ದೇಶ ಸುರಕ್ಷತೆಗೆ ಮೋದಿ ಗೆಲ್ಲಿಸಿ: ಸುಧಾಕರ್

KannadaprabhaNewsNetwork | Updated : Apr 25 2024, 04:21 AM IST

ಕಾಂಗ್ರೆಸ್‌ನಿಂದ ಸುಳ್ಳಿನ ಗ್ಯಾರಂಟಿ ಸಿಗುತ್ತದೆ. ದೇಶದ ಭದ್ರತೆಗಾಗಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಹೇಳಿದ್ದಾರೆ.

 ಹೊಸಕೋಟೆ:  ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಬರ ಗ್ಯಾರಂಟಿ, ಭಯೋತ್ಪಾದನೆ ಗ್ಯಾರಂಟಿ, ರೈತರ ಆತ್ಮಹತ್ಯೆಯ ಗ್ಯಾರಂಟಿಗಳನ್ನು ನೀಡಿದೆ. ಆದ್ದರಿಂದ ಇಡೀ ರಾಜ್ಯ ಹಾಗೂ ದೇಶ ಸುರಕ್ಷಿತವಾಗಿರಲು ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಚುನಾವಣಾ ಗಿಮಿಕ್ ಮಾಡುವಲ್ಲಿ ನಿಸ್ಸೀಮರು. ಸೋಲು ಸ್ಪಷ್ಟವಾಗಿ ಕಾಣುತ್ತಿರುವುದರಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಹೇಳಲು ಯಾವುದೇ ಸಾಧನೆ ಇಲ್ಲವಾಗಿ ಚಾರಿತ್ರ್ಯವಧೆ, ತೇಜೋವಧೆ ಮಾಡುತ್ತಿದ್ದಾರೆ.‌ ಜನರು ಇವ್ಯಾವುದಕ್ಕೂ ಕಿವಿಗೊಡಬಾರದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಗ್ಯಾರಂಟಿ, ರೈತರ ಆತ್ಮಹತ್ಯೆಯ ಗ್ಯಾರಂಟಿ, ಭಯೋತ್ಪಾದನೆ ಗ್ಯಾರಂಟಿ, ಖಜಾನೆ ಖಾಲಿ ಗ್ಯಾರಂಟಿ, ಕೋಮುವಾದ ಗ್ಯಾರಂಟಿ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಗೆ ಲವ್ ಜಿಹಾದ್ ಕಾರಣ ಎಂದು ಅವರ ತಂದೆಯೇ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ಗೆ ತುಷ್ಟೀಕರಣದ ರಾಜಕಾರಣದಿಂದ ಮತ ಪಡೆಯುವುದು ಮಾತ್ರ ಮುಖ್ಯ. ಡಾ। ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತ, ಸಮ ಸಮಾಜ ನಿರ್ಮಾಣ ಅವರಿಗೆ ಮುಖ್ಯವಲ್ಲ. ಸಿಬಿಐಗೆ ಈ ಪ್ರಕರಣವಹಿಸಿ ಎಂದರೂ ಸಿಐಡಿಗೆ ವಹಿಸಿದ್ದು, ಇದರಿಂದ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.

ಡಾ। ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ಅವರಿಗೆ ಅಂತ್ಯಸಂಸ್ಕಾರಕ್ಕೂ ಜಾಗವಿಲ್ಲದಂತೆ ಕಾಂಗ್ರೆಸ್ ಮಾಡಿತ್ತು. ಆದರೆ ಪ್ರಧಾನಿ ಮೋದಿ ಅವರ ಐದು ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಿದರು‌. ಬಾಬು ಜಗಜೀವನರಾಮ್ ಅವರಿಗೂ ಕಾಂಗ್ರೆಸ್ ಅನ್ಯಾಯ ಮಾಡಿತ್ತು. ಈಗ ದಲಿತರ ₹11 ಸಾವಿರ ಕೋಟಿಯನ್ನು ಗ್ಯಾರಂಟಿಗೆ ಬಳಸಲಾಗಿದೆ. ಕೇಂದ್ರ ಸರ್ಕಾರದ ಸಚಿವರ ಪೈಕಿ 27 ಒಬಿಸಿ, 12 ಪರಿಶಿಷ್ಟ ಜಾತಿ ಹಾಗೂ 8 ಪರಿಶಿಷ್ಟ ಪಂಗಡದವರಿದ್ದಾರೆ. ಶೇ.61ರಷ್ಟು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರಿದ್ದಾರೆ. ಕಾಂಗ್ರೆಸ್‌ನಿಂದಾಗಿ ಜಮ್ಮು-ಕಾಶ್ಮೀರದಲ್ಲಿ ದಲಿತರಿಗೆ ಮೀಸಲಾತಿ ಇರಲಿಲ್ಲ. ದಲಿತರ ಕಾಳಜಿ ಇದ್ದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ। ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕಿತ್ತು‌ ಎಂದರು‌.

