ಜ್ಞಾನೇಂದ್ರ, ಈಶ್ವರಪ್ಪ ಜೊತೆ ಸನಾತನ ಧರ್ಮದ ಚರ್ಚೆಗೆ ಸಿದ್ಧ: ಕಿಮ್ಮನೆ

KannadaprabhaNewsNetwork |  
Published : Dec 08, 2023, 01:45 AM IST

ಸಾರಾಂಶ

ಜ್ಞಾನೇಂದ್ರ, ಈಶ್ವರಪ್ಪ ಜೊತೆ ಸನಾತನ ಧರ್ಮದ ಚರ್ಚೆಗೆ ಸಿದ್ಧ: ಕಿಮ್ಮನೆ

ಮನುಷ್ಯ ವಿರೋಧಿ ವಿಚಾರ ಸರಿಪಡಿಸಲು ಆರೆಸ್ಸೆಸ್‌ ಪ್ರಯತ್ನ ಮಾಡಿಲ್ಲ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸನಾತನ ಧರ್ಮದಲ್ಲಿನ ಮನುಷ್ಯ ವಿರೋಧಿ ವಿಚಾರ ಸರಿಪಡಿಸಲು ಆರ್‌ಎಸ್ಎಸ್‌ ಯಾವ ಪ್ರಯತ್ನವನ್ನೂ ಮಾಡಿಲ್ಲ. ನಾನು ಹಲವು ಪುಸ್ತಕಗಳನ್ನು ಅಧ್ಯಯನ ಮಾಡಿದ್ದೇನೆ, ಸನಾತನ ಧರ್ಮಕ್ಕೆ ನಿಘಂಟಿನಲ್ಲಿ ಏನು ಅರ್ಥವಿದೆ ಎಂದು ಗಮನಿಸಿದ್ದೇನೆ. ಶಾಸಕ ಆರಗ ಜ್ಞಾನೇಂದ್ರ, ಕೆ.ಎಸ್‌. ಈಶ್ವರಪ್ಪ ಅವರು ಬೇಕಾದರೆ ಬಹಿರಂಗ ಚರ್ಚೆಗೆ ಬರಲಿ ನಾನು ಸಿದ್ಧ ಎಂದು ಮಾಜಿ ಸಚಿವ ಕಿಮ್ಮನೆ ರತ್ಮಾಕರ್‌ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 1925ರಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್‌ ಇದುವರೆಗೂ ಹಿಂದೂ ಧರ್ಮ, ಸನಾತನ ಧರ್ಮದಲ್ಲಿನ ಮನುಷ್ಯ ವಿರೋಧಿ ವಿಚಾರಗಳನ್ನು ಸರಿಪಡಿಸಲು ಪ್ರಯತ್ನವನ್ನೇ ಮಾಡಿಲ್ಲ. ಒಂದೇ ಒಂದು ಕಾರ್ಯಕ್ರಮವನ್ನೂ ರೂಪಿಸಿಲ್ಲ. ಬದಲಾಗಿ ಒಂದು ಧರ್ಮವನ್ನು ಹೀಯಾಳಿಸುವ, ಪ್ರಚೋದಿಸುವ ಕೆಲಸವನ್ನು ಮಾಡಿಕೊಂಡು ಬಂದಿದೆ ಎಂದು ಆರೋಪಿಸಿದರು.

ಈ ದೇಶದಲ್ಲಿ ಸಾಮಾಜಿಕ, ರಾಜಕೀಯ ಬದಲಾವಣೆಗಳು ಆಗಿದ್ದರೆ ಅದು ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ ಮತ್ತು ಕಾಂಗ್ರೆಸ್ ಪಕ್ಷದಿಂದಲೇ ಹೊರತು ಆರ್‌ಎಸ್‌ಎಸ್‌, ಬಿಜೆಪಿಯಿಂದಲ್ಲ. ಮನುಷ್ಯತ್ವ, ಮಾನವೀಯತೆಗಳನ್ನು ಸರಿಪಡಿಸಲು ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವರು ಹೋರಾಡಿ, ಇದು ಸಾಧ್ಯವಾಗದಿದ್ದಾಗ ಬಿಟ್ಟು ಹೊರಹೋಗಿದ್ದಾರೆ. ದಲಿತರು ಶಾಸಕರು ಮತ್ತು ಹಕ್ಕುಗಳನ್ನು ಪಡೆದಿದ್ದರೆ ಅದು ಅಂಬೇಡ್ಕರ್, ಗಾಂಧಿ ಅವರಿಂದ ಹೊರತು ಮನುಸ್ಮೃತಿಯಿಂದಲ್ಲ ಎಂದರು.

