ಬೆಂಗಳೂರು : ನಗರದ ರಸ್ತೆಗಳನ್ನು ಸುಸ್ಥಿರವಾಗಿ ಅಭಿವೃದ್ಧಿ ಪಡಿಸುವುದಕ್ಕೆ ಬಿಬಿಎಂಪಿಯೊಂದಿಗೆ ಇತರೆ ಇಲಾಖೆಗಳು ಕೈಜೋಡಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಲಹೆ ನೀಡಿದ್ದಾರೆ.
ಬಿಬಿಎಂಪಿಯು ಆಯೋಜಿಸಿರುವ ಮೂರು ದಿನಗಳ ನಮ್ಮ ರಸ್ತೆ 2025 ಕಾರ್ಯಗಾರದಲ್ಲಿ ಶುಕ್ರವಾರ ಭಾಗವಹಿಸಿದ ಅವರು, ‘ಪಾಲಿಕೆಯ ಎಂಜಿನಿಯರ್ಗಳ ಸಾಮರ್ಥ್ಯ ವೃದ್ಧಿ’ ವಿಷಯದ ಕುರಿತು ಮಾತನಾಡಿದ ಅವರು, ‘ನಮ್ಮ ರಸ್ತೆ’ ಉತ್ತಮ ವಿಷಯದ ಕುರಿತು ಕಾರ್ಯಗಾರ ಏರ್ಪಡಿಸಲಾಗಿದೆ. ಸರ್ಕಾರದ ಜತೆಗೆ ನಾಗರಿಕರು ಕೈಜೋಡಿಸಿದರೆ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಸಾಧ್ಯ ಎಂದರು.
ಬೆಂಗಳೂರಿನ ವಾಯುಗುಣದ ಬಗ್ಗೆ ಜನರು ಎಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಾರೋ, ಅಷ್ಟೇ ನಗರದ ರಸ್ತೆಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ನಗರದ ರಸ್ತೆಗಳ ಕುರಿತು ಸವಿವರವಾದ ಚಿತ್ರಣವನ್ನು ಇಲ್ಲಿ ಪ್ರಸ್ತಾಪಿಸಿದ್ದು, ಅದರಿಂದ ಸಮಸ್ಯೆಯ ಗಾತ್ರ ಹಾಗೂ ಅದಕ್ಕೆ ಪರಿಹಾರಗಳೇನು ಎಂಬುದನ್ನು ನಿಖರವಾಗಿ ನೋಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ದು, ಬೆಂಗಳೂರಿಗೆ ನಗರ ಬಂದು ವಾಸಿಸುವುದಕ್ಕೆ ಇಷ್ಟಪಡುತ್ತಾರೆ. ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಿದರೆ ಅದಕ್ಕಿಂತ ಹೆಚ್ಚಾಗಿ ಜನಸಂಖ್ಯೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಮೀರಿ ಹೆಚ್ಚುತ್ತಲೇ ಇದೆ. ಅದನ್ನು ಹೇಗೆ ನಿಯಂತ್ರಣ ಮಾಡಬೇಕೆಂಬುದರ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಬೇಕಿದೆ ಎಂದು ತಿಳಿಸಿದರು.
ಸಂಚಾರ ದಟ್ಟಣೆ ನಿಯಂತ್ರಿಸಲು ನಾಗರಿಕರು ಏನು ಮಾಡಬಹುದು. ನಮ್ಮ ಬೆಂಗಳೂರು - ನಮ್ಮ ರಸ್ತೆ, ನಮ್ಮದೇ ಸಮಸ್ಯೆ - ನಮ್ಮದೇ ಪರಿಹಾರ ಆ ನಿಟ್ಟಿನಲ್ಲಿ ಯೋಚಿಸಿ ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಮಾಡಲು ಸಾಧ್ಯ. ಇನ್ನು ಕೊನೆಯ ಭಾಗಕ್ಕೆ ಸಂಪರ್ಕ ಕಲ್ಪಿಸುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಜನರು ಸಾರ್ವಜನಿಕ ಸಾರಿಗೆ ಹೆಚ್ಚಾಗಿ ಬಳಕೆ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ವ್ಯವಸ್ಥೆ ಮಾಡಬೇಕಿದೆ ಎಂದರು.
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನಗರದಲ್ಲಿ ಯಾವುದೇ ಕಾಮಗಾರಿ ನಡೆಸಿದರೂ ಒಂದೇ ಮಾದರಿಯ ವಿನ್ಯಾಸವಿರುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಡುಗಡೆಗೊಳಿಸಿರುವ ನಮ್ಮ ರಸ್ತೆ ಕೈಪಿಡಿಯಲ್ಲಿರುವ ಪ್ರಮಾಣಿತ ಕಾರ್ಯವಿಧಾನವನ್ನು ಸರಿಯಾಗಿ ಅನುಸರಿಸಬೇಕೆಂದು ತಿಳಿಸಿದರು.
ನಮ್ಮ ರಸ್ತೆ ಕೈಪಿಡಿಯ ಎಲ್ಲಾ ಅಂಶಗಳನ್ನು ಎಂಜಿನಿಯರ್ಗಳು ಸರಿಯಾಗಿ ಅಳವಡಿಸಿಕೊಳ್ಳಬೇಕು. ಪಾಲಿಕೆ ಕೈಗೆತ್ತಿಕೊಳ್ಳುವ ಕಾಮಗಾರಿಗಳು, ಜಲಮಂಡಳಿಯ ನೀರಿನ ಲೈನ್, ಒಳಚರಂಡಿ ವ್ಯವಸ್ಥೆ, ಬೆಸ್ಕಾಂ, ಕೆಪಿಟಿಸಿಎಲ್ ಕೇಬಲ್ಗಳು, ಓಎಫ್ಸಿ ಕೇಬಲ್ಗಳಿಗೆ ಅಳವಡಿಸುವ ಡಕ್ಗಳು ಯಾವ ರೀತಿ ಇರಬೇಕು, ಯಾವ ಕಡೆ ನಿರ್ಮಿಸಬೇಕು ಎಂಬುದನ್ನು ತಪ್ಪದೆ ಪಾಲಿಸಬೇಕು ಎಂದು ಹೇಳಿದರು.
ಈ ವೇಳೆ ಪ್ರಧಾನ ಅಭಿಯಂತರ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್, ಶಶಿಕುಮಾರ್, ರಾಜೇಶ್ ಇದ್ದರು.