ರಾಜ್ಯದ ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Jul 29, 2025, 01:00 AM ISTUpdated : Jul 29, 2025, 02:42 AM IST
೨೮ಕೆಎಂಎನ್‌ಡಿ-೧, ೨ಮದ್ದೂರು ಹೊರವಲಯದ ಕೆಸ್ತೂರು ಸರ್ಕಲ್‌ನಲ್ಲಿ ಆಯೋಜಿಸಿದ್ದ ಮದ್ದೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎನ್.ಚಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಡಾ.ಹೆಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ರಹೀಂಖಾನ್ ಇತರರಿದ್ದರು. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆ ಅಪರೂಪದ ವಿಶಿಷ್ಟ ಜಿಲ್ಲೆ. ಶಿಕ್ಷಣ, ರಾಜಕೀಯ ಸಾಹಿತ್ಯ, ಕೃಷಿ, ಕಲೆಯಲ್ಲೂ ವಿಶಿಷ್ಟ ಸಾಧನೆ, ಕೊಡುಗೆ. ಮಂಡ್ಯ ಜನ ಒಳ್ಳೆಯ ಮನಸ್ಸಿನವರು. ಉಪಕಾರ ಸ್ಮರಣೆ ಇರುವವರು. ನೋಡಲು ಮಾತ್ರ ಹೊರಗೆ ಒರಟು, ಮನಸ್ಸಿನಲ್ಲಿ ತುಂಬಾ ಒಳ್ಳೆಯವರು.

 ಮದ್ದೂರು :  ಸರ್ಕಾರದ ಬಳಿ ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ. ಗ್ಯಾರಂಟಿ ಯೋಜನೆಗಳ ನಡುವೆಯೂ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ರು. ಹಣವನ್ನು ಖರ್ಚು ಮಾಡುತ್ತಿದ್ದೇವೆ. ಇದನ್ನು ಸಹಿಸದ ವಿಪಕ್ಷಗಳು ಸರ್ಕಾರದ ಬಳಿ ದುಡ್ಡಿಲ್ಲವೆಂದು ಸುಳ್ಳು ಹೇಳುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಕೆಸ್ತೂರು ಸರ್ಕಲ್‌ನಲ್ಲಿ ಮದ್ದೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಿರೋಧ ಪಕ್ಷಗಳದ್ದು ಅವರದ್ದು ರಾಜಕೀಯ ಆರೋಪ.

ಅವರು ಎಂದಿಗೂ ಸತ್ಯವನ್ನು ಜನರಿಗೆ ಹೇಳುವ ಪ್ರಯತ್ನ ಮಾಡುವುದಿಲ್ಲ. ಸರ್ಕಾರದ ಬಳಿ ಹಣವಿಲ್ಲದಿದ್ದರೆ 1146 ಕೋಟಿ ರು. ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತಿತ್ತೇ ಎಂದು ಪ್ರಶ್ನಿಸಿದರು.

ಮದ್ದೂರು ಪಟ್ಟಣ ರಸ್ತೆಯನ್ನು ನೂರಡಿ ರಸ್ತೆಯನ್ನಾಗಿ ಪರಿವರ್ತನೆ ಮಾಡುವುದಕ್ಕೆ ಸರ್ಕಾರದಿಂದ ಶೀಘ್ರದಲ್ಲೇ ಅನುಮೋದನೆ ದೊರಕಿಸಿಕೊಡುತ್ತೇನೆ ಎಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅವರಿಗೆ ಅಭಯ ನೀಡಿದರು.

ಮಂಡ್ಯ ಜಿಲ್ಲೆ ಅಪರೂಪದ ವಿಶಿಷ್ಟ ಜಿಲ್ಲೆ. ಶಿಕ್ಷಣ, ರಾಜಕೀಯ ಸಾಹಿತ್ಯ, ಕೃಷಿ, ಕಲೆಯಲ್ಲೂ ವಿಶಿಷ್ಟ ಸಾಧನೆ, ಕೊಡುಗೆ.

ಮಂಡ್ಯ ಜನ ಒಳ್ಳೆಯ ಮನಸ್ಸಿನವರು. ಉಪಕಾರ ಸ್ಮರಣೆ ಇರುವವರು. ನೋಡಲು ಮಾತ್ರ ಹೊರಗೆ ಒರಟು, ಮನಸ್ಸಿನಲ್ಲಿ ತುಂಬಾ ಒಳ್ಳೆಯವರು ಎಂದು ಬಣ್ಣಿಸಿದರು.

ಉದಯ್ ಶಾಸಕರಾಗಿ ಎರಡು ವರ್ಷ ಆಗಿದೆ. ಎರಡು ವರ್ಷದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನು ಕ್ಷೇತ್ರದಲ್ಲಿ ಜಾರಿಗೊಳಿಸಿದ್ದಾರೆ. ಕಾವೇರಿ ನೀರಾವರಿ ನಿಗಮವೊಂದಕ್ಕೆ 565 ಕೋಟಿ ರು. ಹಣ ಕೊಟ್ಟಿದ್ದೇವೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿ ಇದ್ದರು. ಆ ಸಮಯದಲ್ಲಿ ಏನು ಮಾಡಿದೆ ಎಂಬುದರ ಸಾಕ್ಷಿ ಇರಬೇಕಲ್ಲವೇ ಎಂದು ಪ್ರಶ್ನಿಸಿದರು.

