ನಿಮ್ಮ ಹೃದಯದ ಕವಾಟವನ್ನು ರಕ್ಷಿಸಲು 9 ಮಾರ್ಗಗಳು

KannadaprabhaNewsNetwork |  
Published : Mar 21, 2026, 02:30 AM IST
ಹೃದಯ | Kannada Prabha

ಸಾರಾಂಶ

ಅಪೋಲೋ ಹಾಸ್ಪಿಟಲ್ಸ್ ಬನ್ನೇರುಘಟ್ಟದ ಸೀನಿಯರ್ ಕನ್ಸಲ್ಟೆಂಟ್ ಕಾ ರ್ಡಿಯಾಲಜಿಸ್ಟ್ ಡಾ. ಗಿರೀಶ್ ಬಿ. ನವಸುಂದ ಅವರು ಹೃದಯ ಕವಾಟವನ್ನು ಆರೋಗ್ಯಕರವಾಗಿ ಇರಿಸುವ ಕುರಿತು ಕೆಲವು ಸಲಹೆ ಕೊಟ್ಟಿದ್ದಾರೆ. ಓದಿ ನೋಡಿ.

- ಡಾ. ಗಿರೀಶ್ ಬಿ. ನವಸುಂದ, ಸೀನಿಯರ್ ಕನ್ಸಲ್ಟೆಂಟ್ ಕಾರ್ಡಿಯಾಲಜಿಸ್ಟ್, ಲೀಡ್ ಕನ್ಸಲ್ಟೆಂಟ್ - ಸ್ಟ್ರಕ್ಚರಲ್ ಹಾರ್ಟ್ ಡಿಸೀಸ್ ಮತ್ತು ಹಾರ್ಟ್ ಫೇಲ್ಯೂರ್, ಅಪೋಲೋ ಹಾಸ್ಪಿಟಲ್ಸ್ ಬನ್ನೇರುಘಟ್ಟ, ಬೆಂಗಳೂರು.ಹೃದಯದ ಕವಾಟದ ಸಮಸ್ಯೆಗಳು ಗಂಭೀರವಾಗುವವರೆಗೆ ಅವು ಹಲವು ಬಾರಿ ಗಮನಕ್ಕೆ ಬರುವುದಿಲ್ಲ. ಭಾರತದಲ್ಲಿ ಲಕ್ಷಾಂತರ ಜನರು ಬಾಲ್ಯದ ಸೋಂಕುಗಳಿಂದ ಅಥವಾ ವಯಸ್ಸಾದ ಕಾರಣದಿಂದ ಹಾನಿಗೊಳಗಾದ ಕವಾಟದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಈ ಹೆಚ್ಚಿನ ಹಾನಿಗಳನ್ನು ತಡೆಗಟ್ಟಬಹುದು. ಹಾಗಾಗಿ ಈ ಕುರಿತು ಪ್ರತಿಯೊಬ್ಬರೂ ತಿಳಿಯಬೇಕಾದ 10 ಪ್ರಮುಖ ಅಂಶಗಳು ಇಲ್ಲಿವೆ:

1. ಆರಂಭಿಕ ಎಚ್ಚರಿಕೆ ಲಕ್ಷಣಗಳನ್ನು ತಿಳಿಯಿರಿ

ಹೃದಯದ ಕವಾಟದ ಸಮಸ್ಯೆಗಳು ಇದ್ದಕ್ಕಿದ್ದಂತೆ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುವುದಿಲ್ಲ. ವಿವರಿಸಲಾಗದ ಆಯಾಸ, ದೈನಂದಿನ ಚಟುವಟಿಕೆಗಳ ಸಮಯದಲ್ಲಿ ಉಸಿರಾಟದ ತೊಂದರೆ, ಕಾಲು ಅಥವಾ ಪಾದಗಳಲ್ಲಿ ಬಾವು, ತಲೆಸುತ್ತು ಅಥವಾ ಎದೆಯಲ್ಲಿ ಢವಢವ ಎನಿಸುವ ಆತಂಕಗಳ ಬಗ್ಗೆ ಎಚ್ಚರವಿರಲಿ. ಈ ಲಕ್ಷಣಗಳನ್ನು ಸಾಮಾನ್ಯವಾಗಿ ಒತ್ತಡ ಅಥವಾ ವಯಸ್ಸಾದ ಕಾರಣ ಎಂದು ನಿರ್ಲಕ್ಷಿಸಲಾಗುತ್ತದೆ; ಆದರೆ ಹಾಗೆ ಮಾಡಬಾರದು.

