)
- ಪ್ರಿಯಾ ಕೆರ್ವಾಶೆ
ಸಂಜೆ ಹೊತ್ತಲ್ಲಿ ನಮ್ಮ ಬೆಂಗಳೂರಿನ ಜನವರಿ ತಿಂಗಳ ಹವೆಯಂತೆ ಹದವಾಗಿದ್ದ ಚಳಿ ರಾತ್ರಿ ಆಗುತ್ತ ಹೋದಂತೆ ಕುಟುಕುಟು ಚಳಿಯಾಗಿ ಕೊರೆಯುವ ಚಳಿಯಾಗಿ ಒಂದು ಹಂತದಲ್ಲಿ 5 ಡಿಗ್ರಿಯಷ್ಟು ಕೆಳಗಿಳಿದು ತಡೆಯಲಸಾಧ್ಯವಾಗಿ ನಡುಗುತ್ತ ಟೆಂಟಿನೊಳಗೆ ಕೂರಲೂ ಆಗದೆ ಹೊರ ಹೋಗಲೂ ಆಗದೆ ಶೂನ್ಯವನ್ನೇ ಧ್ಯಾನಿಸುತ್ತ ಬಿದ್ದುಕೊಂಡಿದ್ದೆ.
ಅಷ್ಟಕ್ಕೂ ಅದು ಪಾರ್ಕಿಂಗ್ಗೆ ಮೀಸಲಾಗಿದ್ದ ವಿಶಾಲ ಮೈದಾನ. ನಮಗೆ ಮಲಗಲು ಬೇರೆಲ್ಲೂ ಜಾಗ ಸಿಗದೇ ಸ್ನೇಹಿತರು ತಂದಿದ್ದ ಟೆಂಟನ್ನೇ ಪಾರ್ಕಿಂಗ್ ಜಾಗದಲ್ಲಿ ಹಾಕಿ ಬಿದ್ದುಕೊಂಡಿದ್ದೆವು. ಆದರೆ ಬೆಳಗಿನ ಜಾವ ಎರಡೂವರೆ ಹೊತ್ತಿಗೆ ಚಳಿ, ಒದ್ದಾಟ ತಡೆಯಲಾರದೆ ತಲೆ ಹೊರಹಾಕಿದೆ. ಫಕ್ಕ ಯಾವುದೋ ಸಿನಿಮಾದ ದೃಶ್ಯ ನೋಡಿದಂತಾಯ್ತು!ನಮ್ಮ ಮುಂದಿನ ದಾರಿಯುದ್ದಕ್ಕೂ ಜನ ಸಾಗರ. ಸಾವಿರಾರು ಜನ ತಲೆ ಮೇಲೆ ಮೂಟೆ ಹೊತ್ತುಕೊಂಡು ಸ್ಪರ್ಧೆಗೆ ಬಿದ್ದವರ ಹಾಗೆ ಓಡು ನಡಿಗೆಯಲ್ಲಿ ನದಿ ತೀರದತ್ತ ಧಾವಿಸುತ್ತಿದ್ದರು. ಉತ್ತರ ಭಾರತದ ಹಳ್ಳಿಗಳ ತೆಳುವಾದ ಗಾಢ ಬಣ್ಣದ ಉಡುಗೆಯಲ್ಲಿದ್ದ ಅವರನ್ನು ನಮ್ಮಂತೆ ಚಳಿ, ರಾತ್ರಿ ಅನ್ನುವ ಲಿಮಿಟೇಶನ್ಗಳೆಲ್ಲ ಬಂಧಿಸಿಟ್ಟಂತಿರಲಿಲ್ಲ. ನೆಟ್ಟ ಗುರಿಯತ್ತ ಬಾಣಗಳ ಹಾಗೆ ನುಗ್ಗುತ್ತಿದ್ದರು.
ಇದೇ ಹೊತ್ತಿಗೆ ನಾವಿದ್ದ ಅರೈಲ್ ಘಾಟ್ ಸಂಗಮ ಸ್ಥಾನದ ಇನ್ನೊಂದು ತೀರದಲ್ಲಿ ಕಾಲ್ತುಳಿತವಾಗಿ ಕೆಲವು ಮಂದಿ ಗಂಗೆಯ ದಂಡೆಯಲ್ಲೇ ಕೊನೆಯುಸಿರೆಳೆದಿದ್ದರು. ಅನೇಕರು ಗಾಯದಿಂದ ಒದ್ದಾಡುತ್ತಿದ್ದರು. ತೀರ ಸಮೀಪದಲ್ಲಿ ಇಷ್ಟೆಲ್ಲ ಘಟಿಸುತ್ತಿದ್ದರೂ ನಾನು ಟೆಂಟಿನ ಒಳ ಹೊರಗೆ ಚಳಿಯ ಜೊತೆ ಗುದ್ದಾಡುತ್ತಿದ್ದೆ.
