ನವದೆಹಲಿ: ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ನ ಎಕ್ಸ್ ಖಾತೆಯನ್ನು ಭಾರತದಲ್ಲಿ ಕಾನೂನು ಪ್ರಕ್ರಿಯೆಯ ಭಾಗವಾಗಿ ತಡೆಹಿಡಿಯಲಾಗಿದೆ. ಆದರೆ ಖಾತೆ ನಿರ್ಬಂಧ ಕುರಿತು ಯಾವುದೇ ಕೋರಿಕೆ ಸಲ್ಲಿಸಿರಲಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.
ಭಾರತದಲ್ಲಿ ರಾಯಿಟರ್ಸ್ ಎಕ್ಸ್ ಖಾತೆಗೆ ನಿರ್ಬಂಧ ಸಂಬಂಧ ಪ್ರತಿಕ್ರಯಿಸಿದ ಕೇಂದ್ರ ಸರ್ಕಾರದ ವಕ್ತಾರರು, ‘ ಎಕ್ಸ್ ಖಾತೆಯನ್ನು ತಡೆ ಹಿಡಿಯಲು ಭಾರತ ಸರ್ಕಾರ ಯಾವುದೇ ಕಾನೂನಾತ್ಮಕ ಮನವಿ ಸಲ್ಲಿಸಿರಲಿಲ್ಲ. ಈ ಸಮಸ್ಯೆ ಇತ್ಯರ್ಥಕ್ಕೆ ನಾವು ಎಕ್ಸ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದಿದೆ.
ಇನ್ನು ಮೂಲಗಳ ಪ್ರಕಾರ ಭಾರತ, ಆಪರೇಷನ್ ಸಿಂದೂರ ಸಂದರ್ಭದಲ್ಲಿ ರಾಯಿಟರ್ಸ್ ಸೇರಿದಂತೆ ನೂರಾರು ಎಕ್ಸ್ ಖಾತೆಗಳನ್ನು ನಿರ್ಬಂಧಿಸುವಂತೆ ಕೋರಿ ಎಕ್ಸ್ಗೆ ಮನವಿ ಮಾಡಿದ್ದು, ಅದರ ಭಾಗವಾಗಿ ಎಕ್ಸ್ ಸಂಸ್ಥೆ ತಡವಾಗಿ ಕ್ರಮಕೈಗೊಂಡಿದ್ದು ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ಕ್ಲಿಪ್, ಚಾಕು ಬಳಸಿ ರೈಲ್ವೆ ನಿಲ್ದಾಣದಲ್ಲೇ ವೈದ್ಯರಿಂದ ಹೆರಿಗೆ!
ಝಾನ್ಸಿ( ಯುಪಿ): ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತಿಗೆ ನಿದರ್ಶನವೆನ್ನುವಂತೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸೇನಾ ವೈದ್ಯರೊಬ್ಬರ ರೈಲ್ವೆ ಫ್ಲಾಟ್ಫಾರ್ಮ್ನಲ್ಲಿ ಗರ್ಭಿಣಿಯೊಬ್ಬರಿಗೆ ಹೇರ್ ಕ್ಲಿಪ್ ಹಾಗೂ ಜೇಬಿನಲ್ಲಿಡ ಬಹುದಾದ ಸಣ್ಣ ಚಾಕುವನ್ನು ಬಳಸಿ ತುರ್ತು ಹೆರಿಗೆ ಮಾಡುವ ಮೂಲಕ ಎರಡು ಜೀವಗಳನ್ನು ಉಳಿಸಿದ ಘಟನೆ ನಡೆದಿದೆ.ಪನ್ವೇಲ್ನಿಂದ ಗೋರಕ್ಪುರಕ್ಕೆ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಇದ್ದಕ್ಕಿದ್ದಂತೆ ಹೆರಿಗೆ ನೀವು ಕಾಣಿಸಿಕೊಂಡಿದೆ. ಈ ವೇಳೆ ಅವರು ಝಾನ್ಸಿ ನಿಲ್ದಾಣದಲ್ಲಿ ಇಳಿದಿದ್ದಾರೆ. ಆಕೆಯ ಪರಿಸ್ಥಿತಿ ಗಮನಿಸಿ ರೈಲ್ವೆ ನಿಲ್ದಾಣದ ಸಿಬ್ಬಂದಿ ಸಹಾಯಕ್ಕೆ ಬಂದಿದ್ದಾರೆ.