2. ಪ್ರತಿ ವರ್ಷ ಹೃದಯದ ತಪಾಸಣೆ ಮಾಡಿಸಿಕೊಳ್ಳಿ

ವಾರ್ಷಿಕವಾಗಿ ಮಾಡಿಸಿಕೊಳ್ಳುವ ಸಾಮಾನ್ಯ ಆರೋಗ್ಯ ತಪಾಸಣೆ, ಅದರಲ್ಲೂ ಸ್ಟೆತೊಸ್ಕೋಪ್ ಪರೀಕ್ಷೆಯು ಹೃದಯದ ಅಸಹಜ ಶಬ್ದಗಳನ್ನು ಅವು ಗಂಭೀರವಾಗುವ ಮೊದಲೇ ಪತ್ತೆಹಚ್ಚಬಲ್ಲದು. ಕುಟುಂಬದಲ್ಲಿ ಯಾರಿಗಾದರೂ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸವಿದ್ದರೆ, ಪ್ರತಿ ವರ್ಷ ವೈದ್ಯರನ್ನು ಭೇಟಿ ಮಾಡುವುದು ಕೇವಲ ಆಯ್ಕೆಯಲ್ಲ, ಅದು ಅತ್ಯಗತ್ಯ.3. ಅಸಹಜ ಭಾವ ಆವರಿಸಿದರೆ ಎಕೋಕಾರ್ಡಿಯೋಗ್ರಾಮ್ ಪರೀಕ್ಷೆ ಮಾಡಿಸಿ

ಎಕೋಕಾರ್ಡಿಯೋಗ್ರಾಮ್ ಎನ್ನುವುದು ಹೃದಯದ ಸರಳ ಮತ್ತು ನೋವಿಲ್ಲದ ಅಲ್ಟ್ರಾಸೌಂಡ್ ಪರೀಕ್ಷೆಯಾಗಿದೆ. ಕವಾಟದ ಕಾಯಿಲೆಯನ್ನು ಮೊದಲೇ ಪತ್ತೆಹಚ್ಚಲು ಇದು ಅತ್ಯಂತ ವಿಶ್ವಾಸಾರ್ಹ ಮಾರ್ಗ. ಕಾರಣವಿಲ್ಲದೆ ಉಸಿರಾಟದ ತೊಂದರೆ, ಸುಸ್ತು ಅಥವಾ ತಲೆಸುತ್ತು ಕಾಣಿಸಿಕೊಂಡರೆ, ಈ ಪರೀಕ್ಷೆ ಮಾಡಿಸಿಕೊಳ್ಳುವುದು ನೀವು ತೆಗೆದುಕೊಳ್ಳುವ ಅತ್ಯಂತ ಪ್ರಮುಖ ಆರೋಗ್ಯ ನಿರ್ಧಾರವಾಗಬಹುದು.4. ವಯಸ್ಸಿಗೆ ಅನುಗುಣವಾದ ತಪಾಸಣೆ ಮಾರ್ಗಸೂಚಿಗಳನ್ನು ಅನುಸರಿಸಿ

