ಮತ್ತೆಂದೂ ಬಾರದಿರಲಿ ಕರಾಳ ದಿನಗಳು : ಕಾರಣ ಹೇಳದೆ ನಾನ್ನನ್ನೂ 18 ತಿಂಗಳು ಜೈಲಿನಲ್ಲಿ ಇಟ್ಟಿದ್ದರು!

Sujatha NRPublished : Jun 24, 2025 11:08 AM

ತುರ್ತು ಪರಿಸ್ಥಿತಿ ಬಂದು ಹೋಗಿ 50 ವರ್ಷ ಆಯ್ತು. ಇದನ್ನು ಇವತ್ತಿನ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು. ಇದು ಎಂದೂ ಈ ದೇಶಕ್ಕೆ ಮತ್ತೆ ಬರಬಾರದು

ತುರ್ತು ಪರಿಸ್ಥಿತಿ ಬಂದು ಹೋಗಿ 50 ವರ್ಷ ಆಯ್ತು. ಇದನ್ನು ಇವತ್ತಿನ ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು. ಇದು ಎಂದೂ ಈ ದೇಶಕ್ಕೆ ಮತ್ತೆ ಬರಬಾರದು. ಅವತ್ತಿನ ಘಟನೆಗಳನ್ನು ಯುವ ಜನತೆಗೆ ತಿಳಿಸೋಣ. ಇದರ ಅರಿವು ಇದ್ದಂತೆ ಇಲ್ಲ. ಇದರ ಅರಿವು ಅಗತ್ಯವಾಗಿ ಇರಲೇಬೇಕು. ಇದರ ಜೊತೆಗೆ ತುರ್ತು ಪರಿಸ್ಥಿತಿಗೆ ಕಾರಣರು ಯಾರು ಎಂಬ ಬಗ್ಗೆ ಚರ್ಚೆ ಅಗತ್ಯ. ತಪ್ಪು ಮಾಡಿದವರು ಯಾರು? ಯಾಕಾಯ್ತು ಈ ಬಗ್ಗೆ ಚರ್ಚೆ ಅಗತ್ಯ. ಇದರ ಹಿಂದೆ ಏನಿತ್ತು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

 ಅವತ್ತು ಈ ದೇಶ ಆಳುತ್ತಿದ್ದು ಕಾಂಗ್ರೆಸ್ ಪಕ್ಷ, ಇಂದಿರಾಗಾಂಧಿ ಸರ್ಕಾರ. ಏನೇ ಆಗಲಿ ಅಧಿಕಾರ ಬಿಡುವುದಿಲ್ಲ. ಈ ದೇಶ ಹಾಳಾದರೂ ಪರವಾಗಿಲ್ಲ. ದೇಶದ ಒಳ್ಳೆಯ ಸಂಸ್ಕೃತಿ, ಒಳ್ಳೊಳ್ಳೆ ನಡತೆಗಳು ಹಾಳಾದರೂ ಪರವಾಗಿಲ್ಲ ನಾನು ಅಧಿಕಾರದಲ್ಲಿ ಇರಬೇಕು ಎಂಬ ಹುಚ್ಚು ಮನೋಭಾವನೆ ಅವರಲ್ಲಿತ್ತು. ಮತ್ತು ಇದರ ವಿರುದ್ಧ ಯಾರೇ ಬಂದರೂ ಅವರು ಯಾರೇ ಇರಲಿ, ಅಟಲ್ ಬಿಹಾರಿ ವಾಜಪೇಯಿ, ಜಯಪ್ರಕಾಶ್ ನಾರಾಯಣ್, ಲಾಲ್ ಕೃಷ್ಣ ಅಡ್ವಾಣಿ ಎಲ್ಲರನ್ನೂ ತೆಗೆದುಕೊಂಡು ಹೋಗಿ ಜೈಲಿಗೆ ಹಾಕಿದ್ರು. ನನ್ನ ಸ್ವಂತ ಅನುಭವ ಹೇಳೋದಾದ್ರೆ- ನನ್ನನ್ನು ಬೆಳಗಾಂ ಜೈಲಿನಲ್ಲಿ 18 ತಿಂಗಳು ಇಟ್ಟಿದ್ದರು. ಯಾಕೆ ಇಟ್ಟಿದ್ದರು ಅಂತನೂ ಹೇಳಲಿಲ್ಲ. ಕಡೆಗೆ ಒಂದು ದಿನ ಬಿಟ್ಟರು.. ಯಾಕೆ ಬಿಟ್ರಿ ಅಂತ ಕೇಳಿದ್ರೆ ಅದಕ್ಕೂ ಉತ್ತರ ಇಲ್ಲ. ಈ ರೀತಿಯ ಹುಚ್ಚುತನ ಇತ್ತು. ಇಂತ ವರ್ತನೆ ಮೂಲಕ ವಿರೋಧಿಗಳನ್ನು ಧಮನ ಮಾಡಿ ಸರ್ಕಾರ ನಡೆಸುವ, ದೇಶ ಆಳುತ್ತೇನೆ ಎಂಬ ಮನಸ್ಥಿತಿ. ಇವತ್ತು ಕಾಂಗ್ರೆಸ್‌ನವರು ಭಾರಿ ಮಾತನಾಡುತ್ತಾರೆ- ಕೋರ್ಟು, ಸಂವಿಧಾನ ಎಂದೆಲ್ಲಾ ಹೇಳುತ್ತಾರೆ.

