ಬೆಂಗಳೂರು : ‘ಭಾವ್’ ಸಮ್ಮೇಳನವು ಸಾಂಸ್ಕೃತಿಕ ಕುಂಭಮೇಳವಾಗಿದೆ. ಕಲೆ-ಸಂಸ್ಕೃತಿ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ನ ಕಲಾ ಮತ್ತು ಸಾಂಸ್ಕೃತಿಕ ವಿಶ್ವ ವೇದಿಕೆಯಿಂದ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ನಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಭಾವ್’ ಸಾಂಸ್ಕೃತಿಕ ಸಮ್ಮೇಳನದ ಎರಡನೇ ದಿನವಾದ ಶುಕ್ರವಾರ ಹಲವು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದ ಅವರು, ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಪೂರ್ಣಕುಂಭ ಮೇಳದಲ್ಲಿ ದೇಶ-ವಿದೇಶಗಳ ಕೋಟ್ಯಂತರ ಜನರು ಭಾಗಿಯಾಗಿದ್ದಾರೆ. ಇಂತಹ ಸಮಯದಲ್ಲಿ ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸಾನಿಧ್ಯದಲ್ಲಿ ನಡೆಯುತ್ತಿರುವ ಈ ಭಾವ್ ಸಾಂಸ್ಕೃತಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೇನೆ. ಇದೊಂದು ಸಾಂಸ್ಕೃತಿಕ ಕುಂಭಮೇಳವಾಗಿದೆ ಎಂದು ಬಣ್ಣಿಸಿದರು.
ಕುಂಭಮೇಳದ ಸಂದರ್ಭದಲ್ಲಿ ದೇಶ-ವಿದೇಶಗಳ ಎಲ್ಲ ಸಮುದಾಯಗಳ ಜನರೂ ಪಾಲ್ಗೊಳ್ಳುತ್ತಾರೆ. ಇಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಸಮ್ಮೇಳನದಲ್ಲೂ ಜಾತಿ, ಮತಕ್ಕೆ ಸೀಮಿತವಿಲ್ಲದೇ ಎಲ್ಲ ಸಮುದಾಯಗಳ ಜನರೂ ಪಾಲ್ಗೊಂಡಿದ್ದಾರೆ. ಹಲವು ಪ್ರಕಾರಗಳ ಕಲೆಗಳ ಸಮ್ಮಿಲನವನ್ನು ಇಲ್ಲಿ ಕಾಣಬಹುದು. ಎಲ್ಲ ಕಲಾ ಪ್ರಕಾರಗಳಿಗೆ ಇದು ಉತ್ತಮ ವೇದಿಕೆಯಾಗಿದೆ ಎಂದು ಪ್ರಶಂಸಿಸಿದರು.
ಭಾರತೀಯ ಕಲೆಗಳನ್ನು ಪ್ರಸ್ತುತಪಡಿಸುವ ಪ್ರಖ್ಯಾತ ಸಂಗೀತ ವಿದ್ವಾಂಸರು, ಹೊಸದಾಗಿ ಕಲಿಯುತ್ತಿರುವ ಪ್ರತಿಭೆಗಳು, ಸಂಗೀತ ಸೇವೆ ಮಾಡುವವರು ಇಲ್ಲಿ ಪಲ್ಗೊಂಡಿದ್ದಾರೆ. ಇದೊಂದು ಉತ್ತಮ ವೇದಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕಲೆ-ಸಂಸ್ಕೃತಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.
ಹಲವು ಕಲಾ ಪ್ರಕಾರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಗತಿ ಮಂಜಮ್ಮ ಮತ್ತಿತರರು ಉಪಸ್ಥಿತರಿದ್ದರು.
ಮನಸೆಳೆದ ಸೀತಾ ಚರಿತ:
ಬರೋಬ್ಬರಿ 500 ಕಲಾವಿದರು 30 ವಿಭಿನ್ನ ನೃತ್ಯ ಪ್ರಕಾರಗಳ ಮೂಲಕ ಪ್ರದರ್ಶಿಸಿದ ರಾಮಾಯಣದ ಸೀತಾ ಮಾತೆಗೆ ಸಂಬಂಧಿಸಿದ ‘ಸೀತಾ ಚರಿತ’ ನೃತ್ಯವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಬಗ್ಗೆ ಮಾಹಿತಿ ನೀಡಿರುವ ಆರ್ಟ್ ಆಫ್ ಲಿವಿಂಗ್ನ ಕಲಾ ಮತ್ತು ಸಾಂಸ್ಕೃತಿಕ ವಿಶ್ವ ವೇದಿಕೆಯ ನಿರ್ದೇಶಕಿ ಶ್ರೀವಿದ್ಯಾ ವರ್ಚಸ್ವಿ, ‘500 ಕಲಾವಿದರು 30 ವಿಭಿನ್ನ ನೃತ್ಯ ಪ್ರಕಾರಗಳ ಮೂಲಕ ಅಭಿನಯಿಸಿದ ಸೀತಾ ಚರಿತ ಉತ್ತಮವಾಗಿ ಮೂಡಿಬಂತು. ನಮ್ಮ ಕಲಾವಿದರು ಎಲ್ಲರನ್ನೂ ರಂಜಿಸಲು ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಕಲಾವಿದರು ಸವೋಲ್ಲಾಸ ಪಡೆದುಕೊಳ್ಳಲು ಸಾಂಸ್ಕೃತಿಕ ಸಮ್ಮೇಳನವು ಸದವಕಾಶ ಕಲ್ಪಿಸುತ್ತದೆ. ಇಲ್ಲಿಗೆ ಆಗಮಿಸುವ ಕಲಾವಿದರು ಧ್ಯಾನ, ಪ್ರಾಣಾಯಾಮವನ್ನೂ ಕಲಿತು ತೆರಳುತ್ತಿದ್ದಾರೆ’ ಎಂದು ವಿವರಿಸಿದರು.