ನಾನು ಅಧಿಕಾರಕ್ಕೆ ಬಂದ ನಂತರ ಸ್ಥಗಿತಗೊಂಡಿದ್ದ ಮೈಷುಗರ್ ಕಾರ್ಖಾನೆಗೆ ಚಾಲನೆ ನೀಡಿದೆ. ಪುನಶ್ಚೇತನಕ್ಕೆ 60 ಕೋಟಿ ರು. ನೀಡಿದ್ದೇನೆ. ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ 52 ಕೋಟಿ ರು. ವಿದ್ಯುತ್ ಬಾಕಿಯನ್ನು ಮನ್ನಾ ಮಾಡಿದ್ದೇನೆ. ತೆರಿಗೆ ಪಾವತಿ ಹೊರೆ ಇಳಿಸಿದ್ದೇನೆ ಎಂದರು.

ಮಂಡ್ಯವನ್ನು ಹಲವು ರಾಜಕೀಯ ನಾಯಕರು ಆಳಿದ್ದಾರೆ. ಇಲ್ಲೊಂದು ಕೃಷಿ ವಿವಿ ತೆರೆಯಬೇಕೆಂಬ ಪರಿಕಲ್ಪನೆ ಇರಲಿಲ್ಲ. ಚಲುವರಾಯಸ್ವಾಮಿ ಅವರು ಕೃಷಿ ವಿಶ್ವವಿದ್ಯಾಲಯ ಬೇಕೆಂದಾಗ ಮರುಮಾತನಾಡದೆ ಒಪ್ಪಿಗೆ ಕೊಟ್ಟೆ. ಬಜೆಟ್‌ನಲ್ಲಿ 25 ರು. ಹಣವನ್ನು ಮೀಸಲಿಟ್ಟಿದ್ದೇನೆ. ಶೀಘ್ರದಲ್ಲೇ ತರಗತಿಗಳು ಆರಂಭಗೊಳ್ಳಲಿವೆ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎನ್.ಚಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಡಾ.ಎಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ರಹೀಂಖಾನ್, ಕೆ.ವೆಂಕಟೇಶ್, ಶಾಸಕರಾದ ಕೆ.ಎಂ.ಉದಯ್, ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಡಾ ಅಧ್ಯಕ್ಷ ನಹೀಂ, ಸೋಮನಹಳ್ಳಿ ಗ್ರಾಪಂ ಅಧ್ಯಕ್ಷೆ ಗಾಯಿತ್ರಿ, ಇತರರಿದ್ದರು.

ಎಲ್ಲ ಸರ್ಕಾರಗಳಿಗಿಂತ ನಾಲ್ವಡಿ ಕೊಡುಗೆ ದೊಡ್ಡದು: ಚಲುವರಾಯಸ್ವಾಮಿ

 ಮದ್ದೂರು :  ಸ್ವಾತಂತ್ರ್ಯ ಬಂದಾಗಿನಿಂದ ಹಲವು ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಆದರೆ, ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಲ್ಲಾ ಸರ್ಕಾರಗಳಿಂತ ಅಧಿಕ ಕೊಡುಗೆ ಕೊಟ್ಟಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. 

ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಸಮಾರಂಭದಲ್ಲಿ ಮಾತನಾಡಿ, ಕಳೆದ ಸರ್ಕಾರ ಹಾಗೂ ಇಂದಿನ ಸರ್ಕಾರವನ್ನು ಜನರು ಹೋಲಿಕೆ ಮಾಡಬೇಕು. ಯಾವ ಸರ್ಕಾರ ಅಭಿವೃದ್ಧಿ ಮಾಡಿದೆ, ಯಾರು ಜನಪರವಾಗಿ ಕೆಲಸ ಮಾಡಿದ್ದಾರೆ ಎಂದು ತಾಳೆ ಹಾಕಿ ನೋಡಬೇಕು. ಅಭಿವೃದ್ಧಿ ಪರ ಇರುವವರನ್ನು ಬೆಂಬಲಿಸುವಂತೆ ತಿಳಿಸಿದರು.

ಇಡೀ ಮಂಡ್ಯ ಅಭಿವೃದ್ಧಿ ಆಗಬೇಕು ಎನ್ನುವುದು ನಮ್ಮ ಉದ್ದೇಶ. ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಜೆಡಿಎಸ್ ಕ್ಷೇತ್ರವೆಂದು ಕೆ.ಆರ್‌.ಪೇಟೆಗೆ ತಾರತಮ್ಯ ಮಾಡಿಲ್ಲ. ತಮಿಳುನಾಡಿನಲ್ಲಿ ನಿಮ್ಮ ಸ್ನೇಹಿತರಿದ್ದಾರೆ ಅಂತಾರೆ. ಗೋವಾದಲ್ಲಿ ಅವರ ಸ್ನೇಹಿತರೇ ಇದ್ದರೂ ಮಹದಾಯಿ ಸಮಸ್ಯೆ ಪರಿಹರಿಸೋಕೆ ಸಾಧ್ಯವಾಗಿಲ್ಲ ಎಂದು ಛೇಡಿಸಿದರು.

PREV
Read more Articles on

Recommended Stories

ಯಶವಂತಪುರ ಟಿಕೆಟ್‌: ಬಿಎಸ್‌ವೈ ವಿರುದ್ಧ ಜವರಾಯಿಗೌಡ ಆಕ್ರೋಶ
ಖರ್ಗೆ ರಾಜಕೀಯ ಭವಿಷ್ಯ ಅವರೇ ನಿರ್ಧರಿಸ್ತಾರೆ : ಸಚಿವ ಪ್ರಿಯಾಂಕ್‌