ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ

Published : Jul 28, 2025, 11:45 AM IST
n chaluvarayaswamy

ಸಾರಾಂಶ

ಲಭ್ಯವಿರುವ ಯೂರಿಯಾವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕೊರತೆಯನ್ನು ಎದುರಿಸಬಹುದು. ಇದರ ಜೊತೆಗೆ, ರಸಗೊಬ್ಬರ ಕೊರತೆಯನ್ನು ಎದುರಿಸಲು ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ನ್ಯಾನೊ ಯೂರಿಯಾವನ್ನು ಬಳಸುವಂತೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ.

-ಎನ್.ಚಲುವರಾಯಸ್ವಾಮಿ, ಕೃಷಿ ಸಚಿವರು, ಕರ್ನಾಟಕ ಸರ್ಕಾರ.

ಕರ್ನಾಟಕದ ಕೃಷಿ ಕ್ಷೇತ್ರವು ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ರೈತರ ಕಷ್ಟಕರ ಶ್ರಮದಿಂದಾಗಿ ನಮ್ಮ ರಾಜ್ಯವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. 2025ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆ ವಿಸ್ತೀರ್ಣವು ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಈ ಯಶಸ್ಸಿನ ಜೊತೆಗೆ ಯೂರಿಯಾ ರಸಗೊಬ್ಬರದ ಬೇಡಿಕೆಯ ಹೆಚ್ಚಳವು ಸವಾಲಾಗಿ ಪರಿಣಮಿಸಿದೆ. ಈ ಲೇಖನದಲ್ಲಿ, ರಾಜ್ಯದ ಯೂರಿಯಾ ರಸಗೊಬ್ಬರದ ಪೂರೈಕೆ, ಬೇಡಿಕೆ, ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ.

2025ರ ಮುಂಗಾರು ಹಂಗಾಮಿಗೆ ರಾಜ್ಯಕ್ಕೆ ಒಟ್ಟು 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಬೇಡಿಕೆಯಿದೆ. ಏಪ್ರಿಲ್‌ನಿಂದ ಜುಲೈ 2025ರವರೆಗೆ ಕೇಂದ್ರ ಸರ್ಕಾರವು 6.82 ಲಕ್ಷ ಮೆ.ಟನ್ ಹಂಚಿಕೆ ಮಾಡಿದ್ದು, ಇದರಲ್ಲಿ 5.26 ಲಕ್ಷ ಮೆ.ಟನ್ ಸರಬರಾಜಾಗಿದೆ. ಆರಂಭಿಕ ದಾಸ್ತಾನು (3.46 ಲಕ್ಷ ಮೆ.ಟನ್) ಸೇರಿದಂತೆ ಒಟ್ಟು 8.73 ಲಕ್ಷ ಮೆ.ಟನ್ ಲಭ್ಯವಿದ್ದು, 7.20 ಲಕ್ಷ ಮೆ.ಟನ್ ಮಾರಾಟವಾಗಿ, 1.54 ಲಕ್ಷ ಮೆ.ಟನ್ ದಾಸ್ತಾನು ಉಳಿದಿದೆ. ಆದರೆ, ಜುಲೈ ತಿಂಗಳಿನ 2.25 ಲಕ್ಷ ಮೆ.ಟನ್ ಬೇಡಿಕೆಗೆ ಕೇವಲ 1.39 ಲಕ್ಷ ಮೆ.ಟನ್ (62%) ಮಾತ್ರ ಸರಬರಾಜಾಗಿದ್ದು, ಸುಮಾರು 87,040 ಮೆ.ಟನ್ ಕೊರತೆಯಿದೆ. ಏಪ್ರಿಲ್‌ನಿಂದ ಜುಲೈವರೆಗೆ ಕೇಂದ್ರ ಸರ್ಕಾರದಿಂದ ಇನ್ನೂ 1.52 ಲಕ್ಷ ಮೆಟ್ರಿಕ್ ಟನ್ ಸರಬರಾಜು ಬಾಕಿ ಇದೆ.

ಜಿಲ್ಲಾವಾರು ಯೂರಿಯಾ ವಿತರಣೆ

ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳ ಯೂರಿಯಾ ರಸಗೊಬ್ಬರದ ಬೇಡಿಕೆ, ಪೂರೈಕೆ ಮತ್ತು ದಾಸ್ತಾನು ವಿವರಗಳು ಈ ಕೆಳಗಿನಂತಿವೆ:

●ದಾವಣಗೆರೆ ಜಿಲ್ಲೆ: 33,004 ಮೆ.ಟನ್ ಬೇಡಿಕೆಗೆ 33,378 ಮೆ.ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 13,206 ಮೆ.ಟನ್), 3,914 ಮೆ.ಟನ್ ದಾಸ್ತಾನು ಉಳಿದಿದೆ.

