ಶ್ರೀಮಂತರು ಗ್ಯಾರಂಟಿ ಸೌಲಭ್ಯ ಕೈಬಿಡಿ: ಎಂಬಿಪಾ - ಮಾತು ತಪ್ಪಿದ ಸರ್ಕಾರ: ಅಶೋಕ್‌ ಕಿಡಿ

Published : Mar 03, 2026, 06:31 AM IST
Minister MB Patil

ಸಾರಾಂಶ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಶ್ರೀಮಂತರು ಕೈಬಿಡಬೇಕು. ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಕೊಡಬೇಕು ಎಂದು ಸಚಿವ ಎಂ.ಬಿ.ಪಾಟೀಲ ಪುನರುಚ್ಚರಿಸಿದ್ದಾರೆ.

  ವಿಜಯಪುರ :  ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಶ್ರೀಮಂತರು ಕೈಬಿಡಬೇಕು. ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಕೊಡಬೇಕು ಎಂದು ಸಚಿವ ಎಂ.ಬಿ.ಪಾಟೀಲ ಪುನರುಚ್ಚರಿಸಿದ್ದಾರೆ.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಬ್ರೇಕ್ ಹಾಕುವ ವಿಚಾರಕ್ಕೆ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಗ್ಯಾರಂಟಿಗಳನ್ನು ಕೊಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಉಳ್ಳವರು ಶಿವಾಲಯ ಕಟ್ಟುವರಯ್ಯ ಎಂದು ಬಸವಣ್ಣನವರು ಹೇಳಿಲ್ಲವೇ? ಹಾಗೇ ಉಳ್ಳುವರು ಏಕೆ ಸರ್ಕಾರಿ ಸೌಲಭ್ಯ ತೆಗೆದುಕೊಳ್ಳಬೇಕು?. ಬಡವರು ಈ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.

ಗ್ಯಾರಂಟಿಗಳನ್ನು ಎಂ.ಬಿ.ಪಾಟೀಲಗೆ ಏಕೆ ಕೊಡಬೇಕು? ಯಾರು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೋ ಅವರು ತೆಗೆದುಕೊಳ್ಳಲಿ. ಶ್ರೀಮಂತರು ಏಕೆ ತೆಗೆದುಕೊಳ್ಳಬೇಕು? ಬಿಜೆಪಿಯವರು ಶ್ರೀಮಂತರು ತೆಗೆದುಕೊಳ್ಳಿ ಎನ್ನುತ್ತಾರಾ?. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬೇಕಂತಾ? ವಿಪಕ್ಷ ನಾಯಕ ಆರ್‌.ಅಶೋಕ್‌ ಅವರಿಗೆ ಬೇಕಂತಾ? ಎಂದು ಸಚಿವರು ಲೇವಡಿ ಮಾಡಿದರು.

ವೈಯಕ್ತಿಕ ಅಭಿಪ್ರಾಯ:

ಗ್ಯಾರಂಟಿ ಯೋಜನೆಗಳನ್ನು ಬಡವರು ಮಾತ್ರ ತೆಗೆದುಕೊಳ್ಳಬೇಕು, ಶ್ರೀಮಂತರು ತೆಗೆದುಕೊಳ್ಳಬಾರದು. ಶ್ರೀಮಂತರು ಅದನ್ನು ಬಿಟ್ಟುಕೊಡಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ರಾಜ್ಯ ಸರ್ಕಾರದ ಮುಂದೆ ಇಂತಹ ಯಾವುದೇ ಪ್ರಸ್ತಾವನೆಗಳು ಇಲ್ಲ. ಈಗ ನನಗೆ ₹2000 ಬೇಕಾ?. ಒಟ್ಟಿನಲ್ಲಿ ಈ ಗ್ಯಾರಂಟಿ ಯೋಜನೆಗಳು ಬಡವರಿಗೆ ಸಿಗಬೇಕು. ಶ್ರೀಮಂತರಿಗೆ ಸಿಗಬಾರದು ಎಂದು ಸಚಿವರು ಹೇಳಿದರು.

ಗ್ಯಾರಂಟಿ ವಿಚಾರದಲ್ಲಿ ಮಾತು ತಪ್ಪಿದ ಸರ್ಕಾರ: ಅಶೋಕ್‌ ಕಿಡಿ

 ಬೆಂಗಳೂರು :  ಎಲ್ಲರಿಗೂ ಗ್ಯಾರಂಟಿ ಕೊಡುವುದಾಗಿ ಹೇಳಿ ಈಗ ಶ್ರೀಮಂತರು ಗ್ಯಾರಂಟಿ ಬಿಟ್ಟು ಕೊಡಬೇಕು ಎನ್ನುವ ಮೂಲಕ ಜನತೆಗೆ ಕೊಟ್ಟ ಮಾತು ತಪ್ಪುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್‌ ಅವರ ಶ್ರೀಮಂತರು ಗ್ಯಾರಂಟಿ ಬಿಟ್ಟು ಕೊಡುವ ಹೇಳಿಕೆಗೆ ಕಿಡಿಕಾರಿದರು.

