ಕನ್ನಡಪ್ರಭ ವಾರ್ತೆ ಪಾವಗಡ
ಕಾಲೇಜ್ ಹಾಸ್ಟ್ಲ್ವೊಂದರ ನಿಲಯಪಾಲಕರೊಬ್ಬರ ಅನುಚಿತ ವರ್ತನೆ ಹಾಗೂ ವೇತನ ವಿಳಂಬ ಕುರಿತು ಹೊರಗುತ್ತಿಗೆಯ ಅಡುಗೆ ಸಹಾಯಕಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.
ದಲಿತ ಮಹಿಳೆಯ ದೂರಿನ ಹಿನ್ನೆಲೆ ಕ್ರಮವಹಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಘಟನೆ ಕುರಿತು ತನಿಖೆ ನಡೆಸಿ ಸಮಗ್ರ ಮಾಹಿತಿ ನೀಡುವಂತೆ ತಾ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಆದೇಶಿಸಿದ್ದರು. ಈ ಬೆನ್ನಲ್ಲೆ , ವಿವಾದಿತ ಹಾಸ್ಟಲ್ಗೆ ಭೇಟಿ ನೀಡಿ, ಘಟನೆ ಕುರಿತು ನಿಲಯಪಾಲಕ ಹಾಗೂ ಅಡಿಗೆ ಸಹಾಯಕಿಯಿಂದ ಮಾಹಿತಿ ಸಂಗ್ರಹಿಸಲಾಯಿತು.ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ಹಾಗೂ ಮೆನುಪ್ರಕಾರ ಊಟ ತಿಂಡಿ ಇತರೆ ಸೌಲಭ್ಯ ಕುರಿತು ವಿದ್ಯಾರ್ಥಿಗಳಿಂದ ವಿವರ ಪಡೆದಿದ್ದು, ಅಡಿಗೆ ಸಹಾಯಕಿಯ ದೂರಿನ ಬಗ್ಗೆ ಸ್ಪಷ್ಟತೆ ನೀಡುವಂತೆ ಅಲ್ಲಿನ ಹಾಸ್ಟಲ್ ನಿಲಯಪಾಲಕರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.
ಅಡುಗೆ ಸಹಾಯಕರಿಗೆ ಕಿರುಕುಳ ಹಾಗೂ ಸಮಸ್ಯೆ ಇದ್ದರೆ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಸಮಿತಿಗೆ ದೂರು ಸಲ್ಲಿಸಲು ಅವಕಾಶವಿದ್ದರೂ ಅವರು ನೇರವಾಗಿ ಜಿಲ್ಲಾ ಜಂಟಿ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮವಹಿಸಿರುವುದಾಗಿ ತಾ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.
ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಹಾಸ್ಟಲ್ಗಳಿಗೆ ಮೇಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆ ನಿವಾರಿಸುವ ಮೂಲಕ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಪ್ರಗತಿಗೆ ಸಹಕರಿಸುವಂತೆ ಆನೇಕ ಮಂದಿ ನಾಗರಿಕರು ಮನವಿ ಮಾಡಿದ್ದಾರೆ.