ಮೋದಿ ಸರ್ಕಾರದಿಂದ ದೇಶದಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದೆ. ಆದರೆ ಕಾಂಗ್ರೆಸ್ ಸರ್ಕಾರದಿಂದ ಭಯೋತ್ಪಾದನೆ ಹೆಚ್ಚಿದೆ, ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಲಾಗಿದೆ, ನಕ್ಸಲ್ ಹಾವಳಿ ಶುರುವಾಗಿದೆ ಎಂದು ದೂರಿದರು.ಮಾಜಿ ಸಚಿವ ಎಂಟಿಬಿ ನಾಗರಾಜ್, ಹಲವು ಮುಖಂಡರು ಉಪಸ್ಥಿತರಿದ್ದರು.

ರಾಜ್ಯಕ್ಕೆ ₹7 ಲಕ್ಷ ಕೋಟಿ ಅನುದಾನ

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ₹7 ಲಕ್ಷ ಕೋಟಿಗೂ ಅಧಿಕ ಅನುದಾನ ನೀಡಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಕಾಂಗ್ರೆಸ್ ತೆರಿಗೆ ಅನ್ಯಾಯ ಎಂಬ ನಾಟಕ ಮಾಡುತ್ತಿದೆ ಎಂದು ಡಾ। ಕೆ.ಸುಧಾಕರ್ ದೂರಿದ್ದಾರೆ.

ಖಾಲಿ ಚೊಂಬು ಎಂದು ಹೇಳುವ ಕಾಂಗ್ರೆಸ್‌ ಗ್ಯಾರಂಟಿಗಳಿಂದಾಗಿ ಅನುದಾನವಿಲ್ಲದೆ ಖಾಲಿ ಚೊಂಬನ್ನೇ ಜನರಿಗೆ ನೀಡಿದೆ. ಒಂದೇ ಒಂದು ಅಭಿವೃದ್ಧಿ ಕೆಲಸ ರಾಜ್ಯದಲ್ಲಿ ನಡೆದಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅನೇಕ ಪ್ರದೇಶಗಳು ಹಿಂದುಳಿದಿದ್ದು, ಇಲ್ಲಿನ ಅಭಿವೃದ್ಧಿಗೂ ಏನೂ ಮಾಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ₹7 ಲಕ್ಷ ಕೋಟಿ ಅನುದಾನ ನೀಡಿದೆ. ಈ ಮೂಲಕ ಕಾಂಗ್ರೆಸ್ ಜನರಿಗೆ ನೀಡಿದ ಚೊಂಬನ್ನು ಅಕ್ಷಯ ಪಾತ್ರೆಯಾಗಿ ಪರಿವರ್ತನೆ ಮಾಡಿದೆ ಎಂದರು.

ಕಡ್ಡಾಯವಾಗಿ ಮತದಾನ  ಮಾಡಿ: ಸುಧಾಕರ್‌ ಕರೆ

ಮತದಾರರು ಮತದಾನ ಮಾಡುವುದನ್ನು ಕರ್ತವ್ಯ ಎಂದು ಪರಿಗಣಿಸಬೇಕು‌. ನಗರಗಳ ಜನರು ಸುಶಿಕ್ಷಿತರಾಗಿದ್ದು, ರಜೆಯಲ್ಲಿ ಎಲ್ಲಿಗೂ ಪ್ರವಾಸ ಹೋಗದೆ ಕಡ್ಡಾಯವಾಗಿ ಮತದಾನ ಮಾಡಬೇಕು. ದೇಶದ ಸುರಕ್ಷತೆಗಾಗಿ, ವಿಕಸಿತ ಭಾರತಕ್ಕಾಗಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕು ಎಂದು ಡಾ। ಕೆ.ಸುಧಾಕರ್ ಕೋರಿದರು.