ಸಹಿಸಬೇಡಿ, ಹೆದರಬೇಡಿ: ರಾಹುಲ್‌ ನ್ಯಾಯ ಯಾತ್ರೆ ಘೋಷ ವಾಕ್ಯ

KannadaprabhaNewsNetwork | Published : Jan 13, 2024 1:34 AM

ಸಾರಾಂಶ

ಭಾರತ್‌ ಜೋಡೋ ಯಾತ್ರೆ ಬಳಿಕ ಭಾರತ್‌ ನ್ಯಾಯ್‌ ಜೋಡೋ ಯಾತ್ರೆ ಆರಂಭಕ್ಕೆ ಮುಂಚಿತವಾಗಿ ಯಾತ್ರೆಯ ಘೋಷವಾಕ್ಯವನ್ನು ಪಕ್ಷ ಬಿಡುಗಡೆ ಮಾಡಿದೆ. ಸಹಿಸಬೇಡಿ, ಹೆದರಬೇಡಿ ಎಂದು ಇಟ್ಟುಕೊಂಡಿದೆ.

ನವದೆಹಲಿ: ‘ಸಾಹೋ ಮತ್‌, ಡರೋ ಮತ್‌’ (ಸಹಿಸಿಕೊಳ್ಳಬೇಡಿ ಮತ್ತು ಭಯಪಡಬೇಡಿ) ಎಂಬ ಘೋಷವಾಕ್ಯದೊಂದಿಗೆ ಜ.14ರಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ ಯನ್ನು ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ ಘೋಷಿಸಿದೆ.

ಅಲ್ಲದೇ ‘ನ್ಯಾಯ ಗೀತೆ’ ಎಂಬ ಶೀರ್ಷಿಕೆಯೊಂದಿಗೆ ಸಹಿಸಿಕೊಳ್ಳಬೇಡಿ ಮತ್ತು ಭಯಪಡಬೇಡಿ ಎಂಬ ಅಡಿಬರಹದಲ್ಲಿ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಜೋಡೋ ಯಾತ್ರೆ ಸೇರಿದಂತೆ ಅವರ ಅನೇಕ ಜನರೊಂದಿಗಿನ ಭೇಟಿಯ ವಿಡಿಯೋ ತುಣುಕುಗಳಿವೆ. ಈ ಹಾಡನ್ನು ಹಂಚಿಕೊಂಡು ಟ್ವೀಟ್‌ ಮಾಡಿರುವ ರಾಹುಲ್‌ ‘ಬೀದಿಯಿಂದ ಹಿಡಿದು ಸಂಸತ್ತಿನವರೆಗೆ ನ್ಯಾಯದ ಹಕ್ಕು ಸಿಗುವ ತನಕ ನಾವು ಎಲ್ಲ ಮನೆಯನ್ನೂ ತಲುಪುತ್ತೇವೆ. ಸಹಿಸಿಕೊಳ್ಳಬೇಡಿ, ಭಯಪಡಬೇಡಿ’ ಎಂದಿದ್ದಾರೆ.

