- ಪ್ರಿಯಾ ಕೆರ್ವಾಶೆ
*ನಿಮ್ಮದೇ ಸ್ವತಂತ್ರ ಸಾಹಿತ್ಯ ಪಥ ರೂಪಿಸಿದ ಬಗೆಯನ್ನು ವಿವರಿಸುವಿರಾ?
ನನ್ನ ಮೊದಲ ಕಥಾ ಸಂಕಲನ, ‘ಒಡಪುಗಳು’(1978)ದಲ್ಲಿನ ಕಥೆಗಳನ್ನು ಓದಿದ ಹಿರಿಯರಾದ ಡಾ.ಯು.ಆರ್. ಅನಂತಮೂರ್ತಿಯವರು ನನಗೆ ಪತ್ರವೊಂದನ್ನು ಬರೆದು, ಘೋಷಣೆಗಳ ಬೆನ್ನುಹತ್ತದೆ ಅನುಭವ ನಿಷ್ಠತೆಯಲ್ಲಿ ಬರೆಯುವುದರ ಮಹತ್ವವನ್ನು ಹೇಳಿದ್ದರು. ನಂತರ, ನನ್ನ ಎರಡನೆಯ ಕಥಾ ಸಂಕಲನ, ‘ಪ್ರತಿಮೆಗಳು’ (1982) ಸಂಕಲನಕ್ಕೆ ಮುನ್ನಡಿ ಬರೆಯುತ್ತ ಅವರು, ‘... ನಿಮ್ಮ ಕಥೆಗಳಿಗೆ ಅಂಗಾಂಗ ಸಂಯೋಗದ, ಮುಟ್ಟಿದಲ್ಲಿ ಮಿಡಿಯಬಲ್ಲ ಸಜೀವತೆ ತರುವ ಪ್ರಯತ್ನ ನೀವು ಮಾಡುತ್ತೀರಿ ಎಂದು ನಾನು ತಿಳಿದಿದ್ದೇನೆ. ಇಂಥದನ್ನು ಮಾಡಬಲ್ಲರೆಂದೇ ದೇವನೂರು ಮಹಾದೇವ ನನ್ನ ಇನ್ನೊಬ್ಬ ಪ್ರಿಯ ಕಥೆಗಾರರು. ಅವರ ಕಥೆಗಳು ತಮ್ಮ ವಿಶಿಷ್ಟ ಲೋಕದೊಳಕ್ಕೂ ಮಿಡಿಯುತ್ತ, ನಮ್ಮ ಇಡೀ ಸಾಂಸ್ಕೃತಿಕ-ಸಾಮಾಜಿಕ ಸಂದರ್ಭಕ್ಕೂ ಮಿಡಿಯುವ ಆಶಯ ಹೊಂದಿರುವಂತೆ ಕಾಣುತ್ತವೆ. ನಿಮ್ಮ ಕಥೆಗಳಲ್ಲೂ ಅಲ್ಲಲ್ಲಿ ಸುಳಿಯುವ ಇಂಥಾ ಸಾಂಸ್ಕೃತಿಕ ಆಶಯ ಇನ್ನಷ್ಟು ಏಕಾಗ್ರವಾಗಬೇಕೆಂಬುದು ನನ್ನ ಆಸೆ. ಆದರೆ, ಅದು ಬುದ್ಧಿಪೂರ್ವಕವಾದ ತೀರ್ಮಾನದಿಂದ ಆಗುವಂಥದಲ್ಲ. ನಿಮ್ಮಲ್ಲಿರುವ ಸ್ನಾಯುಬಲವುಳ್ಳ ಭಾವಗೀತಾತ್ಮಕ ಅಂಶ, ಹಲವು ಸಂಗತಿಗಳನ್ನು ಮುಖಾಮುಖಿ ಮಾಡುವ ನಾಟಕಗಳು, ಕ್ರಮೇಣ, ನೀವು ಏನನ್ನು ಎಷ್ಟು ಹಚ್ಚಿಕೊಂಡ ಮನುಷ್ಯ ಎಂಬುದರಿಂದ ಪ್ರಭಾವಿತವಾಗುತ್ತ ಹೋಗುವುದರಿಂದ, ಅಪ್ರಯತ್ನವೆಂಬಂತೆ ನಿಮ್ಮ ಕಥೆಗಳಲ್ಲಿ ಒಡಮೂಡಬೇಕಾದ ಗುಣ ಅದು’ ಎಂದಿದ್ದರು.
