ಶಾಶ್ವತ ನೀರಾವರಿ, ಕೈಕಾರಿಕೆ ಸ್ಥಾಪನೆಗೆ ಸಿಪಿಎಂ ಒತ್ತಾಯ

KannadaprabhaNewsNetwork | Published : Nov 5, 2024 12:43 AM

ಸಾರಾಂಶ

ಈ ಭಾಗದಲ್ಲಿ ಯಾವುದೇ ಜೀವನದಿಗಳಿಲ್ಲ ಅಲ್ಲದೆ ಸತತ ಬರಗಾಲಕ್ಕೆ ತುತ್ತಾಗಿರುವ ಪರಿಣಾಮ ನೀರಾವರಿ ಯೋಜನೆಗಳು ಈ ಭಾಗಕ್ಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷ್ಣಾ ನದಿ ನೀರನ್ನು ಹರಿಸಿ ಶಾಶ್ವತ ನೀರಾವರಿ ಯೋಜನ ಜಾರಿಗೊಳಿಸಲಿ. ಉದ್ಯೋಗ ಕಲ್ಪಿಸಲು ಕೈಗಾರಿಕೆಗಳನ್ನು ಸ್ಥಾಪಿಸಬೇಕು

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಆಗ್ರಹಿಸಿ 2024ರ ನ. 21, 22 ರಂದು ಪಟ್ಟಣದ ಹೊರವಲಯದ ಕೊಂಡಂವಾರಿಪಲ್ಲಿ ಎಸ್. ಎಲ್.ಎನ್.ಕಲ್ಯಾಣ ಮಂಟಪದಲ್ಲಿ ಸಿಪಿಎಂ ಜಿಲ್ಲಾ 18ನೇ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ನಿಧಿ ಸಂಗ್ರಹ ಮಾಡಲಾಗಿದೆ ಎಂದು ಬಾಗೇಪಲ್ಲಿ ಪಟ್ಟಣದ ಪಕ್ಷದ ಕಾರ್ಯದರ್ಶಿ ವಾಲ್ಮೀಕಿ ಆಶ್ವತ್ಥಪ್ಪ ಹೇಳಿದರು.

ಪಟ್ಟಣದ ಅಂಗಡಿ ಮಾಲೀಕರು ಸೇರಿದಂತೆ ಸಾರ್ವಜನಿಕರಿಂದ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷ್ಣಾ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸುವುದು, ಶಾಶ್ವತ ನೀರಾವರಿ ಯೋಜನೆ, ಜಿಲ್ಲೆಯಲ್ಲಿ ಉದ್ಯೋಗ ಆಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸಮ್ಮೇಳನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ಉದ್ಯೋಗ ಅ‍ವಕಾಶ ಕಲ್ಪಿಸಿ

ಸಿಪಿಐಎಂ ಪಕ್ಷದ ಖಜಾಂಚಿ ಎಂ.ಎನ್.ರಘುರಾಮರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ ಈಭಾಗದ ಬಹುತೇಕ ಯುವಕ ಯುವತಿಯರು, ಕೂಲಿ ಕಾರ್ಮಿಕರು ಗ್ರಾಮೀಣ ಪ್ರದೇಶಗಳಿಂದ ಉದ್ಯೋಗ ಅವಕಾಶಗಳಿಗಾಗಿ ಪಟ್ಟಣ ಸೇರಿದಂತೆ ನಗರಪ್ರದೇಶಗಳಿಗೆ ವಲಸೆ ಹೋಗುವಂತಹ ಪರಿಸ್ಥಿತಿ ಇದೆ. ಜಿಲ್ಲೆಯ ಯುವಜನತೆಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಅತ್ಯಗತ್ಯವಿದೆ ಎಂದರು.

ಕೃಷ್ಣಾ ನೀರು ಹರಿಸಲು ಆಗ್ರಹ

ಈ ಭಾಗದಲ್ಲಿ ಯಾವುದೇ ಜೀವನದಿಗಳಿಲ್ಲ ಅಲ್ಲದೆ ಸತತ ಬರಗಾಲಕ್ಕೆ ತುತ್ತಾಗಿರುವ ಪರಿಣಾಮ ನೀರಾವರಿ ಯೋಜನೆಗಳು ಈ ಭಾಗಕ್ಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷ್ಣಾ ನದಿ ನೀರನ್ನು ಹರಿಸಿ ಶಾಶ್ವತ ನೀರಾವರಿ ಯೋಜನ ಕಲ್ಲಿಸುವ ಸಲುವಾಗಿ ಜನಾಂದೋಲನ ನಡೆಸುವ ಮುಖಾಂತರ ಸರ್ಕಾರದ ಕಣ್ಣು ತೆರೆಸಲು ಸಿಪಿಐಎಂ ಪಕ್ಷದ ಜಿಲ್ಲಾ 18 ನೇ ಸಮ್ಮೇಳನದಲ್ಲಿ ಒತ್ತಾಯಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಿಳ್ಳೂರು ನಾಗರಾಜು, ಸಿಐಟಿಯು ಮುಖಂಡ ಮುಸ್ತಫಾ, ಸಿಪಿಎಂ ಮುಖಂಡ ಮುನಿಯಪ್ಪ, ಜಿ.ಕೃಷ್ಣಪ್ಪ, ರಫೀಕ್ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

Share this article