ನಾಗಾ ಸಾಧುಗಳ ಜೊತೆ
ಕೆಲವರು ಅವರೆದುರು ತಟ್ಟೆಯಲ್ಲಿ ದುಡ್ಡು ಹಾಕಿ ನಮಸ್ಕಾರ ಮಾಡುತ್ತಿದ್ದರು. ಅವರ ಹಣೆಗೆ ಈ ನಾಗಾ ಸಾಧುಗಳು ವಿಭೂತಿ ಹಚ್ಚಿ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದಿಸಿ ಕಳಿಸುತ್ತಿದ್ದರು. ಕೆಲವೊಮ್ಮೆ ತಮ್ಮ ಕೈಯಲ್ಲಿದ್ದ ನವಿಲುಗರಿ ಸುತ್ತಿದ್ದ ಕೋಲನ್ನು ಬೆನ್ನಿಗೆ ಮುಟ್ಟಿಸಿ ಬೆನ್ನು ತಟ್ಟಿ ಒಳ್ಳೆಯದಾಗಲಿ ಎಂದು ಹರಸುತ್ತಿದ್ದರು.
ಹೊರಗೆ ಕೂತವರು ಸೊಂಟಕ್ಕೂ, ತಲೆಗೂ ಕಾವಿ ಬಟ್ಟೆ ಸುತ್ತಿ, ಕೊರಳ ತುಂಬ ರುದ್ರಾಕ್ಷಿ ಧರಿಸಿ ಮೈಗೆ ಬೂದಿ ಬಳಿದುಕೊಂಡಿದ್ದರು. ಏನೋ ಕೆಲಸ ಮಾಡುತ್ತ ಅವರಲ್ಲೊಬ್ಬ ಸಾಧು ಎದ್ದು ನಿಂತ. ಸೊಂಟಕ್ಕೆ ಸುತ್ತಿಕೊಂಡಿದ್ದ ಬಟ್ಟೆ ಕಳಚಿಬಿತ್ತು. ಎಲ್ಲರೆದುರು ಸಂಪೂರ್ಣ ಬೆತ್ತಲಾದ. ಸುತ್ತಮುತ್ತ ಓಡಾಡುತ್ತಿದ್ದ ಫೋಟೋಗ್ರಾಫರ್ಗಳೆಲ್ಲ ಈತನೆದುರು ನಿಂತು ಚಕಚಕನೆ ಫೋಟೋ ಕ್ಲಿಕ್ಕಿಸಲಾರಂಭಿಸಿದರು. ಇದ್ಯಾವುದರ ಪರಿವೆಯೇ ಇಲ್ಲದ ಆದ ಆತ ಬಿದ್ದ ಬಟ್ಟೆಯನ್ನೆತ್ತಿ ಸೈಡಿಗಿಟ್ಟು ತನ್ನ ಪಾಡಿಗೆ ಕೆಲಸ ಮುಂದುವರಿಸಿದ.
ಅಲ್ಲೇ ನಿಂತು ಗಮನಿಸುತ್ತಿದ್ದ ನನ್ನನ್ನು ಸಮೀಪಕ್ಕೆ ಕರೆದರು. ಅವರ ತಟ್ಟೆಗೆ ಕಾಣಿಕೆ ಹಾಕಿದೆ. ಆತ ನನ್ನ ಕಣ್ಣುಗಳನ್ನೇ ಒಂದು ಕ್ಷಣ ದಿಟ್ಟಿಸಿ, ‘ಕೈ ಕೊಡು, ಕೂತ್ಕೋ’ ಅಂದರು. ಒಳಗೊಳಗೆ ಕೊಂಚ ದಿಗಿಲಾಯಿತು. ಬೇರೆ ದಾರಿ ಇದರಲಿಲ್ಲ. ಎರಡೂ ಕೈ ಅವರೆದುರು ಚಾಚಿದೆ.