ನಾಳೆ ರಾಹುಲ್‌ ಯಾತ್ರೆಯ ಆರಂಭದ ಸ್ಥಳ ಬದಲು

ಇಂಫಾಲ್‌: ಮಣಿಪುರದ ಹಿಂಸಾಪೀಡಿತ ಇಂಫಾಲ್‌ನಲ್ಲಿ ಕೆಲವೇ ಕೆಲವು ಜನರ ಜೊತೆ ಭಾರತ್‌ ನ್ಯಾಯ ಯಾತ್ರೆ ಆರಂಭಿಸಬೇಕು ಎಂದು ಸರ್ಕಾರ ಸೂಚಿಸಿರುವ ಕಾರಣ, ಕೊನೆಕ್ಷಣದಲ್ಲಿ ಯಾತ್ರೆಯ ಆರಂಭದ ಸ್ಥಳವನ್ನು ಬದಲಿಸಲಾಗಿದೆ. ಇಂಫಾಲ್‌ ಬದಲು ತೌಬಾಲ್‌ಗೆ ರಾಹುಲ್‌ ಗಾಂಧಿ ನೇತೃತ್ವದ ಯಾತ್ರೆಗೆ ಚಾಲನೆ ನೀಡಲಾಗುತ್ತದೆ ಎಂದು ಕಾಂಗ್ರೆಸ್‌ ಪಕ್ಷ ಹೇಳಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ.ಈ ಬಗ್ಗೆ ಮಾಹಿತಿ ನೀಡಿರುವ ಮಣಿಪುರ ಕಾಂಗ್ರೆಸ್‌ ಅಧ್ಯಕ್ಷ ಕೇಶಾಮ್‌ ಮೇಘಚಂದ್ರ, ‘ಇಂಫಾಲ್‌ನ ಕಾಂಗ್‌ಜೇಬಂಗ್‌ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ನಾವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜನರಿಗೆ 1 ಸಾವಿರ ಸಂಖ್ಯೆಯ ಮಿತಿ ವಿಧಿಸಿದ ಕಾರಣ ಸಮಾರಂಭದ ಸ್ಥಳವನ್ನು ಬದಲಾಯಿಸಿದ್ದೇವೆ’ ಎಂದು ಹೇಳಿದ್ದಾರೆ.ಜ.14ರಿಂದ ಭಾರತ್‌ ಜೋಡೋ ನ್ಯಾಯ ಯಾತ್ರೆ ಆರಂಭಗೊಳ್ಳಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮುಂಬೈನಲ್ಲಿ ಯಾತ್ರೆ ಅಂತ್ಯವಾಗಲಿದೆ

ಕೈ ಲೋಕಸಭೆ ಚುನಾವಣಾ ರಣನೀತಿ ಟೀಂನಿಂದ ಕನುಗೋಲು ಔಟ್‌ನವದೆಹಲಿ: 2024ರ ಲೋಕಸಭೆ ಚುನಾವಣಾ ರಣನೀತಿ ರೂಪಿಸಲು ಕಾಂಗ್ರೆಸ್‌ ರಚಿಸಿದ್ದ ‘ಟಾಸ್ಕ್‌ ಫೋರ್ಸ್‌ 2024’ ತಂಡದಿಂದ ಖ್ಯಾತ ಚುನಾವಣಾ ರಣನೀತಿ ತಜ್ಞ ಸುನೀಲ್‌ ಕನುಗೋಲು ಹೊರಬಂದಿದ್ದಾರೆ. ಆದರೆ ಅವರು ಪಕ್ಷದ ಮಹಾರಾಷ್ಟ್ರ ಹಾಗೂ ಹರ್ಯಾಣ ರಣನೀತಿ ತಂಡದಲ್ಲಿ ಮುಂದುವರಿಯಲಿದ್ದಾರೆ.ಇದೇ ವೇಳೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರರಾಗಿಯೂ ಅವರು ಮುಂದುವರಿಯಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕನುಗೋಲು ಅವರು ಬಿಜೆಪಿ ರಾಜ್ಯಗಳನ್ನು ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಂಡರೆ ಬಿಜೆಪಿ ಬುಡವೇ ಅಲ್ಲಾಡಿದಂತೆ. ಹೀಗಾಗಿ ರಾಷ್ಟ್ರೀಯ ಹೊಣೆ ಬದಲು ರಾಜ್ಯಗಳ ಹೊಣೆ ಹೊರಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದಾರೆ.ಕನುಗೋಲು ಇತ್ತೀಚೆಗೆ ರೂಪಿಸಿದ ರಣನೀತಿ ಫಲಿಸಿ, ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು.2 ವರ್ಷದ ಹಿಂದೆ ,ಕಾಂಗ್ರೆಸ್‌ ಚುನಾವಣಾ ರಣನೀತಿ ಟೀಂನಿಂದ ಪ್ರಶಾಂತ್‌ ಕಿಶೋರ್‌ ಕೂಡ ಹೊರಬಂದಿದ್ದರು.

Share this article