ವಿವಿಧ ವಯೋಮಾನದವರಿಗೆ ಬೇರೆ ಬೇರೆ ರೀತಿಯ ಅಪಾಯಗಳಿರುತ್ತವೆ. 18-40 ವರ್ಷದವರು ಗಂಟಲು ಸೋಂಕನ್ನು ತಕ್ಷಣವೇ ಗುಣಪಡಿಸಿಕೊಳ್ಳಬೇಕು. 40-60 ವರ್ಷದವರು ಆಯಾಸ ಮತ್ತು ಉಸಿರಾಟದ ಬದಲಾವಣೆಗಳ ಬಗ್ಗೆ ಗಮನ ಹರಿಸಬೇಕು. 60 ವರ್ಷ ಮೇಲ್ಪಟ್ಟವರು ವಯಸ್ಸಾದವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾದ ‘ಅಯೋರ್ಟಿಕ್ ಸ್ಟೆನೋಸಿಸ್’ ಪತ್ತೆಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು.5. ಸುಸ್ತನ್ನು ಕೇವಲ ಒತ್ತಡ ಅಥವಾ ವಯಸ್ಸಿನ ಕಾರಣ ಎಂದು ತಳ್ಳಿಹಾಕಬೇಡಿ

ಆಯಾಸವು ಹೃದಯಕ್ಕೆ ಸಂಬಂಧಿಸಿದ ಅತ್ಯಂತ ನಿರ್ಲಕ್ಷಿತ ಲಕ್ಷಣವಾಗಿದೆ. ಹಾನಿಗೊಳಗಾದ ಕವಾಟದ ಮೂಲಕ ಹೃದಯವು ರಕ್ತವನ್ನು ಪಂಪ್ ಮಾಡಲು ಕಷ್ಟಪಡುತ್ತಿದೆ ಎಂಬುದರ ಮೊದಲ ಸಂಕೇತವಿದು. ಆಯಾಸವು ನಿರಂತರವಾಗಿದ್ದರೆ ಮತ್ತು ವಾರದಿಂದ ವಾರಕ್ಕೆ ಉಲ್ಬಣಗೊಳ್ಳುತ್ತಿದ್ದರೆ, ವೈದ್ಯಕೀಯ ತಪಾಸಣೆ ಮಾಡಬೇಕಿದೆ.6. ರಕ್ತದೊತ್ತಡವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ

ನಿರಂತರ ಅಧಿಕ ರಕ್ತದೊತ್ತಡವು ಹೃದಯವು ಪ್ರತಿ ಬಡಿತಕ್ಕೂ ಹೆಚ್ಚು ಶ್ರಮವಹಿಸುವಂತೆ ಮಾಡುತ್ತದೆ, ಇದು ಕಾಲಾನಂತರದಲ್ಲಿ ಕವಾಟಗಳ ಮೇಲೆ ಭಾರಿ ಒತ್ತಡವನ್ನು ಹೇರುತ್ತದೆ. ಇದು ಕವಾಟಗಳು ಸವೆಯಲು ಅಥವಾ ಗಟ್ಟಿಯಾಗಲು ಕಾರಣವಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಕವಾಟದ ಆರೋಗ್ಯವನ್ನು ರಕ್ಷಿಸಲು ಇರುವ ಸರಳ ಮಾರ್ಗವಾಗಿದೆ.7. ಮಧುಮೇಹವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ

ನಿಯಂತ್ರಣವಿಲ್ಲದ ರಕ್ತದ ಸಕ್ಕರೆಯ ಅಂಶವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ಹೃದಯದ ಕವಾಟಗಳಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗುವುದನ್ನು ವೇಗಗೊಳಿಸುತ್ತದೆ. ಮಧುಮೇಹ ಇರುವವರಿಗೆ ಸಾಮಾನ್ಯ ಜನರಿಗಿಂತ ಮೊದಲೇ ಕವಾಟದ ಕಾಯಿಲೆ ಬರುವ ಅಪಾಯ ಹೆಚ್ಚು. ಆಹಾರ, ಮದ್ದು ಮತ್ತು ನಿಯಮಿತ ತಪಾಸಣೆಯ ಮೂಲಕ ಸಕ್ಕರೆ ಮಟ್ಟವನ್ನು ಸ್ಥಿರವಾಗಿಟ್ಟುಕೊಳ್ಳುವುದರಿಂದ ಹೃದಯವನ್ನು ರಕ್ಷಿಸಬಹುದು.8. ಆಧುನಿಕ ಚಿಕಿತ್ಸಾ ಆಯ್ಕೆಗಳನ್ನು ಅರ್ಥಮಾಡಿಕೊಳ್ಳಿ