●ಹಾವೇರಿ ಜಿಲ್ಲೆ: 40,601 ಮೆ.ಟನ್ ಬೇಡಿಕೆಗೆ 60,028 ಮೆ.ಟನ್ ಸರಬರಾಜಾಗಿದ್ದು, (ಆರಂಭಿಕ ದಾಸ್ತಾನು 19,262 ಮೆ.ಟನ್) 6,346 ಮೆ.ಟನ್ ದಾಸ್ತಾನು ಲಭ್ಯವಿದೆ.

●ಗದಗ ಜಿಲ್ಲೆ: 17,778 ಮೆ.ಟನ್ ಬೇಡಿಕೆಗೆ 21,410 ಮೆ.ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 6,857 ಮೆ.ಟನ್), 2,094 ಮೆ.ಟನ್ ದಾಸ್ತಾನು ಉಳಿದಿದೆ.

●ಧಾರವಾಡ ಜಿಲ್ಲೆ: 17,224 ಮೆ.ಟನ್ ಬೇಡಿಕೆಗೆ 23,433 ಮೆ.ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 7,212 ಮೆ.ಟನ್), 2,661 ಮೆ.ಟನ್ ದಾಸ್ತಾನು ಲಭ್ಯವಿದೆ.

●ಕೊಪ್ಪಳ ಜಿಲ್ಲೆ: 31,252 ಮೆ.ಟನ್ ಬೇಡಿಕೆಗೆ 34,653 ಮೆ.ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 12,328 ಮೆ.ಟನ್), 5,379 ಮೆ.ಟನ್ ದಾಸ್ತಾನು ಉಳಿದಿದೆ.

●ವಿಜಯನಗರ ಜಿಲ್ಲೆ: 26,293 ಮೆ.ಟನ್ ಬೇಡಿಕೆಗೆ 35,224 ಮೆ.ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 10,845 ಮೆ.ಟನ್), 3,722 ಮೆ.ಟನ್ ದಾಸ್ತಾನು ಲಭ್ಯವಿದೆ.

ಏಕಾಏಕಿ ಬೇಡಿಕೆ ಹೆಚ್ಚಳ

ರಾಜ್ಯದಲ್ಲಿ ಯೂರಿಯಾ ಬೇಡಿಕೆಯ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಮುಂಚಿತವಾಗಿ ಆರಂಭವಾಗಿದ್ದರಿಂದ ಬಿತ್ತನೆಯ ಕಾರ್ಯವು ಶೀಘ್ರವಾಗಿ ಪ್ರಾರಂಭವಾಯಿತು. ಇದರಿಂದ ಬಿತ್ತನೆ ವಿಸ್ತೀರ್ಣವು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ, ವಿಶೇಷವಾಗಿ ಮುಸುಕಿನ ಜೋಳದ ವಿಸ್ತೀರ್ಣವು ಸುಮಾರು 2 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಇದರ ಜೊತೆಗೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಸುಮಾರು 13,000 ಹೆಕ್ಟೇರ್‌ನಲ್ಲಿ ಮರುಬಿತ್ತನೆ ಕೈಗೊಳ್ಳಲಾಗಿದೆ. ತುಂಗಭದ್ರಾ, ಕೃಷ್ಣಾ, ಮತ್ತು ಕಾವೇರಿ ಜಲಾಶಯಗಳಿಂದ ಮುಂಚಿತವಾಗಿ ನೀರು ಬಿಡುಗಡೆಯಾದ ಕಾರಣ, ಅಚ್ಚುಕಟ್ಟು ಪ್ರದೇಶಗಳಲ್ಲಿ ನಾಟಿಯ ಕಾರ್ಯವು ಶೀಘ್ರವಾಗಿ ನಡೆಯಿತು. ಈ ಎಲ್ಲಾ ಅಂಶಗಳು ಯೂರಿಯಾ ಬೇಡಿಕೆಯನ್ನು ಹೆಚ್ಚಿಸಿವೆ.

