ಸಂಪುಟ ಪುನಾರಚನೆಗೆ ಹೆಚ್ಚಿದ ಶಾಸಕರ ಒತ್ತಡ

Published : Mar 18, 2026, 06:16 AM IST
vidhan soudha

ಸಾರಾಂಶ

ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚುತ್ತಿದ್ದು, ಮೂರಕ್ಕಿಂತ ಹೆಚ್ಚಿನ ಬಾರಿ ಶಾಸಕರಾಗಿರುವ 20ಕ್ಕೂ ಹೆಚ್ಚಿನ ಶಾಸಕರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವ ಸಂಪುಟ ಪುನಾರಚಿಸಿ ಸಂಪುಟದಲ್ಲಿ ತಮಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

  ಬೆಂಗಳೂರು :  ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚುತ್ತಿದ್ದು, ಮೂರಕ್ಕಿಂತ ಹೆಚ್ಚಿನ ಬಾರಿ ಶಾಸಕರಾಗಿರುವ 20ಕ್ಕೂ ಹೆಚ್ಚಿನ ಶಾಸಕರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವ ಸಂಪುಟ ಪುನಾರಚಿಸಿ ಸಂಪುಟದಲ್ಲಿ ತಮಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ತಮಗೂ ಅವಕಾಶ ನೀಡುವಂತೆ ಹೈಕಮಾಂಡ್‌ ನಾಯಕರಿಗೆ ಪತ್ರ

ಕೆಲ ದಿನಗಳ ಹಿಂದಷ್ಟೇ ಮೊದಲ ಬಾರಿ ಶಾಸಕರಾಗಿರುವವರು ಸಚಿವ ಸಂಪುಟ ಪುನಾರಚನೆ ಮಾಡಿ, ತಮಗೂ ಅವಕಾಶ ನೀಡುವಂತೆ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದಿದ್ದರು. ಅದರ ಜತೆಗೆ ಹಿರಿಯ ಶಾಸಕರು ಪ್ರತ್ಯೇಕ ಸಭೆ ನಡೆಸಿ ಸಚಿವ ಸಂಪುಟ ವಿಸ್ತರಣೆಗೆ ಆಗ್ರಹಿಸಲು ನಿರ್ಧರಿಸಿದ್ದರು. ಆ ಸಂಬಂಧ 20ಕ್ಕೂ ಹೆಚ್ಚಿನ ಹಿರಿಯ ಶಾಸಕರು ಮಂಗಳವಾರ ವಿಧಾನಸೌಧದ ಮುಖ್ಯಮಂತ್ರಿ ಅವರ ಕಚೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವ ಸಂಪುಟ ಪುನಾರಚನೆಗೆ ಒತ್ತಾಯಿಸಿದ್ದಾರೆ.

ಶಾಸಕರ ಮನವಿ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಚುನಾವಣೆ ಬಳಿಕ ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುತ್ತೇನೆ. ಆಗ ಸಂಪುಟ ಪುನಾರಚನೆಗ ಕುರಿತು ಹೈಕಮಾಂಡ್ ನೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು’ ಎಂದು ಮೂಲಗಳು ಹೇಳಿವೆ.

ಆಗ ಶಾಸಕರು, ಸಚಿವ ಸಂಪುಟ ಪುನಾರಚನೆ ಮತ್ತು ಸಚಿವ ಸ್ಥಾನಕ್ಕೆ ಮನವಿ ಸಲ್ಲಿಸಲು ಏ. 11ರಂದು ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದ್ದು, ಅದಕ್ಕೆ ಅದಕ್ಕೆ ಸಿದ್ದರಾಮಯ್ಯ ಅವರು, ‘ಹೈಕಮಾಂಡ್‌ ನಾಯಕರನ್ನು ಭೇಟಿಯಾಗುವುದು ನಿಮ್ಮ ಹಕ್ಕು. ಅದನ್ನು ಬೇಡ ಎನ್ನುವುದಿಲ್ಲ. ನೀವು ಹೈಕಮಾಂಡ್‌ ನಾಯಕರಿಗೆ ತಿಳಿಸಿ. ನಾನೂ ನಿಮ್ಮ ಬೇಡಿಕೆಯನ್ನು ಹೇಳುತ್ತೇನೆ’ ಎಂದು ಶಾಸಕರಿಗೆ ತಿಳಿಸಿದರು ಎನ್ನುತ್ತವೆ ಮೂಲಗಳು.

ಹಿರಿಯ ಶಾಸಕರಾದ ಅಪ್ಪಾಜಿ ನಾಡಗೌಡ, ಅಶೋಕ್ ಪಟ್ಟಣ್, ಸಿ.ಎನ್. ಬಾಲಕೃಷ್ಣ, ಎನ್‌.ಎ. ಹ್ಯಾರಿಸ್‌, ಶಾಂತನಗೌಡ, ಷಡಕ್ಷರಿ, ವೈ.ಎ. ನಾರಾಯಣಸ್ವಾಮಿ, ಎಂ.ವೈ. ಪಾಟೀಲ್‌, ರಘು ಮೂರ್ತಿ, ಮಹಾಂತೇಶ್‌ ಕೌಜಲಗಿ ಸೇರಿದಂತೆ 20ಕ್ಕೂ ಹೆಚ್ಚಿನ ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿದ್ದರು.

ಮೊದಲ ಬಾರಿ ಶಾಸಕರ ಸಭೆ

ಹಿರಿಯ ಶಾಸಕರ ಬೇಡಿಕೆಯ ನಡುವೆಯೇ ಮೊದಲ ಬಾರಿ ಶಾಸಕರಾಗಿರುವವರು ಮಂಗಳವಾರ ಸಂಜೆ ಸಭೆ ನಡೆಸಿ ಸಂಪುಟ ಪುನಾರಚನೆ ಸೇರಿದಂತೆ ಇನ್ನಿತರ ವಿಚಾರಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ. ಶಾಸಕ ಶರತ್‌ ಬಚ್ಚೇಗೌಡ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸಂಪುಟ ಪುನಾರಚನೆ ವೇಳೆ ತಮ್ಮನ್ನು ಪರಿಗಣಿಸುವಂತೆ ಹೈಕಮಾಂಡ್‌ ನಾಯಕರ ಮೇಲೆ ಒತ್ತಡ ಹೇರುವ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬೆಂಗಳೂರು ನಗರದ ಅಭಿವೃದ್ಧಿಗೆ ಅನುದಾನವಿಲ್ಲ: ಸರ್ಕಾರದ ವಿರುದ್ಧ ಬಿಜೆಪಿ ಶಾಸಕರ ಆಕ್ರೋಶ
ದಶಕಗಳಲ್ಲೇ ಅಪರೂಪದ ಘಟನೆ ಸ್ಪೀಕರ್‌ ಖಾದರ್‌ ಎದ್ದು ಹೋದರ್‌!