಡರು ನನಗೆ ನೇರವಾಗಿ ಕೇಳಿದ್ದಾರೆ. ರಾಯಣ್ಣ ಮತ್ತು ಚನ್ನಮ್ಮನನ್ನು ಜಾತಿ ಸೂಚಕವಾಗಿ ನೋಡಲೇ ಬಾರದು. ಅವರು ಹಿಂದೂ ಸಮಾಜವನ್ನು, ದೇಶವನ್ನು ಎತ್ತಿ ಹಿಡಿಯಲು ಬ್ರಿಟೀಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಅವರಿಬ್ಬರ ಬಲಿದಾನಕ್ಕೆ ಕಾರಣವಾಗಿದ್ದು ಹೊರಗಿನವರಲ್ಲ. ನಮ್ಮವರೇ. ಈಗ ಬಿಜೆಪಿಯ ರಾಜ್ಯ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಹಿಂದೂ ಸಮಾಜ ಸಂಕಷ್ಟಕ್ಕೆ ಸಿಲುಕಿದೆ.
ರಾಜ್ಯ ಬಿಜೆಪಿಯಲ್ಲಿನ ಹಿಂದುತ್ವ ಪ್ರತಿಪಾದಕರು ಮೂಲೆಗುಂಪಾಗುತ್ತಿದ್ದಾರೆ ಎಂಬ ಮಾತಿದೆಯಲ್ಲ?
ಹೌದು. ಅಕ್ಷರಶಃ ನಿಜ. ಬಿಜೆಪಿಯಲ್ಲಿನ ಹೊಂದಾಣಿಕೆ ರಾಜಕಾರಣ, ಸ್ವಜನ ಪಕ್ಷಪಾತ, ಸ್ವಾರ್ಥ ರಾಜಕಾರಣದ ಪರಿಣಾಮ ಪಕ್ಷ ಕುಸಿಯತೊಡಗಿದೆ. ಪಕ್ಷದಲ್ಲಿನ ನಿಷ್ಠಾವಂತ ಮುಖಂಡರು, ಕಾರ್ಯಕರ್ತರು ಕಡೆಗಣಿಸಲ್ಪಡುತ್ತಿದ್ದಾರೆ. ಯತ್ನಾಳ್ ಸೋಲಿಸಲು ಪ್ರಯತ್ನಪಟ್ಟರು. ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ನಿಂದ ತಮ್ಮವರನ್ನೇ ನಿಲ್ಲಿಸಿ ಸೋಲಿಸಿದರು. ಸಿ.ಟಿ.ರವಿ ಮತ್ತು ಪ್ರತಾಪ್ ಸಿಂಹ ಅವರು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು. ಆದರೆ, ಅವರ ದನಿಗೆ ಶಕ್ತಿ ಬರಲಿಲ್ಲ. ಹೊಂದಾಣಿಕೆ ರಾಜಕಾರಣ ಯಡಿಯೂರಪ್ಪ ಅವರ ರಕ್ತದಲ್ಲಿ ಬಂದಿರಲಿಲ್ಲ. ಆದರೆ, ಅವರ ಮಕ್ಕಳ ರಕ್ತದಲ್ಲಿ ಬಂದಿದೆ. ಇದು ರಾಜ್ಯ ರಾಜಕಾರಣದಲ್ಲಿ ಬಿಜೆಪಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ.
ಇತ್ತೀಚಿನ ಸಂಘ ಪರಿವಾರದ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಬಿಜೆಪಿ ನಾಯಕರು ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರಂತೆ?
