ದೇಶಕ್ಕೆ ಬೇಕಿರುವುದು ಶಾಶ್ವತ ಗ್ಯಾರಂಟಿ: ಸುಧಾಕರ್‌

KannadaprabhaNewsNetwork | Updated : Apr 08 2024, 05:40 AM IST

ಬೆಂಗಳೂರಿನಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕುಡಿಯುವ ನೀರನ್ನು ಅವರ ಇಂಡಿ ಕೂಟದ ಪಾಲುದಾರರಾದ ತಮಿಳುನಾಡು ಸರ್ಕಾರಕ್ಕೆ ಬಿಟ್ಟಿದ್ದಾರೆ. ಕೋವಿಡ್‌ ಸಮಯದಲ್ಲಿ ಮೇಕೆದಾಟು ಪಾದಯಾತ್ರೆ ಮಾಡಿ ಈಗ ಆ ಯೋಜನೆಯ ಬಗ್ಗೆ ಮಾತಾಡುತ್ತಿಲ್ಲ

 ಯಲಹಂಕ :  ದೇಶಕ್ಕೆ ತಾತ್ಕಾಲಿಕ ಗ್ಯಾರಂಟಿಗಳು ಬೇಕಿಲ್ಲ. ಶಾಶ್ವತವಾದ ಹಾಗೂ ಬದುಕು ಕಟ್ಟಿಕೊಡುವ ಗ್ಯಾರಂಟಿಗಳು ಬೇಕಾಗಿದೆ ಎಂದು ಚಿಕ್ಕಬಳ್ಳಾಪುರ ಎನ್‌ಡಿಎ ಅಭ್ಯರ್ಥಿ ಡಾ. ಕೆ.ಸುಧಾಕರ್‌ ಹೇಳಿದರು.

ಯಲಹಂಕದಲ್ಲಿ ನಡೆದ ಬಿಜೆಪಿ ಬೂತ್‌ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರೊಂದಿಗೆ ಪಾಲ್ಗೊಂಡು ಅವರು ಮಾತನಾಡಿದರು.

ಶೇ.40 ಭ್ರಷ್ಟಾಚಾರ

ಕಾಂಗ್ರೆಸ್‌ ಸರ್ಕಾರದಲ್ಲೇ ಈಗ ಶೇಕಡ 40 ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ಜನರಿಗೆ ಮನವರಿಕೆ ಮಾಡಬೇಕಿದೆ. ಮೋದಿ ಸರ್ಕಾರ ಯೋಜನೆ ನೀಡುತ್ತಿದ್ದರೆ, ಕಾಂಗ್ರೆಸ್‌ ಅದನ್ನು ಕಿತ್ತುಕೊಳ್ಳುತ್ತಿದೆ. ಕಿಸಾನ್‌ ಸಮ್ಮಾನ್‌, ರೈತ ವಿದ್ಯಾನಿಧಿ, ಹಾಲು ಪ್ರೋತ್ಸಾಹಧನ ಎಲ್ಲವನ್ನೂ ಕಿತ್ತುಕೊಳ್ಳಲಾಗಿದೆ. ಆಯುಷ್ಮಾನ್‌ ಭಾರತ್‌, ಆವಾಸ್‌ ಮೊದಲಾದ ಗ್ಯಾರಂಟಿಗಳನ್ನು ಮೋದಿ ನೀಡಿದ್ದಾರೆ. ಈ ದೇಶದ ಜನರಿಗೆ ಬೇಕಿರುವುದು ಬದುಕು ಕಟ್ಟಿಕೊಡುವ ಗ್ಯಾರಂಟಿಯಾಗಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ನೀಡುತ್ತಿದ್ದಾರೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ದೊಡ್ಡದು. ಯಲಹಂಕ ನನ್ನ ತಾಯಿಯ ಜನ್ಮಸ್ಥಳವಾಗಿದ್ದು, ಯಲಹಂಕದ ಜೊತೆ ನನಗೆ ಭಾವನಾತ್ಮಕ ಸಂಬಂಧ ಇದೆ ಎಂದರು.