ಯೂರಿಯಾ ಕೊರತೆಯನ್ನು ಎದುರಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮಾನ್ಯ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಈಗಾಗಲೇ 1.52 ಲಕ್ಷ ಮೆ.ಟನ್ ಯೂರಿಯಾದ ಬಾಕಿ ಸರಬರಾಜಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದ ಕೃಷಿ ಇಲಾಖೆಯ ಅಧಿಕಾರಿಗಳು ಕೇಂದ್ರದ ರಸಗೊಬ್ಬರ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶೀಘ್ರವಾಗಿ ರಾಜ್ಯಕ್ಕೆ ಅಗತ್ಯವಿರುವ ಯೂರಿಯಾವನ್ನು ಪೂರೈಸಲು ಕ್ರಮ ಕೈಗೊಳ್ಳುತ್ತಿದ್ದಾರೆ. ರಾಜ್ಯದಿಂದ ಆಯ್ಕೆಯಾದ ಸಂಸದರು ಹಾಗೂ ಕೇಂದ್ರ ಸಚಿವರು ರಾಜ್ಯಕ್ಕೆ ಅಗತ್ಯವಿರುವ ಯೂರಿಯಾವನ್ನು ತ್ವರಿತವಾಗಿ ಬಿಡುಗಡೆ ಮಾಡಿಸುವ ದಿಶೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವಂತೆ ನಾನು ಪತ್ರ ಮುಖೇನ ಮನವಿ ಮಾಡಿದ್ದೇನೆ. ಇದರ ಜೊತೆಗೆ, ಡಿ.ಎ.ಪಿ ರಸಗೊಬ್ಬರ ಕೊರತೆಯ ಸಂದರ್ಭದಲ್ಲಿ ಕಾಂಪ್ಲೆಕ್ಸ್ ರಸಗೊಬ್ಬರವನ್ನು ಪರ್ಯಾಯವಾಗಿ ಬಳಸುವ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗಿದೆ.

ನ್ಯಾನೊ ಬಳಸಿ ಫಲವತ್ತತೆ ಉಳಿಸಿ

ಅತಿಯಾದ ಯೂರಿಯಾ ಬಳಕೆಯಿಂದ ಮಣ್ಣಿನ ಫಲವತ್ತತೆ, ಮಾನವನ ಆರೋಗ್ಯ, ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಬೆಳೆಗಳು ಕೀಟಗಳಿಗೆ ಮತ್ತು ರೋಗಗಳಿಗೆ ಒಳಗಾಗುವ ಸಾಧ್ಯತೆಯೂ ಇದೆ. ಆದ್ದರಿಂದ, ರೈತರು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಾತ್ರ ಯೂರಿಯಾವನ್ನು ಬಳಸಬೇಕು. ಲಭ್ಯವಿರುವ ಯೂರಿಯಾವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕೊರತೆಯನ್ನು ಎದುರಿಸಬಹುದು. ಇದರ ಜೊತೆಗೆ, ರಸಗೊಬ್ಬರ ಕೊರತೆಯನ್ನು ಎದುರಿಸಲು ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ನ್ಯಾನೊ ಯೂರಿಯಾವನ್ನು ಬಳಸುವಂತೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ನ್ಯಾನೊ ಯೂರಿಯಾವು ಸಾಂಪ್ರದಾಯಿಕ ಯೂರಿಯಾಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುವುದರಿಂದ, ಇದು ಬೆಳೆಗಳಿಗೆ ಸಾರಜನಕವನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಒದಗಿಸುತ್ತದೆ. ಇದನ್ನು ಡ್ರೋನ್‌ಗಳ ಮೂಲಕ ಸಿಂಪಡಿಸುವುದರಿಂದ ಶ್ರಮ ಮತ್ತು ವೆಚ್ಚ ಎರಡೂ ಕಡಿಮೆಯಾಗುತ್ತದೆ. ಕೆಲವೆಡೆ ನಾನು ಸ್ವತಃ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ರೈತರಿಗೆ ನ್ಯಾನೊ ಯೂರಿಯಾದಿಂದ ಆಗುವ ಲಾಭಗಳ ಬಗ್ಗೆ ವಿವರಿಸಿದ್ದೇನೆ. ಈ ತಂತ್ರಜ್ಞಾನವು ರಾಸಾಯನಿಕ ಗೊಬ್ಬರಗಳಿಂದ ಉಂಟಾಗುವ ಮಣ್ಣಿನ ದೂಷಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದರಿಂದ ಮಣ್ಣಿನ ಫಲವತ್ತತೆಯನ್ನು ದೀರ್ಘಕಾಲೀನವಾಗಿ ಕಾಪಾಡಿಕೊಳ್ಳಬಹುದು. ರಾಜ್ಯ ಸರ್ಕಾರವು ಈ ತಂತ್ರಜ್ಞಾನವನ್ನು ರೈತರಿಗೆ ಒದಗಿಸಲು ಸಬ್ಸಿಡಿಗಳನ್ನು ಒದಗಿಸುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ನ್ಯಾನೊ ಯೂರಿಯಾದ ಬಳಕೆ ಜನಪ್ರಿಯವಾಗುತ್ತಿದೆ. ಡ್ರೋನ್ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಇದರಿಂದ ಆಧುನಿಕ ಕೃಷಿಯಲ್ಲಿ ರೈತರು ಮುಂಚೂಣಿಯಲ್ಲಿರುವಂತೆ ಮಾಡಲಾಗಿದೆ.