ಇದು ಒಳ್ಳೆಯ ಬೆಳವಣಿಗೆಯಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗುವುದು ಬೇಡ, ಅನುಭವ ಇಲ್ಲ ಎಂದು ಹೇಳಿದರೂ ಕೇಳಲಿಲ್ಲ. ಆರು ತಿಂಗಳು ಖಾಲಿ ಇತ್ತು. ಅನುಭವ ಇರುವವರನ್ನು ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ಯಡಿಯೂರಪ್ಪ ಅವರೇ ಕುಳಿತು ಹಠ ಮಾಡಿದರು. ಒಬ್ಬ ಮಗ ಎಂಪಿ ಆಗಿದ್ದಾನೆ. ಬೇರೆಯವರನ್ನು ಮಾಡಿ ಎಂದು ಹೇಳಿದ್ದರೆ ಅವರು ದೊಡ್ಡ ಮನುಷ್ಯರಾಗುತ್ತಿದ್ದರು. ಪದೇ ಪದೇ ದೆಹಲಿಗೆ ಹೋಗಿ ಕೇಂದ್ರ ನಾಯಕರನ್ನು ಭೇಟಿ ಮಾಡಿ ಏನು ಮಂಕುಬೂದಿ ಮಾಡಿದರೋ ಗೊತ್ತಿಲ್ಲ.
ಹಿಂದೆ ನೀವು ಸ್ಥಾಪಿಸಿದ್ದ ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ಈಗಲೂ ಮುಂದುವರೆಸಿಕೊಂಡು ಹೋಗಿದ್ದರೆ?
-ಒಂದು ವೇಳೆ ರಾಜ್ಯದಲ್ಲಿ ರಾಯಣ್ಣ ಬ್ರಿಗೇಡ್ ಈಗಲೂ ಇದ್ದಿದ್ದರೆ ಇಡೀ ಹಿಂದೂ ಸಮಾಜದವರು ಹೆಚ್ಚಾಗಿರುತ್ತಿದ್ದರು. ಆಗ ಅಮಿತ್ ಶಾ ಅವರ ಮಾತು ಕೇಳಿ ಸಂಘಟನೆ ಕೈಬಿಟ್ಟೆ. ದಲಿತರು, ಹಿಂದೂಳಿದ ವರ್ಗದವರು ಇಲ್ಲದೆ ಹಿಂದೂ ಸಮಾಜ ಆಗಲು ಸಾಧ್ಯವೇ? ಇಡೀ ರಾಜ್ಯದಲ್ಲಿ ಸಂಕುಚಿತ ಭಾವನೆ ಹೋಗಬೇಕು. ಹೊಂದಾಣಿಕೆ ರಾಜಕೀಯ ಹೋಗಬೇಕು. ಹಿಂದುತ್ವ ಉಳಿಯಬೇಕು. ಎಲ್ಲಾ ಸಮಾಜಕ್ಕೂ ಗೌರವ ಸಿಗಬೇಕು. ಅದಕ್ಕಾಗಿ ಚೆನ್ನಮ್ಮ-ರಾಯಣ್ಣ ತಾಯಿ-ಮಗನಂತೆ ಇದ್ದಂತೆ ಎಲ್ಲಾ ಸಮುದಾಯದವರು ಸಹೋದರತ್ವ ಭಾವನೆಯಿಂದ ಇರಬೇಕು ಎಂಬ ಕಾರಣಕ್ಕಾಗಿ ರಾಯಣ್ಣ ಬ್ರಿಗೇಡ್ ಕೆಲಸ ಮಾಡುತ್ತಿತ್ತು.
ರಾಯಣ್ಣ ಚನ್ನಮ್ಮ ಬ್ರಿಗೇಡ್ ಅನ್ನು ಕ್ರಿಕೆಟ್ ತಂಡದಂತೆ ಆರ್ಸಿಬಿ ಎಂದು ಕರೆಯುತ್ತೀರಾ?
ಸದ್ಯಕ್ಕೆ ರಾಯಣ್ಣ ಚನ್ನಮ್ಮ ಬ್ರಿಗೇಡ್ ಎಂಬ ಹೆಸರು ಪ್ರಸ್ತಾಪವಾಗಿದೆ. ಇನ್ನೂ ಅಂತಿಮವಾಗಿಲ್ಲ. ಮುಂದಿನ ಅ.20ರಂದು ಬಾಗಲಕೋಟೆಯಲ್ಲಿ ರಾಜ್ಯ ಮಟ್ಟದ ಸಭೆ ನಡೆಯಲಿದ್ದು, ಅಲ್ಲಿ ಹೆಸರು, ರೂಪುರೇಷೆ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು.