ದೇಶಕ್ಕೆ ಮೋದಿ ನಾಯಕತ್ವ ಬೇಕು

ಈ ಚುನಾವಣೆ 140 ಕೋಟಿ ಭಾರತೀಯರನ್ನು ರಕ್ಷಣೆ ಮಾಡುವ ಚುನಾವಣೆ. ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟವಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೇಳಿಬಂದಿದೆ. ಇವರ ಬಗ್ಗೆ ಕಾಂಗ್ರೆಸ್‌ ಸರ್ಕಾರ ಮೃದು ಧೋರಣೆ ತಾಳಿದೆ. ಇಂತಹ ಸ್ಥಿತಿಯಲ್ಲಿ ನಮಗೆ ನರೇಂದ್ರ ಮೋದಿ ನಾಯಕತ್ವ ಬೇಕಿದೆ. ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿ ನಂತರ ಪ್ರಧಾನಿಯಾಗಲು ಹೊರಟಾಗ ಅವರು ಚಾ ಮಾರಾಟ ಮಾಡುವವರು ಎಂದು ಕಾಂಗ್ರೆಸ್‌ ಟೀಕೆ ಮಾಡಿತ್ತು. ಆಗ ಚಾಯ್‌ ಪೇ ಚರ್ಚಾ ಮಾಡಿ ನಮ್ಮ ಕಾರ್ಯಕರ್ತರು ಕಾಂಗ್ರೆಸ್‌ನ ಬಾಯಿ ಮುಚ್ಚಿಸಿದ್ದರು ಎಂದು ನೆನಪಿಸಿಕೊಂಡರು.

ಪ್ರಧಾನಿ ಮೋದಿ ಅವರು ನಾನೇನ್ ದೇಶವನ್ನು ರಕ್ಷಿಸುವ ಚೌಕಿದಾರ ಎಂದು ಹೇಳಿಕೊಂಡರೆ ಕಾಂಗ್ರೆಸ್ ಪಕ್ಷದವರು ಚೌಕಿದಾರ್ ಚೋರ್ ಎಂದರು. ನಂತರ ಜನರು ‘ನಾನೂ ಚೌಕಿದಾರ’ ಎಂದು ಕಾಂಗ್ರೆಸ್‌ಗೆ ಬುದ್ಧಿ ಕಲಿಸಿದ್ದರು. ಈಗ ಮೋದಿಗೆ ಪರಿವಾರ ಇಲ್ಲ ಎಂದರೆ ಎಲ್ಲ ಕಾರ್ಯಕರ್ತರು ನಾವೇ ಅವರ ಕುಟುಂಬ ಎಂದು ಹೆಮ್ಮೆಯಿಂದ ಹೇಳುತ್ತಿದ್ದೇವೆ. ಈ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರೇ ಸೇನಾಧಿಪತಿಗಳಾಗಿದ್ದಾರೆ. 400ರ ಗುರಿಯನ್ನು ಮುಟ್ಟಲು ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಆ 400 ರಲ್ಲಿ ನಾನೂ ಒಬ್ಬನಾಗಿದ್ದೇನೆ. ಈ 400ರಲ್ಲಿ ನಮ್ಮ ರಾಜ್ಯದ ಸಂಸದರು ಇರಬೇಕು ಎಂಬುದನ್ನು ಜನರಿಗೆ ತಿಳಿಸಬೇಕು ಎಂದರು.

ಅಭಿವೃದ್ಧಿ ಇಲ್ಲ, ನೀರಿಲ್ಲಬೆಂಗಳೂರಿನಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕುಡಿಯುವ ನೀರನ್ನು ಅವರ ಇಂಡಿ ಕೂಟದ ಪಾಲುದಾರರಾದ ತಮಿಳುನಾಡು ಸರ್ಕಾರಕ್ಕೆ ಬಿಟ್ಟಿದ್ದಾರೆ. ಕೋವಿಡ್‌ ಸಮಯದಲ್ಲಿ ಮೇಕೆದಾಟು ಪಾದಯಾತ್ರೆ ಮಾಡಿ ಈಗ ಆ ಯೋಜನೆಯ ಬಗ್ಗೆ ಮಾತಾಡುತ್ತಿಲ್ಲ ಎಂದು ಡಾ। ಕೆ.ಸುಧಾಕರ್‌ ಹೇಳಿದರು.

-ಕಾಂಗ್ರೆಸ್‌ನವರು ನಮ್ಮ ಅಭ್ಯರ್ಥಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಹೆಚ್ಚು ಎಚ್ಚರವಾಗಿರಬೇಕು. 46 ವರ್ಷದಿಂದ ಸಂಘಟನೆಯಲ್ಲಿದ್ದು, ಇನ್ನು ಮುಂದೆಯೂ ನಾನು ಉತ್ಸಾಹದಿಂದ ಕೆಲಸ ಮಾಡುತ್ತೇನೆ. ನರೇಂದ್ರ ಮೋದಿ ಅವರನ್ನು ಗೆಲ್ಲಿಸಲು ಒಂದಾಗಿ ಶ್ರಮಿಸೋಣ.

-ಎಸ್‌.ಆರ್‌.ವಿಶ್ವನಾಥ್‌, ಶಾಸಕ.