ಅನಂತಮೂರ್ತಿಯವರು ಹೇಳಿರುವ ಮಾತಿನಲ್ಲಿ, ನನ್ನ ಕಥೆಗಳಲ್ಲಿನ ಗುಣ, ಮತ್ತು ಆ ಗುಣದ ಸಾರ್ಥಕ್ಯದ ಬಗೆಗೆ ನಾನು ನಡೆಸಬೇಕಾದ ಸಾಧನೆ-ಅನುಸಂಧಾನದ ಬಗೆಗೆ ಸ್ಪಷ್ಟವಾದ ಸೂಚನೆ ಇದ್ದಿತು. ಈ ಮಾತು, ನನ್ನಲ್ಲಿ ನನ್ನ ಬಗೆಗೆ ಒಂದು ಅಪಾರವಾದ ನಂಬಿಗೆಯನ್ನು ಹುಟ್ಟುಹಾಕಿತು. ಮತ್ತು, ಅವರ ಸೂಚನೆಯು ಇನ್ನು ಮುಂದೆ ನಾನು ಬರೆಯಬೇಕೆನ್ನುವುದಾದರೆ, ಅದು ತುಂಬ ಜವಾಬ್ದಾರಿಯ, ಸಾಧನೆಯ ಮೂಲಕ ನಡೆಯಬೇಕಾದದ್ದು ಎನ್ನುವ ಎಚ್ಚರವನ್ನೂ ಹುಟ್ಟಿಸಿತು... ಅಂತಲೇ, ಆರು ಕಥೆಗಳನ್ನು ಒಳಗೊಂಡಿರುವ, ನನ್ನ ಮುಂದಿನ ಸಂಕಲನ ‘ದೇಸಗತಿ’ ಬರುವುದಕ್ಕೆ ಹದಿಮೂರು ವರ್ಷಗಳ ದೀರ್ಘ ಸಮಯವೇ ಬೇಕಾಯಿತು. ಒಡಪುಗಳು ಸಂಕಲನಕ್ಕೆ ಬರೆದ ಎಲ್ಲೆಸ್ಸೆಸ್ರವರ ಮುನ್ನುಡಿಯಿಂದ, ಮತ್ತು ಪ್ರತಿಮೆಗಳು ಸಂಕಲನಕ್ಕೆ ಬರೆದ ಯುಆರ್ಎರವರ ಮಾತುಗಳಿಂದಷ್ಟೇ ಅಲ್ಲದೆ, ಕನ್ನಡದ ಹಿರಿಯ ಕಥೆಗಾರರಾದ ಚಿತ್ತಾಲ, ದೇಸಾಯಿ, ತೇಜಸ್ವಿಯವರ ಕಥನಗಳಿಂದಲೂ ನಾನು ಕಲಿಯುತ್ತ ಹೋದೆ. ಈ ಕಲಿಯುವಿಕೆಯನ್ನು ಕುರಿತಂತೆ ನಡೆದ ಅಂತಿಮ ಪರೀಕ್ಷೆಯನ್ನು ನಾನು ‘ಬಸತ್ತಿ’ ಎನ್ನುವ ಕಥೆಯ ಬರೆಹದ ಮೂಲಕ ಎದುರಿಸಿದ್ದೇನೆ. ‘ಬಸತ್ತಿ’ ನನ್ನ ಕಥನಗಾರಿಕೆಯ ಒಂದು ಮಹತ್ವದ ಹಂತ. ಆರಂಭಿಕ ಹೊಯ್ದಾಟಗಳನ್ನೆಲ್ಲ ನಿವಾರಿಸಿಕೊಂಡು, ನನ್ನದೇ ಆಗಿರುವ ಒಂದು ನುಡಿಗಟ್ಟನ್ನು ಸಾಧಿಸಿಕೊಳ್ಳುವಲ್ಲಿ ನನಗೆ ಈ ಕಥೆಯಲ್ಲಿ ಸಫಲತೆ ದೊರೆಯಿತು ಎಂದುಕೊಳ್ಳುತ್ತೇನೆ. ಬಸತ್ತಿ ಕಥೆಯ ಮೂಲಕ ನಾನು ನನ್ನ ಕಥನದ ಸ್ವತಂತ್ರ ಪಥವನ್ನು ಗುರುತಿಸಿ, ಸಾಧಿಸಿಕೊಂಡೆನೆಂದು ಅನಿಸುತ್ತದೆ.