ಈ ಆರ್ಸಿಬಿಗೆ ನೀವು ಕ್ಯಾಪ್ಟನ್ ಆಗುತ್ತೀರಾ ಅಥವಾ ಕೋಚ್ ಆಗುತ್ತೀರಾ?
ಯಾರು ಏನಾಗಬೇಕು ಎಂಬುದನ್ನು ಬಾಗಲಕೋಟೆ ಸಭೆಯಲ್ಲಿಯೇ ನಿರ್ಧರಿಸಲಾಗುತ್ತದೆ. ಈಗ ಆ ಬಗ್ಗೆ ಯೋಚನೆ ಮಾಡಿಲ್ಲ.
ನಿಮ್ಮ ಸಂಘಟನೆ ಬಿಜೆಪಿಯ ಅತೃಪ್ತ ಮುಖಂಡರು, ಕಾರ್ಯಕರ್ತರಿಗೆ ಪರ್ಯಾಯ ವೇದಿಕೆಯಾಗುವಂತೆ ಕಾಣುತ್ತಿದೆ?
ಹಾಗೇ ಆಗುವುದಿಲ್ಲ. ಪಕ್ಷಾತೀತವಾಗಿ ಸಂಘಟನೆ ಮಾಡುತ್ತೇವೆ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಹಿಂದೂ ಮುಖಂಡರು, ಕಾರ್ಯಕರ್ತರೂ ಇರುತ್ತಾರೆ. ಕಾಂಗ್ರೆಸ್ನವರೂ ಬೆಂಬಲ ಸೂಚಿಸುತ್ತಿದ್ದಾರೆ.
ಬಿಜೆಪಿಯ ಅತೃಪ್ತರು ನಿಮ್ಮ ಜತೆ ಸತತ ಸಂಪರ್ಕದಲ್ಲಿ ಇದ್ದಾರಲ್ಲವೇ?
ಬಿಜೆಪಿಯ ಅತೃಪ್ತರು ಎನ್ನುವುದಕ್ಕಿಂತಲೂ ಪಕ್ಷ ಈ ಮಟ್ಟಕ್ಕೆ ಕರ್ನಾಟಕದಲ್ಲಿ ಇಳಿದುಬಿಟ್ಟಿತ್ತಲ್ಲ ಎಂಬ ನೋವು ಇರುವ ಮುಖಂಡರು, ಕಾರ್ಯಕರ್ತರು ಸಹಜವಾಗಿಯೇ ಸಂಪರ್ಕದಲ್ಲಿದ್ದಾರೆ. ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಪಕ್ಷ ಬೆಳೆಯಬೇಕು. ಕಾಂಗ್ರೆಸ್ನಂತೆ ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ. ಅದು ಮುಕ್ತಾಯವಾಗಬೇಕು.
ಬಿಜೆಪಿ ತೊರೆದಿದ್ದರ ಬಗ್ಗೆ, ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರ ಬಗ್ಗೆ ನಿಮಗೆ ಬೇಸರ ಉಂಟಾಗಿಲ್ಲವೇ?
