''ಇನ್ನು ಐದು ತಿಂಗಳಲ್ಲಿ ರಾಜ್ಯ ಸರ್ಕಾರ ಪತನ : ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಭವಿಷ್ಯ ಇಲ್ಲ- ನಾರಾಯಣಸ್ವಾಮಿ''

KannadaprabhaNewsNetwork | Updated : Nov 18 2024, 04:31 AM IST

ಸಾರಾಂಶ

ಹಗರಣಗಳನ್ನು ಖಂಡಿಸಿ ರಾಜ್ಯ ಬಿಜೆಪಿ ಪಕ್ಷದಿಂದ ರಾಜ್ಯದ್ಯಂತ ಹೋರಾಟ ನಡೆಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

 ಮುಳಬಾಗಿಲು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರುವ ಮುಡಾ ಹಗರಣ ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಹಲವಾರು ಹಗರಣಗಳನ್ನು ಖಂಡಿಸಿ ರಾಜ್ಯ ಬಿಜೆಪಿ ಪಕ್ಷದಿಂದ ರಾಜ್ಯದ್ಯಂತ ಹೋರಾಟ ನಡೆಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಆದ ನನ್ನನ್ನು ಮೂರು ತಂಡಗಳಿಗೆ ಅಧ್ಯಕ್ಷರನ್ನಾಗಿ ಮಾಡಿದೆ  

ರಾತ್ರೋರಾತ್ರಿ ಸೈಟ್‌ ವಾಪಸ್‌

ಮೈಸೂರಿನಲ್ಲಿ 14 ಸೈಟ್‌ಗಳನ್ನು ರಾತ್ರೋರಾತ್ರಿ ವಾಪಾಸ್ ನೀಡಿದ್ದಾರೆ ಕಳ್ಳ ಯಾರು ಎಂಬುದು ಗೊತ್ತಾಗಿದೆ ಇದರಿಂದ ತಪ್ಪಿಸಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳುಗಳನ್ನು ಹೇಳುವುದನ್ನೇ ಕರಗತ ಮಾಡಿಕೊಂಡಿದ್ದು, ರಾಜ್ಯದ ಜನತೆ ಇದನ್ನು ಅರ್ಥ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಭವಿಷ್ಯ ಇಲ್ಲ. ಹಲವಾರು ಹಗರಣಗಳಿಂದ ಕೂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಅವಧಿ ಪೂರೈಸುವುದು ಸಂಶಯವಾಗಿದ್ದು ಐದು ತಿಂಗಳ ಒಳಗೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಮಂಗನಂತೆ ವರ್ತಿಸುವ ಜಮೀರ್‌

ವರ್ಕ್ಪ್ ಬೋರ್ಡ್ ರಾಜ್ಯಾದ್ಯಂತ ರೈತರ ಜಮೀನುಗಳನ್ನು ಕಬಳಿಸಲು ಹುನ್ನಾರ ಮಾಡಿದ್ದು, ಸಚಿವ ಜಮೀರ್ ಅಹ್ಮದ್ ಹೆಂಡ ಕುಡಿದ ಮಂಗನಂತೆ ವರ್ತಿಸುತ್ತಿದ್ದಾರೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಟ್ರೋಲ್‌ನಲ್ಲಿ ಇದ್ದರಾ ಅಥವಾ ಮುಖ್ಯಮಂತ್ರಿಯೇ ಅವರು ಈ ರೀತಿ ವರ್ತಿಸಲು ಬಿಟ್ಟಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದರು.ಈ ಹಿಂದೆ ಬಿಜೆಪಿ ಸರ್ಕಾರ ೪೦ ಪರ್ಸೆಂಟ್ ಕಮಿಷನ್ ಪಡೆದಿದೆ ಎಂದು ಈಗಿನ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತಗೆ ದೂರು ಸಲ್ಲಿಸಿದ್ದು, ತನಿಖೆಯಲ್ಲಿ ೪೦% ಕಮಿಷನ್ ಪಡೆದಿಲ್ಲ ಎಂದು ಆದೇಶ ಹೊರ ಬಿದ್ದಿರುವುದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿದೆ ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲವೇ ಇಲ್ಲ ಬರೀ ಸುಳ್ಳುಗಳನ್ನ ಹೇಳುವುದೇ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಕರಗತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಾರ್ಖಂಡ್‌ನಲ್ಲಿ ಸುಳ್ಳು ಪ್ರಚಾರ

ಜಾರ್ಖಂಡ್ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ೧೦ ಗ್ಯಾರಂಟಿಗಳನ್ನು ಜಾರಿಗೆ ತಂದಿರುವುದಾಗಿ ಪ್ರಚಾರ ಮಾಡಿ ಸುಳ್ಳು ಹೇಳಿರುವುದು ಜಗತ್ ಜಾಹಿರಾತು ಆಗಿದೆ ಎಂದು ಟೀಕಿಸಿದ ಅವರು, ರಾಜ್ಯದ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಭುಗುಲೆದಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಭವಿಷ್ಯ ಇರುವುದಿಲ್ಲ ಎಂದರಲ್ಲದೆ, ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಧ್ವನಿ ಎತ್ತುವ ಜೊತೆಗೆ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಹೋರಾಟ ನಡೆಸುವುದಾಗಿ ತಿಳಿಸಿದರು.ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನಂಗಲಿ ಟೋಲ್ ಗೇಟ್ ಬಳಿ ದಲಿತರ ಜಮೀನನ್ನು ಬಲಾಡ್ಯರು ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಕಬ್ಬಳಿಸಿರುವ ಬಗ್ಗೆ ಕೋಲಾರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯ ಕೊಡಿಸುವುದಾಗಿ ತಿಳಿಸಿದರು.ಸಂತ್ರಸ್ತ ರೈತರಿಂದ ಮನವಿ

ಇದೇ ವೇಳೆ ನಂಗಲಿ ಟೋಲ್ ಗೇಟ್ ಬಳಿ ಜಮೀನು ಕಳೆದುಕೊಂಡಿರುವ ದಲಿತರ ಗುಂಪು ಛಲವಾದಿ ನಾರಾಯಣಸ್ವಾಮಿರಿಗೆ ದಾಖಲೆಗಳ ಸಮೇತ ನೀಡಿ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.ಜಿಪಂ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಮುಳಬಾಗಿಲು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಮೈಸೂರು ಸುರೇಶ್ ರಾಜು, ಪ್ರಧಾನ ಕಾರ್ಯದರ್ಶಿ ಮಲ್ಲೇಕೊಪ್ಪ ಸೋಮಶೇಖರ್, ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜೆ.ಮೋಹನ್, ಮುಖಂಡರಾದ ಮುನಿರಾಜು, ನಂಗಲಿ ವಿಶ್ವನಾಥ ರೆಡ್ಡಿ, ಆಂಜನೇಯ ಶೆಟ್ಟಿ ಇದ್ದರು.

Share this article