*ಫೆಮಿನಿಸಂ ಬಗೆಗಿನ ನಮ್ಮ ಚಿಂತನೆ ಬದಲಾಗಬೇಕು ಅಂತ ಇತ್ತೀಚೆಗೆ ಹೇಳಿದಿರಿ. ಆ ಬಗ್ಗೆ ವಿವರಿಸುವಿರಾ?
ತುಂಬ ಸಂಕೀರ್ಣ ವಿಷಯವಿದು. ನೀವು ಹೇಳುವಂತೆ ಅದಕ್ಕೆ ದೀರ್ಘ ವಿವರಣೆಯೇ ಬೇಕಾಗುತ್ತದೆ... ಆದರೆ ಸಂಕ್ಷಿಪ್ತವಾಗಿ ಆ ಬಗೆಗಿನ ನನ್ನ ಅನಿಸಿಕೆಗಳನ್ನು ಹೇಳುತ್ತೇನೆ.
ನೋಡಿ, ಕನ್ನಡದಲ್ಲಿ ಅಥವಾ ಭಾರತದಲ್ಲಿ ಪಶ್ಚಿಮದಿಂದ ಬಂದ ಫೆಮಿನಿಸಮ್ ಸಂದರ್ಭದ ಹಿನ್ನೆಲೆಯಲ್ಲಿ ಇದ್ದ ಮುಖ್ಯ ಸಾಮಾಜಿಕ ವಾಸ್ತವಗಳೆಂದರೆ, ಪುರುಷ ಪ್ರಾಧಾನ್ಯತೆ ಮತ್ತು ಸ್ತ್ರೀಯರ ಆರ್ಥಿಕ ಪರಾವಲಂಬನೆ. ವಾಸ್ತವದ ಈ ನೆಲೆಯಲ್ಲಿ ಅಂದು ಕಾಣಿಸಿಕೊಂಡಿದ್ದ ಸ್ತ್ರೀವಾದದ ಸ್ವರೂಪವು ಸರಿಯಾಗಿಯೇ ಇದ್ದಿತು. ಆದರೆ, ಇಂದಿನ ಸಂದರ್ಭದಲ್ಲಿ ಅಂದಿನ ವಾಸ್ತವದ ಮೊದಲ ಅಂಶವು ಇನ್ನೂ ಸಂಪೂರ್ಣವಾಗಿ ನಶಿಸಿ ಹೋಗಿರದಿದ್ದರೂ ಅದು ಸಾಕಷ್ಟು ಶಿಥಿಲಗೊಂಡಿದೆ; ಇನ್ನು ಎರಡನೆಯ ವಾಸ್ತವವು ಬಹುತೇಕವಾಗಿ ಭಗ್ನಗೊಂಡಿರುವುದನ್ನು ಕಾಣಬಹುದು. ಜೊತೆಗೆ ಆಧುನಿಕ ಶಿಕ್ಷಣ, ಉದ್ಯೋಗಗಳ ಸಾರ್ವತ್ರಿಕ ಲಭ್ಯತೆ, ಪುರುಷರಂತೆಯೇ ಅನುಭವಗಳ ವೈವಿಧ್ಯತೆಗೆ ತೆರೆದುಕೊಂಡಿರುವುದು, ಈ ಎಲ್ಲ ಕಾರಣಗಳಿಂದ ಸ್ತ್ರೀ ಪ್ರಜ್ಞೆ ಶ್ರೀಮಂತವೂ ಸಮಗ್ರವೂ ಆಗುವತ್ತ ಸಾಗಿದೆ. ವಾಸ್ತವದ ಇಂಥ ನೆಲೆಯಲ್ಲಿ, ಫೆಮಿನಿಸಮ್ಮಿನ ಆರಂಭಿಕ ಪರಿಕಲ್ಪನೆ ಮತ್ತು ಕ್ರಿಯಾಶಾಲಿತ್ವಗಳು ಔಟ್ ಡೇಟೆಡ್ ಎನ್ನಿಸಿಕೊಳ್ಳುತ್ತವೆ. ಹಾಗಿರುವುದರಿಂದ ಇಂದಿಗೂ ನಾವು ಸ್ತ್ರೀ ವಾದದ ಹಳೆಯ ಪರಿಭಾಷೆಯಲ್ಲಿಯೇ ಮಾತನಾಡುವುದು ಸರಿಯೆನ್ನಿಸುವುದಿಲ್ಲ.