ಇಲ್ಲ. ಚುನಾವಣೆಗೆ ನಿಲ್ಲುವ ಮೊದಲೇ ನನಗೆ ಗೊತ್ತಿತ್ತು. ಗೆಲ್ಲಬೇಕು ಎಂಬ ಕಾರಣಕ್ಕಾಗಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದರೆ, ಆಗ ನಾನು ಹೇಳಿದ್ದು ಈಗ ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಬಿಜೆಪಿಯಲ್ಲಿ ಇಲ್ಲ ಇವತ್ತು. ಆದರೆ, ರಕ್ತದ ಕಣ ಕಣದಲ್ಲಿಯೂ ಹಿಂದುತ್ವ ಇದೆ. ಚುನಾವಣೆಗೆ ನಿಲ್ಲುತ್ತೇನೆ ಎಂದು ಗೊತ್ತಾದಾಗ ಅಮಿತ್ ಶಾ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಕಾಂಗ್ರೆಸ್ನವರು ಕರೆದರು. ಅಪ್ಪ-ಮಗನಿಗೆ ಯಾವ ಕ್ಷೇತ್ರ ಬೇಕು ಅದು ಕೊಡುತ್ತೇವೆ ಎಂದರು. ಕಾಂಗ್ರೆಸ್ ಸಿದ್ದಾಂತ ನಮಗೆ ಒಗ್ಗಲ್ಲ. ನಮ್ಮ ಉದ್ದೇಶ ಹಿಂದುತ್ವ. ಇದಕ್ಕೆ ಬೇಡ ಎಂದಿದ್ದು. ಮುಸ್ಲಿಮರನ್ನು ಮೆರೆಸಿ, ಮೆರೆಸಿ ಕಾಂಗ್ರೆಸ್ ಹಾಳಾಗಿದೆ. ಹಿಂದುತ್ವ ಉಳಿಸಲು ಸರಿಯಾದ ಶಕ್ತಿ ಇರುವ ಸಂಘಟನೆಯಾಗಬೇಕು. ಪಕ್ಷದಲ್ಲಿ ವಿವಿಧ ಇಲಾಖೆ ಸಚಿವ, ಉಪಮುಖ್ಯಮಂತ್ರಿ, ಇಷ್ಟೆಲ್ಲಾ ನೀಡಿದ್ದು ಬಿಜೆಪಿ. ನಾನು ಹೊಂದಾಣಿಕೆ ಮಾಡಿಕೊಂಡಿದ್ದರೆ ಒಳ್ಳೆ ಸ್ಥಾನ ಸಿಗುತ್ತಿತ್ತು. ಅದನ್ನು ಮಾಡಲಿಲ್ಲ. ಪಕ್ಷ ತಾಯಿ ಇದ್ದಂತೆ. ಆಕೆಯ ಋಣ ತೀರಿಸಲು ರಾಯಣ್ಣ ಬ್ರಿಗೇಡ್ ಬೇಕಾಗಿದೆ. ಇಡೀ ರಾಜ್ಯದಿಂದ
ಈ ಹಂತದಲ್ಲಿ ಹೊಸ ಸಂಘಟನೆ ಸ್ಥಾಪಿಸುವುದನ್ನು ಬಿಟ್ಟು ಪಕ್ಷಕ್ಕೆ ಬನ್ನಿ ಎಂದು ಬಿಜೆಪಿ ವರಿಷ್ಠರು ಕರೆದರೆ ಏನು ಮಾಡುವಿರಿ?
ಇಲ್ಲವೇ ಇಲ್ಲ. ಯಾವ ಉದ್ದೇಶಕ್ಕಾಗಿ ಸಂಘಟನೆ ಮಾಡುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಸುತ್ತೇನೆ. ನಾನು ತೆಗೆದುಕೊಂಡ ನಿರ್ಧಾರ ಸರಿ ಇದೆ ಎಂದು ಕೇಂದ್ರ ನಾಯಕರನ್ನು ಒಪ್ಪಿಸಿ ಮುಂದಿನ ಹೆಜ್ಜೆ ಇಡುತ್ತೇನೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ.
ಬಿಜೆಪಿಗೆ ವಾಪಸ್ ಕರೆಯುವ ಪ್ರಯತ್ನ ನಡೆಯುತ್ತಿರುವುದು ನಿಜವಲ್ಲವೇ?
ಆ ರೀತಿ ಹೇಳುತ್ತಿದ್ದಾರೆ. ನಾನು ಪ್ರಸ್ತಾಪಿಸಿದ ವಿಷಯಗಳು ಇತ್ಯರ್ಥವಾಗಬೇಕು. ಯಾವ ವಿಚಾರಕ್ಕೆ ಚುನಾವಣೆ ಸ್ಪರ್ಧೆ ಮಾಡಿದೆ ಎನ್ನುವುದು ಚರ್ಚೆಯಾಗಬೇಕು. ನಂತರ ಮುಂದಿನ ನಿರ್ಧಾರ.
ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ದ್ವೇಷ ಹೆಚ್ಚಾಗಿದೆಯೇ?