ಗ್ಯಾರಂಟಿ ಘೋಷಣೆ ಮಾಡುವಾಗ ಕಾಕಾ ಪಾಟೀಲ್‌, ಮಹದೇವಪ್ಪ ಎಲ್ಲರಿಗೂ ಫ್ರೀ ಎಂದು ಏಕೆ ಹೇಳಬೇಕಿತ್ತು? ಎಲ್ಲರಿಗೂ ಫ್ರೀ ಎಂದು ಹೇಳಿ ಈಗ ಕಟ್‌ ಮಾಡುತ್ತಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಶ್ರೀಮಂತರು ಬಿಟ್ಟು ಕೊಡಿ ಎನ್ನುತ್ತಿದ್ದಾರೆ. ಆಗ ಎಲ್ಲರಿಗೂ ಫ್ರೀ ಎಂದು ಹೇಳುವಾಗ ಜ್ಞಾನ ಇರಲಿಲ್ಲವಾ? ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಸಮರ್ಥವಾಗಿ ಮಂಡಿಸಲಾಗುವುದು. ರಾಜ್ಯದ ಆರ್ಥಿಕ ದುಸ್ಥಿತಿ ವಿರುದ್ಧ ಹೋರಾಟ ಮಾಡಲಾಗುವುದು. ಕಾಂಗ್ರೆಸ್‌ ಒಡೆದ ಮನೆಯಾಗಿದ್ದು, ಶಾಸಕರು ಬೀದಿಯಲ್ಲಿ ನಿಂತು ಧಮಕಿ ಹಾಕುತ್ತಿದ್ದಾರೆ. ಕಾಂಗ್ರೆಸ್‌ ಆಡಳಿತಾವಧಿ ಮುಗಿಯುತ್ತಾ ಬಂದಿದೆ. ರಾಜ್ಯ ಸರ್ಕಾರ 3.50 ಲಕ್ಷ ಕೋಟಿ ರು. ಸಾಲ ಮಾಡಿದೆ. ಹಿಂದಿನ ಎಲ್ಲ ಮುಖ್ಯಮಂತ್ರಿಗಳನ್ನು ಮೀರಿ ಸಿದ್ದರಾಮಯ್ಯ ಸಾಲ ಮಾಡಿದ್ದು, ಅವಧಿ ಮುಗಿಯುವ ವೇಳೆಗೆ ಸಾಲದ ಪ್ರಮಾಣ 6 ಲಕ್ಷ ಕೋಟಿ ರು.ಗೆ ಹೋಗಲಿದೆ. ಪ್ರತಿ ವ್ಯಕ್ತಿ ಮೇಲೆ ಒಂದು ಲಕ್ಷ ರು. ಸಾಲ ಇರಲಿದೆ. ಇಂಥ ಆರ್ಥಿಕ ದುಸ್ಥಿತಿ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದರು.

ಆಗಲೇ ಏಕೆ ಪ್ರಶ್ನಿಸಲಿಲ್ಲ?:

ಚುನಾವಣಾ ಪ್ರಣಾಳಿಕೆಯಲ್ಲಿ ಯಾವುದನ್ನೂ ಕಾಂಗ್ರೆಸ್‌ ಈಡೇರಿಸಿಲ್ಲ. ಗುತ್ತಿಗೆದಾರರಿಗೆ 37 ಸಾವಿರ ಕೋಟಿ ರು. ಬಾಕಿ ಕೊಡುವ ಬದಲು ಹಿಂದಿನ ಬಿಜೆಪಿ ಬಾಕಿ ಉಳಿಸಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೋವಿಡ್‌ ನಂತರ ಬೊಮ್ಮಾಯಿ ಕೊರತೆ ಇಲ್ಲದ ಬಜೆಟ್‌ ಮಂಡಿಸಿದ್ದರು. ಅದನ್ನು ಸಿದ್ದರಾಮಯ್ಯ ಮುಂದುವರೆಸಬೇಕಿತ್ತು. ಆಗ ಪ್ರಶ್ನಿಸದೆ ಈಗ ಆರೋಪ ಮಾಡುತ್ತಿದ್ದಾರೆ ಎಂದು ಅಶೋಕ್‌ ಕಿಡಿಕಾರಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬೆಂಗಳೂರು ನಗರದ ಬಿಜೆಪಿಯ ಮೂರು ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ
28 ಪ್ರಮುಖ ಮುಖಂಡರೊಂದಿಗೆ ಸುದೀರ್ಘ ಮಾತುಕತೆ : ಎಚ್‌.ಡಿ.ಕುಮಾರಸ್ವಾಮಿ ಮಹತ್ವದ ಸೂಚನೆ