ಇನ್ನು ಸ್ತ್ರೀ ಪುರುಷರಿಬ್ಬರೂ ಆಧುನಿಕ ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಕಡಿಮೆ ಸಮಾನವಾಗಿ ತೆರೆದುಕೊಂಡಿದ್ದು, ಇಬ್ಬರಲ್ಲಿಯೂ ‘ಇಂಡಿವಿಜುಆಲಿಸಮ್’ (ವೈಯಕ್ತಿಕ ಪ್ರಜ್ಞೆ) ಗರಿಷ್ಠ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ, ಕುಟುಂಬದಂತಹ ಸಾಮಾಜಿಕ ಸಂಸ್ಥೆಗಳ ವಿಘಟನೆಯ ವೇಗ ಮತ್ತು ಪ್ರಮಾಣವು ಹೆಚ್ಚಾಗುತ್ತಿದೆ. ಇಂಥ ಸಂದರ್ಭವು ಅಪೇಕ್ಷಿಸುವುದೇನೆಂದರೆ, ಸ್ತ್ರೀ ಪುರುಷರಿಬ್ಬರೂ ತಮಗೆ ಅವಶ್ಯವೆನ್ನಿಸುವ ಪ್ರಮಾಣದ ಮಾನಸಿಕ ಸೌಖ್ಯವನ್ನು ಪಡೆದುಕೊಳ್ಳುತ್ತಲೇ, ಕುಟುಂಬದಂತಹ ಸಾಮಾಜಿಕ ಸಂಸ್ಥೆಯನ್ನು ಉಳಿಸಿಕೊಳ್ಳುವ ಮೌಲ್ಯಗಳನ್ನು ಕಂಡುಕೊಳ್ಳಬೇಕಾಗಿದೆ. ಹೀಗಿರುವುದರಿಂದ, ಇಂದಿನ ಫೆಮಿನಿಸಮ್, ತನ್ನನ್ನು ಪ್ರತ್ಯೇಕಿಸಿಕೊಂಡು ನೋಡುವ ದೃಷ್ಟಿಕೋನವನ್ನು ಬಿಟ್ಟುಕೊಟ್ಟು, ಹಳೆಯಕಾಲದ ಪುರುಷ ಅಸಹನೆಯ ಸ್ವಭಾವವನ್ನು ಬಿಟ್ಟುಕೊಟ್ಟು, ಪುರುಷರನ್ನೂ ಒಳಗೊಳ್ಳುವ ಸಹಕಾರದ ತೊಡಗುವಿಕೆಯ ಮಾರ್ಗವನ್ನು ರೂಪಿಸಿಕೊಳ್ಳಬೇಕಾಗಿದೆ. ಇಂದು, ಯಿನ್-ಯಾಂಗ್ಗಳ ಸಾಂಗತ್ಯದ ಸಖ್ಯಯೋಗವನ್ನು ಸ್ಥಾಪಿಸುವ, ಸ್ತ್ರೀ ವಾದವಲ್ಲ, ಮಾತೃವಾದವನ್ನು ಪುರಸ್ಕರಿಸುವ ಚಳುವಳಿ ರೂಪುಗೊಳ್ಳಬೇಕಾಗಿದೆ. ಇಂದಿನ ಸಮಾಜದಲ್ಲಿ ಕುಟುಂಬಗಳ ವಿಘಟನೆಯು ಸ್ತ್ರೀ ಪುರುಷರಿಬ್ಬರ ಇಗೋಗಳ ಸಂಘರ್ಷದಲ್ಲಿ ಸಂಭವಿಸುತ್ತಿದೆ ಎನ್ನುವ ಸತ್ಯವನ್ನು ಒಪ್ಪಿಕೊಂಡು ಸ್ತ್ರೀವಾದದ ರಿವಿಜನ್ ನಡೆಯಬೇಕಾಗಿದೆ.
*ವಿಮರ್ಶಾ ಕ್ಷೇತ್ರಕ್ಕೇನಾಗಿದೆ? ಪ್ರೊಫೆಶನಲ್ ಕ್ರಿಟಿಕ್ಸ್ ಇಲ್ಲ. ಈ ಖಾಲಿಯನ್ನು ಹೇಗೆ ತುಂಬಬಹುದು?
