‘ಕಾರ್ಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧಮುಕ್ತಿ ಎಂದು ಆದೇವ ನಾವು ಮುಕ್ತ ಮುಕ್ತ ಮುಕ್ತ’
ಎಂಬ ಮಾಂತ್ರಿಕ ಸಾಲುಗಳನ್ನು ಬರೆದರು.
ಧಾರಾವಾಹಿಯಲ್ಲಿ ಶೀರ್ಷಿಕೆ ಗೀತೆ ಅನ್ನೋದು ಸಂಪ್ರದಾಯ. ಮೊದಲ ದೈನಂದಿನ ಧಾರಾವಾಹಿಗಳಲ್ಲೊಂದಾಗಿ ಗುರುತಿಸಿಕೊಂಡ ನನ್ನ ನಿರ್ದೇಶನದ ‘ಮಾಯಾಮೃಗ’ ಕ್ಕೆ ಕೆ ಎಸ್ ನರಸಿಂಹ ಸ್ವಾಮಿ ಅವರು ಶೀರ್ಷಿಕೆ ಗೀತೆ ಬರೆದರು. ಆಮೇಲೆ ಮನ್ವಂತರ ಬಂತು. ಆಮೇಲೆ ಮೂರನೆಯದಾಗಿ ಎಸ್ಎಲ್ ಬೈರಪ್ಪ ಅವರ ಕಾದಂಬರಿ ಆಧರಿತ ‘ಮತದಾನ’ ಸಿನಿಮಾ ಮಾಡಿದೆ. ಸಿ ಅಶ್ವತ್ಥ ಅವರ ಸಂಗೀತ ಸಂಯೋಜನೆ ಇತ್ತು. ಸಿನಿಮಾದಲ್ಲೊಂದು ಸನ್ನಿವೇಶ ಬರುತ್ತೆ. ನಾಯಕ ಆತ್ಮಹತ್ಯೆ ಮಾಡಿಕೊಳ್ಳಲು ಹೊರಡುತ್ತಾನೆ. ಅಲ್ಲೊಂದು ಹಾಡು ಬೇಕಿತ್ತು. ನಾನು ಲಾವಣಿ ಹಾಕ್ತೀನಿ ಅಂತ ಹೊರಟಿದ್ದೆ. ಅಶ್ವತ್ಥ ತಡೆದು, ಹೆಚ್ ಎಸ್ ವೆಂಕಟೇಶ ಮೂರ್ತಿ ಹತ್ರ ಬರೆಸು ಅಂದರು. ‘ಅವ್ರು ಅಷ್ಟು ಸೀರಿಯಸ್ ಕವಿ. ಇಂಥದ್ದಕ್ಕೆಲ್ಲ ಎಲ್ಲಿ ಬರೀತಾರೆ?’ ಅಂದೆ. ಅಶ್ವತ್ಥ ಎಚ್ಎಸ್ವಿ ಅವರನ್ನು ತನ್ನ ಮನೆಗೆ ಕರೆಸಿಯೇ ಬಿಟ್ಟರು. ಹಾಗೆ ಬಂದ ಎಚ್ಎಸ್ವಿ ನನ್ನ ಮನಸ್ಸಲ್ಲಿದ್ದದ್ದಕ್ಕಿಂತಲೂ ಅತ್ಯುತ್ತಮವಾಗಿ ಗೀತೆ ಬರೆದರು.
‘ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ ಬಲು ದುಸ್ಸಾರ, ಇದನರಿತ ಅರಿತು ಮಂದಿ ಬಿದ್ದಾರ ಹಿಂದ ಬಿದ್ದಾರ’ ಅನ್ನೋ ಸಾಹಿತ್ಯವದು. ಅದಾದ ಮೇಲೆ ‘ಮುಕ್ತ’ ಧಾರಾವಾಹಿ ಮಾಡಿದೆ. ಅದು ರೈತರ ಬಗ್ಗೆ ಇತ್ತು. ಜಾಗತೀಕರಣ, ಉದಾರಿಕರಣ ಆವಾಗಷ್ಟೇ ಪ್ರಭಾವ ಬೀರಲು ಶುರು ಮಾಡಿದ್ದವು. ದೂರದಿಂದ ಯಾವುದೋ ದೇಶ ಎಲ್ಲವನ್ನೂ ನಿಯಂತ್ರಿಸುತ್ತೆ ಅನ್ನೋದಿತ್ತು. ಆ ಸಾರವನ್ನಿಟ್ಟು ಹೆಚ್ಎಸ್ವಿ;
‘ಕಾರ್ಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧಮುಕ್ತಿ ಎಂದು ಆದೇವ ನಾವು ಮುಕ್ತ ಮುಕ್ತ ಮುಕ್ತ’
ಎಂಬ ಮಾಂತ್ರಿಕ ಸಾಲುಗಳನ್ನು ಬರೆದರು.
