;Resize=(412,232))
ಬಂಟ್ವಾಳ : ‘ನೀವು ಕೂಡ ಪಕ್ಷವನ್ನು ಕಟ್ಟಿದವರು, ಮುಂದಿನ ದಿನಗಳಲ್ಲಿ ನೀವೂ ಕೂಡ ಮುಖ್ಯಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗುತ್ತೀರಿ...’ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಆಶೀರ್ವದಿಸಿದ್ದಾರೆ.
ಮಂಗಳೂರಿನ ಬಿ.ಸಿ.ರೋಡಿನಲ್ಲಿರುವ ಜನಾರ್ದನ ಪೂಜಾರಿಯವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಡಿ.ಕೆ.ಶಿವಕುಮಾರ್, ಪೂಜಾರಿಯವರ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಪೂಜಾರಿ, ನೆರೆದ ಕಾಂಗ್ರೆಸ್ ಮುಖಂಡರಲ್ಲಿ ‘ಡಿಕೆಶಿಯವರು ಮುಖ್ಯಮಂತ್ರಿ ಆಗಬೇಕೇ, ಬೇಡವೇ?’ ಎಂದು ಕೇಳಿದರು. ಎಲ್ಲರೂ ‘ಆಗಬೇಕು’ ಎಂದು ಪ್ರತಿಕ್ರಿಯಿಸಿದರು. ಆಗ ಪೂಜಾರಿ, ‘ಮುಂದಿನ ದಿನಗಳಲ್ಲಿ ನೀವು ಮುಖ್ಯಮಂತ್ರಿ ಆಗುತ್ತೀರಿ’ ಎಂದು ಆಶೀರ್ವದಿಸಿದರು. ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಪ್ರಮುಖರಾದ ಮಮತಾ ಗಟ್ಟಿ, ಪದ್ಮರಾಜ್ ಆರ್. ಪೂಜಾರಿ, ಹರೀಶ್ ಕುಮಾರ್, ಇನಾಯತ್ ಆಲಿ, ಬೇಬಿ ಕುಂದರ್ ಮತ್ತಿತರರು ಜತೆಗಿದ್ದರು.
ಬಳಿಕ, ಪುತ್ತೂರಲ್ಲಿ ನಡೆದ ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತೂರು ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿ, ‘ಸದ್ಯದಲ್ಲೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಾರೆ’ ಎಂದರು. ‘ನೀವು ಸಿಎಂ ಆದ ತಕ್ಷಣ ಶಾಸಕ ಆಶೋಕ್ ಕುಮಾರ್ ರೈ ಗೆ ಪ್ರಮುಖ ಮಂತ್ರಿ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ಹುದ್ದೆ ನೀಡಿ’ ಎಂದು ಡಿಕೆಶಿಗೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ‘ಡಿ.ಕೆ.ಶಿವಕುಮಾರ್ ಗೆ ಸಿಎಂ ಆಗಲು ಇನ್ನು ಒಂದು ಸ್ಟೆಪ್ ಮಾತ್ರ ಬಾಕಿ ಇದೆ’ ಎಂದರು.