ಸುಸ್ಥಿರ ಕೃಷಿಗೆ ಪ್ರೋತ್ಸಾಹ

ರಾಸಾಯನಿಕ ಗೊಬ್ಬರಗಳಾದ ಡಿಎಪಿ ಮತ್ತು ಯೂರಿಯಾದ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಈ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರವು ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಮೂಲಕ ರೈತರಿಗೆ ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. ಸಾವಯವ ಕೃಷಿಯು ರಾಸಾಯನಿಕ ಗೊಬ್ಬರಗಳ ಬದಲಿಗೆ ಜೈವಿಕ ಗೊಬ್ಬರ, ಎರೆಗೊಬ್ಬರ, ಮತ್ತು ಕೀಟನಾಶಕಗಳಿಗೆ ಬದಲಾಗಿ ನೈಸರ್ಗಿಕ ಕೀಟ ನಿಯಂತ್ರಣ ವಿಧಾನಗಳನ್ನು ಬಳಸುತ್ತದೆ. ಕರ್ನಾಟಕದಲ್ಲಿ ಹಂತ ಹಂತವಾಗಿ ನೈಸರ್ಗಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವ ದಿಶೆಯಲ್ಲಿ ಸುಭಾಶ್ ಪಾಳೇಕರ್ ಅವರೊಂದಿಗೆ ವಿವಿಧ ಹಂತದಲ್ಲಿ ಚರ್ಚೆ ನಡೆಸಲಾಗುತ್ತಿದೆ.

ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲೆಯ ಜೋಯೊಡಾವನ್ನು ಸಾವಯವ ತಾಲೂಕನ್ನಾಗಿ ಘೋಷಣೆ ಮಾಡಲಾಗಿದ್ದು, ಸಾವಯವ ಕೃಷಿಗೆ ಅಗತ್ಯವಾದ ನೆರವನ್ನು ಕಲ್ಪಿಸುವ ಜೊತೆ ಮಾರುಕಟ್ಟೆ ಕಲ್ಪಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಹೆಚ್ಚಿನ ಬೇಡಿಕೆಯಿರುವ ಜಿಲ್ಲೆಗಳಿಗೆ ಆದ್ಯತೆಯ ಮೇರೆಗೆ ಯೂರಿಯಾ ಸರಬರಾಜು ಮಾಡಲು ಇಲಾಖೆಯು ಯೋಜನೆ ರೂಪಿಸಿದೆ. ರೈತರಿಗೆ ತೊಂದರೆ ಆಗದಂತೆ, ರಸಗೊಬ್ಬರದ ವಿತರಣೆಯನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ನಡೆಸಲಾಗುವುದು.

ಈ ಬಾರಿಯ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸಲಿದೆ. ಗುಣಮಟ್ಟದ ಬಿತ್ತನೆ ಬೀಜ, ಸಕಾಲಕ್ಕೆ ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ರೈತ ಬಾಂಧವರಿಗೆ ವಿತರಿಸಿ, ರಾಜ್ಯದ ಕೃಷಿ ಇಲಾಖೆಯು ರೈತರ ಜೊತೆಗೆ ಭುಜಕ್ಕೆ ಭುಜವಾಗಿ ನಿಂತು, ಈ ಮುಂಗಾರು ಹಂಗಾಮನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬದ್ಧವಾಗಿದೆ.

 

PREV
Read more Articles on

Recommended Stories

ರಿಪೋರ್ಟರ್ಸ್ ಡೈರಿ: ಸುಮ್ನಿರಮ್ಮ, ಆಂಜನೇಯನ ಹೆಸ್ರು ಹಾಳ್‌ಮ್ಯಾಡಬೇಡ
ಆರೋಗ್ಯಕ್ಕಾಗಿ ಒಂದಾದ 6 ಗೆಳೆಯರಿಂದ ಶುರುವಾಯ್ತು ಎಣ್ಣೆ ಗಾಣದ ಉದ್ಯಮ ಸಿಲ್ಕ್​ ಸಿಟಿ