ಹೃದಯದ ಕವಾಟದ ಕಾಯಿಲೆಯ ರೋಗನಿರ್ಣಯವಾದರೆ ಭಯಪಡಬೇಕಿಲ್ಲ. ಕವಾಟದ ರಿಪೇರಿ ಅಥವಾ ಬದಲಾವಣೆ ಚಿಕಿತ್ಸೆಗಳು ಈಗ ತುಂಬಾ ಸುಧಾರಿಸಿವೆ. ವಯಸ್ಸಾದವರಿಗೆ ಅಥವಾ ಹೆಚ್ಚಿನ ಅಪಾಯವಿರುವ ರೋಗಿಗಳಿಗೆ ಟಿಎವಿಆರ್ ನಂತಹ ತಂತ್ರಜ್ಞಾನದ ಮೂಲಕ ಓಪನ್-ಹಾರ್ಟ್ ಸರ್ಜರಿ ಇಲ್ಲದೆಯೇ ಸಣ್ಣ ಕೊಳವೆಯ ಸಹಾಯದಿಂದ ಕವಾಟವನ್ನು ಬದಲಾಯಿಸಬಹುದು. ಈಗ ಭಾರತೀಯ ನಿರ್ಮಿತ ಕವಾಟಗಳು ಲಭ್ಯವಿದ್ದು, ಈ ಚಿಕಿತ್ಸೆಯು ಸಾಮಾನ್ಯರಿಗೂ ಕೈಗೆಟುಕುವಂತಾಗಿದೆ.9. ಉಚಿತ ತಪಾಸಣಾ ಶಿಬಿರಗಳ ಪ್ರಯೋಜನ ಪಡೆಯಿರಿ

ಭಾರತದಾದ್ಯಂತ ಹೃದಯದ ಆರೋಗ್ಯ ಜಾಗೃತಿ ಮಾಸ ಮತ್ತು ಸಾರ್ವಜನಿಕ ಆರೋಗ್ಯ ಶಿಬಿರಗಳ ಸಂದರ್ಭದಲ್ಲಿ ಉಚಿತ ತಪಾಸಣೆಗಳು ಲಭ್ಯವಿರುತ್ತವೆ. ವಿಶೇಷವಾಗಿ ಗ್ರಾಮೀಣ ಪ್ರದೇಶದವರು ಅಥವಾ ತಜ್ಞ ವೈದ್ಯರ ಸೌಲಭ್ಯವಿಲ್ಲದವರು ಈ ಅವಕಾಶಗಳನ್ನು ತಪ್ಪಿಸಿಕೊಳ್ಳಬಾರದು. ಉಚಿತ ಶಿಬಿರದಲ್ಲಿ ಮೊದಲೇ ಪತ್ತೆಯಾದ ಕಾಯಿಲೆಗೆ ಚಿಕಿತ್ಸೆ ಪಡೆಯುವುದು ನಿಮ್ಮ ಜೀವವನ್ನೇ ಉಳಿಸಬಹುದು.

PREV

Recommended Stories

ತ.ನಾಡು ರೀತಿ ಇಲ್ಲೂ ಹೋಟೆಲ್‌ ವಿದ್ಯುತ್‌ ಸಬ್ಸಿಡಿ ಕೊಡಿ
ಬೆಲೆ ಏರಿಕೆ ನಡುವೆಯೇ ಯುಗಾದಿ ಹಬ್ಬಕ್ಕೆ ಹೂ, ಹಣ್ಣು ಖರೀದಿ ಜೋರು