ಅಂದರೆ ಮೋಡ ಮಳೆಯಾಗಿ ಸುರಿದಾಗ ರೈತರ ಕಣ್ಣಲ್ಲಿ ಹೆಪ್ಪುಗಟ್ಟಿದ ಕಣ್ಣೀರು ಹೊರಬರುತ್ತೆ. ಜಾಗತೀಕರಣಕ್ಕೆ ‘ದೂರದಿಂದಲೇ ಜೀವ ಹಿಂಡುತಿದೆ ಕಾಣದೊಂದು ಹಸ್ತ’ ಎಂಬ ಸಾಲು ಬರೆದರು. ಅಶ್ವತ್ಥ ಇದಕ್ಕೆ ಪುರಿಯಾ ಧನಶ್ರೀ ರಾಗದಲ್ಲಿ ಸಂಗೀತ ಮಾಡಿದರು. ಅದೆಷ್ಟು ಜನಪ್ರಿಯ ಆಯ್ತು ಅಂದರೆ ಧಾರಾವಾಹಿಯನ್ನೂ ಮೀರಿ ಫೇಮಸ್ ಆಯ್ತು. ‘ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ’ ಎಂಬಂಥಾ ಸಾಲುಗಳು, ತಾಯಿಯ ಬಗೆಗಿನ ಸಾಲುಗಳೂ ಇದ್ದವು.
ಆಮೇಲೆ ಈ ಹಾಡನ್ನು ಎಲ್ಲೆಲ್ಲೂ ಹಾಡೋದಕ್ಕೆ ಶುರು ಮಾಡಿದರು. ನಾನೆಲ್ಲಿ ಹೋದರೂ ಆ ಹಾಡು. ಒಬ್ಬ ವ್ಯಕ್ತಿಯಾದ ನನ್ನನ್ನು ತಮ್ಮ ಹಾಡಿನ ಮೂಲಕ ಗುರುತಿಸುವ ಹಾಗೆ ಮಾಡಿದರು ಎಚ್ಎಸ್ವಿ. ಏನು ಕಥೆ ಅಂತ ಕೇಳಿ ಒಂದು ಡ್ರಾಫ್ಟ್ ಮರೆಯೋರು. ಆಮೇಲೆ ಸಾಲುಗಳನ್ನು ಬರೆಯುತ್ತಾ ಹೋಗುವುದು ಅವರ ಶೈಲಿ.
ನನ್ನ ‘ಮಗಳು ಜಾನಕಿ’ ಧಾರಾವಾಹಿಗೆ ‘ಬೆಂಕಿಯಿಂದ ಎದ್ದ ಬೆಳಕು ಮಗಳು ಜಾನಕಿ’ ಎಂಬ ಸಾಲು ಬರೆದಿದ್ದರು. ನಾನು ಅಲ್ಲಿ ಬೆಂಕಿಯ ಬದಲು ಅಗ್ನಿ ಹಾಕಿದರೆ ಚೆನ್ನಾಗಿರುತ್ತೇನೋ ಅಂದೆ. ಅವರು ಮುಕ್ತ ಮನಸ್ಸಿಂದ ಇದನ್ನು ಶ್ಲಾಘಿಸಿ ಹಾಗೇ ಬರೆದರು. ಹೆಚ್ಎಸ್ವಿ ಅವರ ಗೀತೆಗಳಲ್ಲಿ ರೂಪಕಗಳು ಬಹಳ ಗಮನ ಸೆಳೆಯುತ್ತವೆ. ‘ಕನ್ನಡಿಯಲ್ಲಿ ಸಾವಿರಾರು ರೂಪಗಳು. ಒಂದಕ್ಕಾಗದರೂ ಕನ್ನಡಿಯ ಜ್ಞಾಪಕ ಇದೆಯಾ’ ಅನ್ನುವಂಥಾ ರೂಪಕಗಳಿವೆ.