ಅಂದು ಅಲಹಬಾದ್ ಹೈಕೋರ್ಟು, ಅಮ್ಮಾ ತಾಯಿ, ನೀನು ತಪ್ಪು ಮಾಡಿದಿ, ನೀನು ಅಧಿಕಾರ ಬಿಟ್ಟು ಇಳಿ, ಆರು ವರ್ಷ ನೀ ಚುನಾವಣೆಗೆ ಸ್ಪರ್ಧಿಸುವಂತಿಲ್ಲ- ಎಂದು ಹೇಳಿತು. ಇದನ್ನೇ ಹಿಂದೆಮುಂದೆ ಮಾಡಿ, ತುರ್ತು ಪರಿಸ್ಥಿತಿ ಹೇರಿ ಅಧಿಕಾರ ಉಳಿಸಿಕೊಂಡು ಅಧಿಕಾರದಲ್ಲಿ ಮುಂದುವರೆದ್ರು. ಅಷ್ಟೇ ಅಲ್ಲ, ಸಂವಿಧಾನವನ್ನೇ ತಿದ್ದುಪಡಿ ಮಾಡಿದ್ರು. ಐದು ವರ್ಷ ಇದ್ದ ಪಾರ್ಲಿಮೆಂಟ್ ಅವಧಿನ ಆರು ವರ್ಷ ಮಾಡಿದ್ರು. ಇಡೀ ವಿರೋಧ ಪಕ್ಷ ಜೈಲಿನಲ್ಲಿ ಇದ್ದಾಗ ಸಂವಿಧಾನ ತಿದ್ದುಪಡಿ ಮಾಡಿದ್ರು. 

ಸಂವಿಧಾನದ ಮೂಲತತ್ವಗಳನ್ನೇ ತಿದ್ದುಪಡಿ ಮಾಡಿದ್ರು. ಅತ್ಯಾಚಾರ-ಅನಾಚಾರ- ಹಿಂಸೆ ಮಾಡಿದ್ರು. ಈ ಎಲ್ಲಾ ಘಟನೆಗಳಿಗೆ ಇಂದಿನ ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಬೇಕಿತ್ತು, ಅವರು ಕೇಳಿಲ್ಲ. ಇವತ್ತಿನ ಜನಾಂಗಕ್ಕೆ 1975ರ ತುರ್ತು ಪರಿಸ್ಥಿತಿ ಅನಾಚಾರಗಳ ನೆನಪು ಮಾಡಿಕೊಡಬೇಕು. ಜೊತೆಗೆ ಕಾಂಗ್ರೆಸ್ಸಿಗರು ಬದಲಾಗಿದ್ದಾರಾ ಅಂತ ಪ್ರಶ್ನೆ ಇಡಬೇಕಿದೆ. ನನ್ನ ಪ್ರಕಾರ, ಅವರು ಬದಲಾಗಿಲ್ಲ. ಸುಳ್ಳು ಹೇಳ್ತಾರೆ, ಮೋಸ ಮಾಡ್ತಾರೆ... ಏನು ಬೇಕಾದರೂ ಮಾಡ್ತಾರೆ. ಪ್ರಧಾನ ಮಂತ್ರಿಗಳ ವಿರುದ್ಧ ಅಸಹ್ಯಪದ ಬಳಸುತ್ತಿದ್ದಾರೆ. ಏನು ಬೇಕಾದರೂ ಮಾಡುವ ಪ್ರವೃತ್ತಿ ಇದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಅವತ್ತು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ ಮನಸ್ಸುಗಳಿಗೆ ಸಮಾಧಾನ ಆಗತ್ತೆ...

-ಡಿ.ಎಚ್. ಶಂಕರಮೂರ್ತಿ, ಮಾಜಿ ಸಭಾಪತಿಗಳು.

Read more Articles on