ಡಾ.ಜಿ.ಎಸ್. ಆಮೂರರು ಎಫ್.ಆರ್. ಲೀವಿಸ್ನನ್ನು ಉದ್ಧರಿಸುತ್ತ, ‘ವಿಮರ್ಶಕನ ಕಾರ್ಯವೆಂದರೆ, ಕೃತಿಗೆ ಸಂಪೂರ್ಣವಾಗಿ ಸ್ಪಂದಿಸುವುದು ಹಾಗೂ ತನ್ನ ಸ್ಪಂದನವನ್ನು ವ್ಯಾಖ್ಯಾನವಾಗಿ ಪರಿವರ್ತಿಸುವಲ್ಲಿ ಕಟ್ಟುನಿಟ್ಟಾದ ಔಚಿತ್ಯವನ್ನು ಕಾಯ್ದುಕೊಳ್ಳುವುದು...’ ಎಂದು ಹೇಳಿ, ಸಾಹಿತ್ಯ ವಿಮರ್ಶೆ ತತ್ವಜ್ಞಾನ ವಿರೋಧಿ ಎನ್ನುವ ಲೀವಿಸ್ನ ವಾದವನ್ನು ಅವನ ಗ್ರಹಿಕೆಯ ಔಚಿತ್ಯದ ಒಂದಂಶವಾಗಿ ಗುರುತಿಸುತ್ತಾರೆ. ಸಮಕಾಲೀನ ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಈ ಸಂಬಂಧೀ ಬಿಕ್ಕಟ್ಟು ಉಂಟಾಗಿದೆ. ಸಾಹಿತ್ಯ ಕೃತಿ ನೀಡುವ ಮಾನವೀಯ ಅನುಭವಗಳ ಕಲಾತ್ಮಕ ಅಭಿವ್ಯಕ್ತಿಯ ಬಗೆಗಿನ ಮಹತ್ವವು ಹಿನ್ನೆಲೆಗೆ ಸರಿದು, ತಾತ್ವಿಕತೆ ವೈಚಾರಿಕತೆಗಳ ಹುಡುಕಾಟ ವಿಜೃಂಭಿಸುತ್ತಿದೆ. ಈ ಒತ್ತಡವು ಸೃಜನಶೀಲತೆಯ ಉತ್ಸ್ಫೂರ್ತ ಸ್ವರೂಪಕ್ಕೆ ಭಂಗ ತರುತ್ತಿದೆ. ಲೇಖಕರು ವಿಮರ್ಶಕರ ತಾತ್ವಿಕ, ವೈಚಾರಿಕ ಡಿಮ್ಯಾಂಡ್ ಮತ್ತು ಕಮಾಂಡಿಗೆ ಹೊಂದಿಕೊಳ್ಳುವ ಸುಲಭದ ದಾರಿಯನ್ನು ಹಿಡಿಯುವಂತಾಗುತ್ತಿದೆ. ತಾತ್ವಿಕತೆ ವೈಚಾರಿಕತೆಗಳು ವಿಮರ್ಶಕನ ಸ್ಪಂದನೆಗೆ ವ್ಯಾಪ್ತಿಯನ್ನು ತರುವ ಪರಿಕರಗಳಾಗಬೇಕೇ ವಿನಃ ಅವು ವಿಮರ್ಶಕನಿಗೆ ‘ಕಲ್ಟ್’ನ ದೀಕ್ಷೆಯನ್ನು ಕೊಡಬಾರದು. ಇಂಥ ಕಲ್ಟ್ ಅವನನ್ನು ಸುಲಭವಾಗಿ ರಾಜಕೀಯ ಪಕ್ಷಗಳ ತೆಕ್ಕೆಗೆ ದೂಡುವುದರಿಂದ, ‘ಕೃತಿಗೆ ಸಂಪೂರ್ಣವಾಗಿ ಸ್ಪಂದಿಸುವ’ ಸಾಧ್ಯತೆಗೆ ಅನೇಕ ಬಗೆಯಿಂದ ಭಂಗ ಉಂಟಾಗುತ್ತದೆ.