ಪ್ರತಿಯೊಬ್ಬನೂ ದುಃಖಜೀವಿ ಅನ್ನುತ್ತಿದ್ದರು. ಸಾಹಿತ್ಯ ಆ ದುಃಖದಿಂದ ಆಚೆ ಮನುಷ್ಯನನ್ನು ಕರ್ಕೊಂಡು ಬರುವಂಥಾದ್ದು. ಮನುಷ್ಯನ ಬದುಕೇ ಯಾತನೆ ಅಂತ. ಕಣ್ಣೀರನ್ನು ಅರಸಿಕೊಂಡು ಹೋದರೆ ಅದೇ ಕಾವ್ಯ ಅನ್ನುತ್ತಿದ್ದರು ಹೆಚ್ಎಸ್ವಿ. ಅವರ ಪ್ರಕಾರ ಬದುಕಿನಲ್ಲಿ ಸ್ಥಾಯಿ ವಿಷಾದ. ಅವರ ಅಗಲುವಿಕೆ ನನಗೆ, ಸಮಾಜಕ್ಕೆ ಬಹುದೊಡ್ಡ ನಷ್ಟ. ನಾನೀಗ ಧಾರಾವಾಹಿ ಮಾಡಿದ್ರೆ ಅದರೊಳಗಿನ ಭಾವ ಅರಿತು ಶೀರ್ಷಿಕೆ ಬರೆಯುವವರು ಯಾರೂ ಇಲ್ಲ!
ಕನ್ನಡದ ಸಾತತ್ಯದ ಕವಿ ಹೆಚ್ಎಸ್ವಿ : ವಿಜಯಶಂಕರ್
ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರು ಕನ್ನಡದ ಕಾವ್ಯ ಸಾತತ್ಯವನ್ನು, ಜೀವಂತಿಕೆಯನ್ನು ಪೋಷಿಸಿದ ಮುಖ್ಯ ಕವಿಗಳಲ್ಲಿ ಒಬ್ಬರು. ಪಂಪನಿಂದ ಕುಮಾರವ್ಯಾಸ, ಬೇಂದ್ರೆ, ಕುವೆಂಪು, ಪುತಿನ, ಕೆಎಸ್ನ, ಅಡಿಗ ಮೊದಲಾದವರವರೆಗೆ ಬೆಳೆದ ಅಭಿಜಾತ ಕಾವ್ಯ ಪರಂಪರೆಯನ್ನು ರೂಢಿಸಿ ಮುಂದುವರಿಸಿದ ಇಂದಿನ ಕವಿಗಳಲ್ಲಿ ಪ್ರಮುಖರು. ಫಲ ಬಿಡುವ ವೃಕ್ಷದಂತೆ ಕನ್ನಡ ಕಾವ್ಯದ ಬೀಜ ಪ್ರವೃತ್ತಿಯನ್ನು ಸೃಷ್ಟಿ ರೂಪದಲ್ಲಿ ಮುಂದುವರಿಸಿದವರು.
ಹೆಚ್ಎಸ್ವಿ ಮುಖ್ಯವಾಗಿ ಕವಿಗಳು. ಕವಿ ಅಂತ ಹೇಳುವುದೇ ಜನ ಸಮುದಾಯ ಒಬ್ಬ ಲೇಖಕನನ್ನು ಗೌರವಿಸುವ ರೀತಿ.ಅವರ ‘ಒಣಮರದ ಗಿಳಿಗಳು’ ಕವನಸಂಕಲನದಲ್ಲಿ ‘ಆವಾಹನೆ’ ಎಂಬ ಕವಿತೆಯಲ್ಲಿ ಪ್ರಾರ್ಥನೆಯಂತೆ ಅವರು ಕೇಳುವ ಪ್ರಸಂಗವಿದೆ. ‘ಶಬ್ದಗಳೇ ಒದಗಿ
ನಿಶ್ಶಬ್ದಗಳೇ ಒದಗಿ ಶಬ್ದ ಶಬ್ದಗಳ ಪ್ರಾರಬ್ಧಗಳೇ ಒದಗಿ’ ಎಂದು ಆರಂಭವಾಗುವ ಕವಿತೆಯಲ್ಲಿ ‘ನೀಲ ನಿಶ್ಯಬ್ದಕ್ಕೆ ಚೆಲ್ಲಿ ಬಿದ್ದಕ್ಷರದ ಅಕ್ಷರಗಳೇ ಒದಗಿ/ ಮಾತಲ್ಲಿ ಹೂತಂತ ನಾದ ಈ ನಾದ ನಾನಾದಗಳಿಗೆಗಳೇ ಈ ಗಳಿಗೆ ಒದಗಿ’ ಎಂದು ಸೊಗಸಾಗಿ ಹೇಳ್ತಾರೆ. ‘ಆ ನಾದ ಈ ನಾದ ಎಲ್ಲ ಸೇರಿ ನಾನಾಗಬೇಕಾಲ್ಲ.. ಅಂತ ಹೇಳುವ ಬಗೆಯದು.