ಈ ಸಂದರ್ಭ ರೈಲಿಗಾಗಿ ಕಾಯುತ್ತಿದ್ದ ಸೇನಾ ವೈದ್ಯ ಮೇಜರ್ ಡಾ. ರೋಹಿತ್ ಬಚ್ವಾಲಾ ಆಕೆಯ ಪರಿಸ್ಥಿತಿ ಗಮನಿಸಿದ್ದಾರೆ. ಬಳಿಕ ರೈಲ್ವೆ ಸಿಬ್ಬಂದಿಯ ಸಹಾಯದಿಂದ ಫ್ಲಾಟ್ಫಾರ್ಮ್ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಲು ಮುಂದಾದರು, ಅದಕ್ಕೆ ಸರಿಯಾದ ಉಪಕರಣಗಳು ಲಭ್ಯವಿಲ್ಲದಿದ್ದರೂ ಕೂಡ ಕೂದಲಿ ಕ್ಲಿಪ್, ಜೇಬಿನಲ್ಲಿಡಬಹುದಾದ ಸಣ್ಣ ಚಾಕು ಬಳಸಿ ಯಶಸ್ವಿ ಹೆರಿಗೆ ಮಾಡಿಸಿ, ಎರಡು ಜೀವ ಉಳಿಸಿದ್ದಾರೆ. ಬಳಿಕ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ವಿದ್ಯಾರ್ಥಿಗಳ ಜತೆ ನಾಳೆ
ಐಎಸ್ಎಸ್ನಿಂದ ಮತ್ತೆ
ಶುಭಾಂಶು ಶುಕ್ಲಾ ಸಂವಾದ
ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಜು.8ರ ಮಂಗಳವಾರದಂದು ಅಂತರಿಕ್ಷ ನಿಲ್ದಾಣದಿಂದಲೇ ಮೇಘಾಲಯದ ಶಿಲ್ಲಾಂಗ್ನಲ್ಲಿರುವ ಇಸ್ರೋದ ಈಶಾನ್ಯ ಬಾಹ್ಯಾಕಾಶ ಅನ್ವಯಿಕ ಕೇಂದ್ರ (ಎನ್ಇಎಸ್ಸಿ)ದಲ್ಲಿ ವಿದ್ಯಾರ್ಥಿಗಳ ಜೊತೆ ಹ್ಯಾಮ್ ರೇಡಿಯೋ ಮೂಲಕ ಸಂವಾದ ನಡೆಸಲಿದ್ದಾರೆ. ಎನ್ಇಎಸ್ಸಿನಲ್ಲಿ ಸ್ಥಾಪಿಸಲಾದ ಟೆಲಿಬ್ರಿಡ್ಜ್ ಮೂಲಕ ಈ ಸಂವಾದವನ್ನು ಅಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹವ್ಯಾಸಿ ರೇಡಿಯೊ( ಎಆರ್ಐಎಸ್ಎಸ್)ಹೇಳಿದೆ. ಶುಕ್ರವಾರವಷ್ಟೇ ಶುಭಾಂಶು ಶುಕ್ಲಾ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ್ದರು.
ಸಂಘರ್ಷದಿಂದ ಯಾವುದೇ
ಸಮಯದಲ್ಲಿ ಬೇಕಿದ್ದರೂ
ವಿಶ್ವಯುದ್ಧ : ಗಡ್ಕರಿ
ನಾಗ್ಪುರ: ಮಹಾಶಕ್ತಿಗಳ ಸರ್ವಾಧಿಕಾರ ಮತ್ತು ನಿರಂಕುಶವಾದದಿಂದಾಗಿ ಸಮನ್ವಯ, ಸಾಮರಸ್ಯ ಮತ್ತು ಪ್ರೀತಿ ಕಣ್ಮರೆಯಾಗುತ್ತಿದ್ದು, ಪ್ರಪಂಚದಾದ್ಯಂತ ಸಂಘರ್ಷದ ವಾತಾವರಣವಿದೆ. ಇದು ಯಾವುದೇ ಸಮಯದಲ್ಲಿಯೂ ಮಹಾಯುದ್ಧಕ್ಕೆ ಕಾರಣವಾಗಬಹುದು’ ಎಂದು ಕೇಂದ್ರ ಸಚಿವ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಭಾನುವಾರ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ರಷ್ಯಾ- ಉಕ್ರೇನ್, ಇಸ್ರೇಲ್ - ಇರಾನ್ ಯುದ್ಧವನ್ನು ಉಲ್ಲೇಖಿಸಿ ಮಾತನಾಡಿದ ಅವರು ‘ಈ ಸಂಘರ್ಷಗಳು ಯಾವುದೇ ಸಮಯದಲ್ಲಿ ಮಹಾಯುದ್ಧ ಪ್ರಾರಂಭವಾಗುವ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ. ಈ ತಾಂತ್ರಿಕ ಪ್ರಗತಿಗಳು ಮನುಷ್ಯರನ್ನು ರಕ್ಷಿಸುವುದನ್ನು ಕಠಿಣಗೊಳಿ ಸುತ್ತದೆ ’ ಎಂದು ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಅವರು ಭಾರತವು ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡುತ್ತಿರುವ ಬುದ್ಧನ ಭೂಮಿ ಎಂದು ಶ್ಲಾಘಿಸಿದರು.