ಇನ್ನು, ಇಂದು ಪ್ರೊಫೆಶನಲ್ ಕ್ರಿಟಿಕ್ ಎನ್ನುವ ಪರಿಕಲ್ಪನೆ ಕುರಿತು : ಅವನೊಬ್ಬ ವಿಶಾಲವ್ಯಾಪ್ತಿಯ ಸ್ಪಂದನಾ ಸಾಧ್ಯತೆಯನ್ನು ಹೊಂದಿದವನು; ತನ್ನ ವೈಚಾರಿಕತೆಯ ಬಗೆಗಿನ ಇಂಟೆಗ್ರಿಟಿ ಉಳಿಸಿಕೊಳ್ಳುತ್ತಲೇ, ಸಾಹಿತ್ಯ ಕೃತಿಗಳಲ್ಲಿ ವ್ಯಕ್ತಗೊಳ್ಳುವ ಮನುಷ್ಯಾನುಭವಗಳ ಆಥೆಂಟಿಸಿಟಿಗೆ ತತ್ವಾತೀತವಾಗಿ ಸ್ಪಂದಿಸುವವನು; ಕೃತಿಯಲ್ಲಿ ಅಭಿವ್ಯಕ್ತಗೊಂಡ ಮನುಷ್ಯಾನುಭವಗಳು ಮಾತ್ರ ಮುಖ್ಯ, ಕೃತಿಕಾರನ ವೈಯಕ್ತಿಕ ಹಿನ್ನೆಲೆ ನನ್ನ ಸ್ಪಂದನೆಗೆ ಅವಶ್ಯವಿಲ್ಲ ಎಂದು ನಂಬಿ, ಕೃತಿಯಲ್ಲಿ ವ್ಯಕ್ತಗೊಳ್ಳುವ ಅನುಭವಗಳ ಬೆಲೆಕಟ್ಟುವವನು; ಸಾಹಿತ್ಯ ಪರಂಪರೆಯ ಮುಂದುವರಿಕೆಯ ಬಗೆಗೆ ವಿಶೇಷ ಕಾಳಜಿ ಹೊಂದಿ ಅದರ ಮುಂದುವರಿಕೆಯ ಕುರುಹುಗಳನ್ನು ಹುಡುಕುತ್ತ, ಗುರುತಿಸುವ ಕಾಳಜಿ ತೋರುವವನು; ವಿಮರ್ಶೆ ಎನ್ನುವುದು ಒಂದು ಬಗೆಯ ಸಮಾಜಸೇವೆ ಎನ್ನುವ ಪ್ರಾಂಜಲತೆಯಿಂದ ತೊಡಗುವವನು... ಇತ್ಯಾದಿ. ಇಂಥವರು ಇದ್ದರು ಮತ್ತು ಈಗ ಇಲ್ಲ ಎನ್ನುವುದು ಒಂದು ವಾಸ್ತವ ಸ್ಥಿತಿ.
ಎಲ್ಲಿಯವರೆಗೆ ನಮ್ಮ ಶಿಕ್ಷಣ ವ್ಯವಸ್ಥೆಯು ಎಲ್ಲ ತಾತ್ವಿಕತೆ, ವೈಚಾರಿಕತೆಗಳನ್ನು ನಿರ್ಮೋಹದಿಂದ ಪರಿಗಣಿಸಿ ಬೋಧಿಸುವ ಮನೋಸ್ಥಿತಿ ಹೊಂದಿರಲಾರದೋ; ಎಲ್ಲಿಯವರೆಗೆ ಸಾಹಿತ್ಯ ಬೋಧಿಸುವ ಶಿಕ್ಷಕರು ಇಂಥ ತಾತ್ವಿಕ ನಿರ್ಮೋಹದ ಪಕ್ವತೆ ತೋರಲಾರರೋ, ಅಲ್ಲಿಯವರೆಗೆ ಇಂಥ ವಿಮರ್ಶಕರನ್ನು ಸೃಷ್ಟಿಸುವುದು ಸಾಧ್ಯವಿಲ್ಲ ಎನ್ನಿಸುತ್ತದೆ.
*ಪ್ರಶಸ್ತಿ, ವಿಮರ್ಶೆಗಳನ್ನು ನಂಬಿ ಬರೀಬೇಡಿ ಅಂತೀರಿ. ಪ್ರಶಸ್ತಿ ಮೊತ್ತಗಳು ನಮ್ಮ ಲೇಖಕರನ್ನು ಟೆಂಪ್ಟ್ ಮಾಡ್ತಿವೆ ಅಂತಾರಲ್ಲ?
ಹೌದು. ಮತ್ತೊಮ್ಮೆ ಆ ಮಾತನ್ನು ನನ್ನ ಕಿರಿಯ ಗೆಳೆಯರಿಗೆ ಹೇಳಬಯಸುತ್ತೇನೆ. ಇದರಿಂದ ಅವರು ತಮ್ಮ ಬರಹದ ಕೆಚ್ಚನ್ನು ಉಳಿಸಿಕೊಂಡು ಬರೆಯಲು ಸಾಧ್ಯವಾಗುತ್ತದೆ. ಅನಂತಮೂರ್ತಿಯವರು ನನಗೆ ಹೇಳಿದ್ದರಲ್ಲ - ಘೋಷಣೆಗಳ ಬೆನ್ನುಹತ್ತಿ ಬರೆಯಲು ಹೋಗಬೇಡ, ಅವುಗಳ ಬೆನ್ನು ಹತ್ತಿದರೆ ಬರೆಹ ಪೊಳ್ಳಾಗುತ್ತದೆ ಎಂದು. ನಾನು ಹೇಳುತ್ತಿರುವ ಈ ಮಾತೂ ಅದೇ ಅರ್ಥದ್ದು. ನಿಮ್ಮ ಪ್ರಶ್ನೆಯಲ್ಲಿಯೇ ಇದೆಯಲ್ಲ... ಟೆಂಪ್ಟ್ ಮಾಡ್ತಿವೆ ಎನ್ನುವ ಮಾತು... all temptations turn out to be hindering blocks in the way of spontaneous flow of creativity! ಪ್ರಶಸ್ತಿಗಳು ಬರದಿದ್ದರೆ ನಿಮ್ಮ ಸೃಜನಶೀಲತೆಯಲ್ಲಿ ನಂಬಿಕೆ ಕಳೆದುಕೊಳ್ಳ ಬೇಡಿ, ನಿಮ್ಮ ಬರೆಹದ ಕೆಚ್ಚನ್ನು ಕಳೆದುಕೊಳ್ಳಬೇಡಿ. ಪ್ರಶಸ್ತಿಯ ಆಯ್ಕೆ ಹಲಬಗೆಯ, ಶುದ್ಧಾಶುದ್ಧ ಮಾನದಂಡಗಳ ನೆಲೆಯಲ್ಲಿ ನಡೆಯುತ್ತಿರುತ್ತದೆ. ನಿಮ್ಮ ಕೃತಿಯಲ್ಲ, ನೀವು ಆ ಮಾನದಂಡಗಳ ಪರಿಧಿಯಲ್ಲಿ ಸೇರದೇ ಹೋಗಬಹುದು! ಆದ್ದರಿಂದ ನಿಮ್ಮ ಬರೆಹದ ಬಗೆಗಿನ ನಂಬಿಕೆಯನ್ನು ಪ್ರಶಸ್ತಿಯ ಕಾರಣವಾಗಿ ಕಳೆದುಕೊಳ್ಳುವುದು ಬೇಡ. ಇನ್ನು, ಇಂದಿನ ಸಾಹಿತ್ಯ ವಿಮರ್ಶೆಯು ಸಾಹಿತ್ಯ ಪರಂಪರೆಯ ಮುಂಚಾಚುಗಳನ್ನು ಗುರುತಿಸುವ ನೆಲೆಯ ಪ್ರಾಂಜಲತೆಯನ್ನು ತೋರುತ್ತಿಲ್ಲ. ಹಾಗಿರುವುದರಿಂದ ಆ ಬಗೆಗೂ ಭಗ್ನ ಹೃದಯಿಗಳಾಗುವುದು ಬೇಡ.
*ಈಗಿನ ನಿಮ್ಮ ಓದು, ಬರೆಹಗಳ ಬಗ್ಗೆ ಹೇಳುವುದಾದರೆ?
ನಿರ್ದಿಷ್ಟ ಅಂತಿಲ್ಲ... ಆಸಕ್ತಿ ಹುಟ್ಟಿಸಿ ಓದಿಸಿಕೊಳ್ಳುವುದನ್ನು ಓದುತ್ತಿದ್ದೇನೆ. ಮೊದಲಿನಂತೆ ಇದನ್ನು ತಿಳಿದೇ ತೀರಬೇಕೆನ್ನುವ ಹಟದ ಓದು ಇಲ್ಲ.
ಬರೆಹ... ಒಂದು ಕಾದಂಬರಿಯನ್ನು ಬರೆಯುತ್ತಿದ್ದೇನೆ. 2021ರಲ್ಲಿ ಬರೆಯಲು ಆರಂಭಿಸಿದ್ದು. 350ಕ್ಕೂ ಹೆಚ್ಚು ಪುಟ ಬರೆದು ಆಗಿದೆ. ಬಹುಶಃ ಈ ವರ್ಷ ಮುಗಿಸಬಹುದೇನೋ.. ಜೆಂಡರ್ ಡೈನಾಮಿಕ್ಸ್ ಕುರಿತ ಕಥನ ‘ಅಹಂ ಪುರುಷ’ ಎಂದು ಅದರ ಹೆಸರು.
