ಮತಬ್ಯಾಂಕ್‌ಗಾಗಿ ‘ಕೈ’ನಿಂದ ಮುಸ್ಲಿಂರಿಗೆ ಮೀಸಲು: ಮೋದಿ

ಸಾರಾಂಶ

ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದೆ. ಎಸ್ಸಿ, ಎಸ್ಟಿಗಳ ಅನುದಾನ ಮುಸ್ಲಿಮರಿಗೆ ನೀಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಬಾಗಲಕೋಟೆ :  ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ಧರ್ಮಾಧಾರಿತ ಮೀಸಲಾತಿ ಜಾರಿ ಪ್ರಯತ್ನ ನಡೆಯುತ್ತಿದೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯದವರು ಬಿಜೆಪಿ ಜತೆಗಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದೆ. ಎಸ್ಸಿ, ಎಸ್ಟಿಗಳ ಅನುದಾನ ಮುಸ್ಲಿಮರಿಗೆ ನೀಡಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.

ನವನಗರದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನವು ಯಾವತ್ತಿಗೂ ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಕೊಡುವುದಿಲ್ಲ. ಆದರೆ, ಕರ್ನಾಟಕ ಸರ್ಕಾರ ಒಬಿಸಿಗಳ ಮೀಸಲಾತಿಯ ಒಂದು ಭಾಗವನ್ನು ಮುಸ್ಲಿಮರಿಗೆ ನೀಡಲಾಗಿದೆ. ಹಿಂದೆಯೂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಧರ್ಮಾಧಾರಿತ ಮೀಸಲಾತಿ ಜಾರಿಗೆ ತರುವುದಾಗಿ ಕಾಂಗ್ರೆಸ್‌ ಘೋಷಿಸಿತ್ತು. 

ಇಂಥದ್ದೇ ನಿಲುವಿನ ಸುಳಿವು ಅದರ ಈಗಿನ ಪ್ರಣಾಳಿಕೆಯಲ್ಲೂ ಕಾಣಬಹುದು. ಅಲ್ಪಸಂಖ್ಯಾತರ ತುಷ್ಟೀಕರಣದ ಮೂಲಕ ತಮ್ಮವೋಟ್‌ ಬ್ಯಾಂಕ್‌ ಅನ್ನು ಗಟ್ಟಿಮಾಡಿಕೊಳ್ಳಲು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಮೀಸಲಾತಿಯ ಹಕ್ಕನ್ನು ಲೂಟಿ ಮಾಡಲು ಹೊರಟಿದ್ದಾರೆ.

ಆದರೆ, ನಾನು ನಿಮ್ಮ ಹಕ್ಕು, ನಿಮ್ಮಮೀಸಲಾತಿ ರಕ್ಷಣೆಗೆ ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲೆ ಎಂಬ ಗ್ಯಾರಂಟಿ ಕೊಡುತ್ತೇನೆ ಎಂದು ಪ್ರಧಾನಿ ಮೋದಿ ಇದೇ ವೇಳೆ ತಿಳಿಸಿದರು.

Share this article