*
ಕಾರು ಇನ್ನೇನು ಹೊರಡಲಿತ್ತು, ಧುತ್ತನೆ ಒಬ್ಬ ಸಾಧುವಿನಂತೆ ತೋರುವ ವ್ಯಕ್ತಿ ಕಾರಿಗೆ ಅಡ್ಡಲಾಗಿ ನಿಂತುಬಿಟ್ಟ! ಡ್ರೈವಿಂಗ್ ಸೀಟಿನಲ್ಲಿದ್ದ ಸ್ನೇಹಿತರನ್ನು ಕೆಳಗಿಳಿಯಲು ಹೇಳಿದ. ಅವರು ಕೆಳಗಿಳಿದ ಮೇಲೆ ಗೊತ್ತಾಯ್ತು, ಆತ ಬಟ್ಟೆ ತೊಟ್ಟಿರದ ನಗ್ನ ನಾಗಾ ಸಾಧು. ಕೊರಳಿಗೆ ಮನುಷ್ಯನ ಮೂಳೆಯನ್ನೇ ಹಾರವಾಗಿ ಧರಿಸಿ ಭಯಂಕರವಾಗಿ ಕಾಣುತ್ತಿದ್ದ. ನೋಡ ನೋಡುತ್ತಿದ್ದ ಹಾಗೆ ಮೂಳೆಯನ್ನು ಕಚ್ಚಿ ವಿಚಿತ್ರವಾಗಿ ಕಿರುಚಿದ.ನಾವು ಅಲ್ಲಿಯವರೆಗೆ ನೋಡಿದ ಸ್ನೇಹಮಯಿ ಸಾಧುಗಳಿಗೆ ತದ್ವಿರುದ್ಧವಾಗಿತ್ತು ಈತನ ವರ್ತನೆ. ಹಣ ನೀಡಿದರೆ ಮತ್ತೇನೋ ಸನ್ನೆ ಮಾಡಿದ, ನಮಗೆ ಅರ್ಥ ಆಗಲಿಲ್ಲ.
ನನ್ನ ಗೆಳತಿ ಹಿಂದಿನ ಸೀಟಿನಲ್ಲಿ ಕುಳಿತಿದ್ದಳು. ಅವಳ ಹತ್ತು ವರ್ಷದ ಮಗ ನನ್ನ ಪಕ್ಕ ಮುಂಭಾಗ ಕೂತಿದ್ದ. ಆ ಸನ್ಯಾಸಿ ತನಗೆ ನೀಡಿದ ಹಣವನ್ನು ನನ್ನ ಗೆಳತಿಯತ್ತ ಚಾಚಿ, ಆ ಹಣವನ್ನು ಮಗುವಿನ ತಲೆಗೆ ಸುತ್ತಿ ಕೊಡು ಎಂದೇನೋ ಹೇಳಿದ. ಆದರೆ ನಾವು ಆ ಹೊತ್ತಿಗೆ ಸ್ತಂಭೀಭೂತರಾಗಿ ಕೂತಿದ್ದೆವು. ಆತ ಹೇಳಿದರೂ ನಮಗೇನೂ ಮಾಡಲು ತೋಚಲಿಲ್ಲ. ಆತನ ಮುಖವನ್ನೇ ನೋಡುತ್ತ ಸುಮ್ಮನೆ ಕೂತುಬಿಟ್ಟೆವು. ಅಷ್ಟುಹೊತ್ತೂ ರಣಭೀಕರವಾಗಿ ವರ್ತಿಸಿದ ಆತ ಕೊನೆಯಲ್ಲಿ ಮಗುವಿನಂತೆ ಮುಖ ಮಾಡಿ ನನ್ನ ಗೆಳತಿಗೆ, ‘ನನ್ನ ಬಗ್ಗೆ ಸಿಟ್ಟು ಮಾಡಿಕೊಂಡಿಯಾ? ಸಿಟ್ಟು ಮಾಡಿಕೊಂಡಿಯೇನಮ್ಮಾ?’ ಅಂತ ಮತ್ತೆ ಮತ್ತೆ ಕೇಳತೊಡಗಿದ. ಆಕೆ ಇಲ್ಲ ಅಂದಮೇಲೆ ಕಾರಿಗೆ ದಾರಿಬಿಟ್ಟ. ನಾವು ಬಹಳ ಹೊತ್ತು ವಿಚಿತ್ರ ಸ್ಥಿತಿಯಲ್ಲಿದ್ದೆವು.ನನ್ನ ಪಕ್ಕ ಕೂತಿದ್ದ ಮಗು ನನ್ನ ಸ್ನೇಹಿತೆಯದೇ ಅಂತ ಆತನಿಗೆ ಹೇಗೆ ಗೊತ್ತಾಯ್ತು, ಅಷ್ಟು ಹೊತ್ತು ಎಲ್ಲೂ ಕಾಣದ ಆತ ಇದ್ದಕ್ಕಿದ್ದ ಹಾಗೆ ಎಲ್ಲಿಂದ ಬಂದ? ಆತ ಯಾರು.. ಹೀಗೆ ನಮ್ಮೊಳಗೆ ಪ್ರಶ್ನೆ ಮೇಲೆ ಪ್ರಶ್ನೆಗಳೇಳುತ್ತಿದ್ದವು. ಇಂದಿಗೂ ಆತ ನಮ್ಮೆಲ್ಲರಿಗೆ ಪ್ರಶ್ನೆಯಾಗಿಯೇ ಉಳಿದಿದ್ದಾನೆ.