*ಈ ಜನರೇಶನ್ ಸಾಹಿತ್ಯದಲ್ಲಿ ನೀವು ಗುರುತಿಸುವ ಸ್ಟ್ರೆಂಥ್ ಮತ್ತು ವೀಕ್ನೆಸ್?
ಸಾಹಿತ್ಯ ಪರಂಪರೆಯಲ್ಲಿ ವ್ಯಕ್ತವಾಗುವ ಸಾಹಿತ್ಯಾಭಿವ್ಯಕ್ತಿಯ ಸ್ಟ್ರೆಂಗ್ಥ್ ಮತ್ತು ವೀಕ್ನೆಸ್ಗಳು ಅವೇ ಅವೇ ಆಗಿರುತ್ತವೆ. ಅವು ಅನೂಚಾನವಾಗಿ ಸಾಗಿ ಬರುತ್ತಿರುತ್ತವೆ. ಸಾಹಿತ್ಯಾಭಿವ್ಯಕ್ತಿ ಕುರಿತಂತೆ ಈ ಪೀಳಿಗೆಯಲ್ಲಿಯೂ ಅಂತಹವೇ ಸ್ಟ್ರೆಂಗ್ಥ್ ಮತ್ತು ವೀಕನೆಸ್ಗಳು ಕಾಣುತ್ತವೆ. ಇನ್ನು ಲೇಖಕ ವ್ಯಕ್ತಿತ್ವದಲ್ಲಿ ಕಾಣಿಸಿಕೊಳ್ಳುವ ಸ್ಟ್ರೆಂಗ್ಥ್ ಮತ್ತು ವೀಕ್ನೆಸ್ಗಳು ಈ ಜನರೇಶನ್ನಿನದು ಬೇರೆಯವೇ ಆಗಿವೆ. ಶೀಘ್ರ ಯಶಸ್ಸು ಬಯಸುತ್ತಿರುವುದು ಇಂದಿನ ಪೀಳಿಗೆಯ ಬಹುಮುಖ್ಯ ವೀಕ್ನೆಸ್. ನನಗೆ ದೊರೆತ ಕಥಾಸ್ಪರ್ಧೆ ಕಾದಂಬರಿ ಸ್ಪರ್ಧೆಗಳಲ್ಲಿ ದೊರೆತ ಬಹುಮಾನಗಳ ಹೊರತಾಗಿಯೂ ನನ್ನ ಬಗೆಗಿನ ಪ್ರಥಮ ಸ್ವತಂತ್ರ ವಿಮರ್ಶಾ ಲೇಖನ ಬರಲು ಮೂವತ್ತಕ್ಕೂ ಹೆಚ್ಚು ವರ್ಷಗಳ ದೀರ್ಘ ಕಾಲ ಕಾಯಬೇಕಾಯಿತು. ನನ್ನ ಅವಗಣನೆಯು ನನ್ನಲ್ಲಿ ಇನ್ನಷ್ಟು ಮತ್ತಷ್ಟು ಛಲವನ್ನು ಹುಟ್ಟಿಸಿ ನನ್ನ ಕೆಚ್ಚನ್ನು ಹೆಚ್ಚಿಸುತ್ತಿತ್ತು. ಇವತ್ತಿನ ಪೀಳಿಗೆಯವರೂ, ಕಾಯುವುದಕ್ಕಿಂತ ತಪವು ಇನ್ನಿಲ್ಲ ಎನ್ನುವ ನಂಬಿಕೆಯಲ್ಲಿ ತೊಡಗಿಕೊಳ್ಳಬೇಕು. ಭವಭೂತಿ ನಂಬಿದಂತೆ, ನನ್ನ ಬರೆಹವನ್ನು ಮೆಚ್ಚುವ ರಸಿಕ ಬಂದೇ ಬರುತ್ತಾನೆ ಎನ್ನುವ ನಂಬಿಕೆ ಇಟ್ಟುಕೊಂಡು ಬರೆಯುತ್ತಿರಬೇಕು.
*ಸಾಹಿತ್ಯ ಬಿಟ್ಟರೆ ನಿಮ್ಮ ಇತರ ಅಭಿರುಚಿಗಳು?
ಸಂಗೀತ... ಸಂಗೀತ ನನ್ನ ಎರಡನೆಯ ಪ್ಯಾಶನ್! ಕೇಳಿ ಸಂತೋಷಿಸುವುದು ಮಾತ್ರ... ಅದರ ಬಗೆಗಿನ ಹೆಚ್ಚಿನ ಜ್ಞಾನ ಇಲ್ಲ.