ಎಚ್ಎಸ್ವಿ ಕನ್ನಡದ ಸಾತತ್ಯದ ಕವಿ. ಒಂದು ಮರ ಫಲ ಕೊಟ್ಟು, ಆ ಹಣ್ಣಿನ ಬೀಜದಿಂದ ಮತ್ತೊಂದು ಮರ ಹುಟ್ಟಿ ಮತ್ತೊಂದು ಹಣ್ಣಾಗಿ ಹೋದ ಹಾಗೆ, ಪ್ರತಿ ಮರದ ಹಣ್ಣೂ ಬೇರೆ ರುಚಿ ಇರುವ ಹಾಗೆ ಇದು ಫಲ ಸಾಂದ್ರತೆಯ ರೀತಿ. ಅಂಥಾ ಸಾತತ್ಯದ ಕವಿ ಎಚ್ಚೆಸ್ವಿ. ಕನ್ನಡದ ಈ ತನಕದ ಎಲ್ಲ ಶಕ್ತಿಯನ್ನು ಮುಂದಿನ ಪೀಳಿಗೆಗೆ ತಮ್ಮ ಕಾವ್ಯದ ಮೂಲಕ ದಾಟಿಸಿದವರು. ಸ್ವದರ್ಮದ ಹುಡುಕಾಟದಲ್ಲಿ ತೊಡಗಿಕೊಂಡವರು. ಸ್ವಾನುರಕ್ತರಾಗಲಿಲ್ಲ. ಸಮಾಜಕ್ಕೂ ಬದ್ಧವಾದ ಕವಿ, ಸ್ವಂತಿಕೆಗೂ ಬದ್ಧವಾದ ಕವಿ.
ನೋವಾ ನಾನಾ ನೋಡೇ ಬಿಡಾಣ ಮೋಹನ ಅಂತಿದ್ರು : ಉಪಾಸನಾ ಮೋಹನ್
ಎಚ್ಎಸ್ ವೆಂಕಟೇಶ್ ಮೂರ್ತಿ ಹಾಗೂ ನನ್ನದು ಮೂರು ದಶಕಗಳ ಬಾಂಧವ್ಯ. ಸಿ ಅಶ್ವತ್ಥ್ ಅವರು ಬದುಕಿರುವವರೆಗೂ ನಮ್ಮಿಬ್ಬರ ನಡುವೆ ಹೆಚ್ಚು ಒಡನಾಟ ಇರಲಿಲ್ಲ. ಆದರೆ ಆ ಬಳಿಕ ಬಹಳ ಹತ್ತಿರವಾದರು. ಅವರ 60ನೇ ವರ್ಷದ ಹುಟ್ಟುಹಬ್ಬಕ್ಕೆ ಅವರ ಕವಿತೆಗಳ ಸೋಲೋ ಆಲ್ಬಂ ಹೊರತಂದಿದ್ದೆ. ಅದನ್ನು ಅವರು ಮೆಚ್ಚಿಕೊಂಡಿದ್ದರು. ನನ್ನನ್ನು ಎಲ್ಲರಿಗೂ ದೊಡ್ಡ ಮಗ ಎಂದೇ ಪರಿಚಯ ಮಾಡಿಸುತ್ತಿದ್ದರು. ಅವರು ತೀರಿಕೊಂಡದ್ದು ಶುಕ್ರವಾರ ಮುಂಜಾನೆ, ಗುರುವಾರ ರಾತ್ರಿ ವೀಡಿಯೋ ಕಾಲ್ ಮಾಡಿಸಿದ್ದರು. ಮೈ ಮುಖಕ್ಕೆಲ್ಲ ನಳಿಕೆ ಸಿಕ್ಕಿಸಿದ್ದ ಕಾರಣ ಹೆಚ್ಚೇನೂ ಮಾತನಾಡಲಾಗಲಿಲ್ಲ, ಹೇಗಿದ್ದೀರಿ ಸರ್ ಅಂದ್ರೆ ಥಂಬ್ಸ್ ಅಪ್ ಮಾಡಿದ್ದರು. ಎಚ್ಎಸ್ವಿ ಅವರ ಕೊನೆಯ ದಿನಗಳು ಯಾತನಾಮಯವಾಗಿದ್ದವು. ಫ್ರಾಸ್ಟ್ರೇಟ್ ಕ್ಯಾನ್ಸರ್ನಿಂದ ಅವರು ಬಹಳ ವೇದನೆ ಅನುಭವಿಸುತ್ತಿದ್ದರು. ಭೇಟಿಗೆ ಬಂದ ಆಪ್ತರ ಬಳಿ ನೀವು ಕಾಲೊತ್ತಿದರೆ ಪುಣ್ಯ ಬರುತ್ತೆ ಅಂತ ಹೇಳ್ತಿದ್ರು. ಆದರೂ ಇದು ಅವರ ಜೀವನೋತ್ಸಾಹ ತಗ್ಗಿಸಲಿಲ್ಲ. ಅವರು ಇಂಥಾ ನೋವಲ್ಲೂ ಮುಕ್ತಕಗಳನ್ನು ಬರೆಯುತ್ತಿದ್ದರು. ‘ನೋವಾ ನಾನಾ ನೋಡೇ ಬಿಡಾಣ ಮೋಹನ’ ಎನ್ನುವುದು ಅವರು ಆಗಾಗ ನನ್ನ ಬಳಿ ಹೇಳುತ್ತಿದ್ದ ಮಾತು. ಹೆಚ್ಎಸ್ವಿ ಅವರ ಜೊತೆಗೆ ಹಲವಾರು ಕಡೆ ಪ್ರಯಾಣ ಮಾಡಿದ್ದೀನಿ. ಹೆಚ್ಎಸ್ವಿ ಅವರು ಬಹಳ ಫುಡೀ. ಒಂದು ಸೀಬೆ ಕಾಯಿ ಗಾಡಿ ಕಂಡ್ರೆ ಸಾಕು, ‘ನಿಲ್ಸ್ ನಿಲ್ಸ್ ನಿಲ್ಸಿ’ ಅನ್ನೋರು. ಸೌತೆಕಾಯಿ ಕಂಡ್ರೂ ನಿಲ್ಲಿಸಬೇಕು. ಹಲಸಿನ ಹಣ್ಣು ಅಂದ್ರಂತೂ ಪ್ರಾಣ. ನಮ್ಮ ಪ್ರಯಾಣದುದ್ದಕ್ಕೂ ಅವರು ಹೀಗೆ ಏನಾದರೊಂದು ತಿನ್ನುತ್ತಲೇ ಇರುತ್ತಿದ್ದರು. ಬೇರೆ ಬೇರೆ ಊರುಗಳಿಗೆ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿನ ಸ್ಥಳೀಯ ತಿನಿಸು ಕೊಟ್ಟರೆ ಎಲ್ಲದರ ರುಚಿಯನ್ನೂ ನೋಡೋರು. ಹಾಗಂತ ತಿನ್ನೋದು ಮಿತವಾಗಿಯೇ. ಆದರೆ ಪ್ರತಿಯೊಂದರ ರುಚಿ ನೋಡುವ ಕುತೂಹಲ ಅವರದಾಗಿತ್ತು. ನಾನು ಅವರು ತಿನ್ನೋದನ್ನು ಕುತೂಹಲದಿಂದ ಗಮನಿಸುತ್ತಿದ್ದೆ.
ಅವರು ಹೊಸ ಕವಿತೆ ಬರೆದಾಗ ನನಗೆ ಕಳಿಸುವ ಅಭ್ಯಾಸ ಇತ್ತು. ಅವರು ಪದೇ ಪದೇ ರಾಧಾ ಕೃಷ್ಣರ ಬಗ್ಗೆ ಬರೆದಾಗ, ‘ಬೇರೆ ಕೊಡಿ ಸಾರ್’ ಎನ್ನುತ್ತಿದ್ದೆ. ಅವರು ಕವಿತೆಗಳಲ್ಲದೇ ಬೇರೆ ಪುಸ್ತಕ ಕೊಟ್ರೆ, ‘ಪುಸ್ತಕ ಬೇಡ ಸರ್’ ಅನ್ನುತ್ತಿದ್ದೆ. ಅದನ್ನೆಲ್ಲ ಅವರು ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದರು. ಹೀಗೆ ಹೆಚ್ಎಸ್ವಿ ಜೊತೆಗೆ ಒಡನಾಡಿದ ಪ್ರತೀಕ್ಷಣವೂ ನನಗೆ ಅವಿಸ್ಮರಣೀಯ.