-ಅವರ ಬಗ್ಗೆ ದ್ವೇಷವೇ ಇಲ್ಲ. ಅವರು ತಮ್ಮ ಸ್ವಾರ್ಥ, ಕುಟುಂಬ ರಾಜಕಾರಣದಿಂದ ಹೊರಬರಬೇಕು. ಹೊಂದಾಣಿಕೆ ರಾಜಕಾರಣದಿಂದ ಹೊರಬರಬೇಕು. ಕುಟುಂಬ ರಾಜಕಾರಣ ಮಾಡಲ್ಲ. ಮಗನನ್ನು ಮುಂದುವರಿಸುವುದಿಲ್ಲ ಎಂದು ಹೇಳಲಿ. ಮಗನಿಗೆ ಟಿಕೆಟ್ ಕೊಡುವುದಾಗಿ ಹೇಳಿದ್ದರು. ಆದರೆ ಏನು ಮಾಡಿದರು. ಕೊನೆ ದಿನ ಚುನಾವಣೆಗೆ ನಿಂತಾಗ ಪಕ್ಷದ ಸಂಘಟನಾ ಕಾರ್ಯದರ್ಶಿ ಮನೆಗೆ ಬಂದಿದ್ದರು. ಸಂಘದ ಮಾತನ್ನು ಮೀರಲ್ಲ. ಇದೊಂದು ಬಾರಿ ಕ್ಷಮಿಸಿ ಎಂದು ಹೇಳಿದೆ. ಒಂದು ಕುಟುಂಬ ಒಂದು ಸೀಟು ಎಂದು ಕೊಡಬಹುದಿತ್ತು. ನಾನು ನಿಲ್ಲುತ್ತಿರಲಿಲ್ಲ. ಮಗ ಆಪೇಕ್ಷೆ ಪಟ್ಟಿದ್ದ. ಯಡಿಯೂರಪ್ಪ ಮೋಸದಿಂದ ಮಗನಿಗೆ ಟಿಕೆಟ್ ಸಿಗಲಿಲ್ಲ.
ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ನ್ಯಾಯಾಲಯ ಸೂಚಿಸಿದೆಯಲ್ಲ?
-ಹಿಂದೆ ನಾನು ಸಚಿವನಾಗಿದ್ದ ವೇಳೆ ಆಪಾದನೆ ಬಂದಿತ್ತು. ಆಗ ನಾನು ರಾಜೀನಾಮೆ ನೀಡುವಂತೆ ಆಗ್ರಹಿಸಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ದೊಡ್ಡ ಮೆರವಣಿಗೆ ಮಾಡಿದರು. ಇವರು ಮೆರವಣಿಗೆ ಮಾಡುವ ಮುಂಚೆನೇ ಆಪಾದನೆ ಬಂದಿದೆ ಎಂಬ ಕಾರಣಕ್ಕಾಗಿ ನಾನು ರಾಜೀನಾಮೆ ನೀಡಿದೆ. ಇಲ್ಲಿ ನನಗೆ ಒಂದು ಕಾನೂನು, ನಿಮಗೆ ಒಂದು ಕಾನೂನಾ? ರಾಜೀನಾಮೆ ಕೊಡು ಎಂದು ಆಗ ಮೆರವಣಿಗೆ ಯಾಕೆ ಮಾಡಿದಿರಿ. ನೀವು ರಾಜೀನಾಮೆ ಕೊಡಿ,. ತನಿಖೆಯಾಗುತ್ತದೆ. ಕ್ಲೀನ್ ಚಿಟ್ ತೆಗೆದುಕೊಂಡು ಬನ್ನಿ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಮಾದರಿಯಾಗಬೇಕು. ಸಂವಿಧಾನಕ್ಕೆ ಬದ್ಧ ಎಂದು ಹೇಳುವವರು ರಾಜೀನಾಮೆ ಕೊಡಲ್ಲ ಎಂದರೆ ಸರಿಯಾದ ಕ್ರಮನಾ? ಹೀಗಾಗಿ ರಾಜೀನಾಮೆ ನೀಡಿ ಮಾದರಿಯಾಗಬೇಕು.