ನಾನು ಹಿಂದೂ ದೇವಸ್ಥಾನಗಳಿಗೆ ₹40-50 ಲಕ್ಷ ದುಡ್ಡು ಕೊಟ್ಟಿದ್ದೇನೆ. ಸನಾತನ ಧರ್ಮ ಎಂದು ಮಾತಾನಾಡುವ ಶಾಸಕ ಜ್ಞಾನೇಂದ್ರ ಒಂದೂ ಪೈಸೆ ಕೊಟ್ಟಿಲ್ಲ. ರಾಮಸೇನೆ, ಸಂಸದ ಅನಂತಕುಮಾರ್ ಹೆಗಡೆ ಅವರ ಮೂಲಕ ಮುಸ್ಲಿಂರ ವಿರುದ್ಧ, ಸಂವಿಧಾನದ ವಿರುದ್ಧ ಹೇಳಿಕೆಗಳು ಹೊರಬಿದ್ದಾಗ ಪ್ರಧಾನಮಂತ್ರಿ ಯಾಕೆ ಅದನ್ನು ತಪ್ಪು ಎಂದು ಹೇಳಲಿಲ್ಲ. ಇದು ದೇಶವನ್ನು ನಡೆಸುವ ರೀತಿಯಾ ಎಂದು ಪ್ರಶ್ನಿಸಿದರು.

ಈಗ ಒಂದು ಧರ್ಮವನ್ನು ಬೈಯ್ದು ಚುನಾವಣೆಯನ್ನು ಗೆಲ್ಲಬಹುದು ಎಂಬ ದಾರಿಯನ್ನು ಬಿಜೆಪಿ ಕಂಡುಕೊಂಡಿದೆ. ಆರ್‌ಎಸ್ಎಸ್‌, ಬಿಜೆಪಿ, ರಾಮಸೇನೆ, ಬಜರಂಗದಳ ಎಲ್ಲವೂ ಒಂದೇ ಅಗಿವೆ. ಇವು ಬೇರೆ ಬೇರೆ ಅಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಆದರ್ಶಹುಂಚದಕಟ್ಟೆ ಮತ್ತಿತರರು ಇದ್ದರು.

- - -ನಾನು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ. ನಾನು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಬೇಳೂರು ಗೋಪಾಲಕೃಷ್ಣ ಅವರು ಅಭ್ಯರ್ಥಿಯಾಗುವ ಅಭಿಪ್ರಾಯ ಮಂಡಿಸಿದ್ದಾರೆ. ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಬಿಜೆಪಿಯ ವಿರುದ್ಧ ಸಂಘಟನಾತ್ಮಕವಾಗಿ ಹೋರಾಡುವುದು ಮುಖ್ಯ. ಆದರೆ, ನನ್ನನ್ನೆ ಅಭ್ಯರ್ಥಿಯನ್ನಾಗಿಸುವ ವಿಚಾರ ಪಕ್ಷಕ್ಕೆ ಬಿಟ್ಟಿದ್ದಾಗಿದೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಕೇಂದ್ರದ ತೆರಿಗೆ ಪಾಲು ಏರಿಕೆಯಲ್ಲಿ ರಾಜ್ಯ ನಂ.1
ಸದನದಲ್ಲಿ ಇಂದು, ನಾಳೆ ಜಿ ರಾಮ್‌ ಜಿ ಸಂಗ್ರಾಮ