ಅವಕಾಶ ಸಿಗದ್ದಕ್ಕೆ ಟಿ 20 ವಿಶ್ವಕಪ್‌ ತೊರೆದು ಶುಭ್‌ಮನ್‌, ಆವೇಶ್‌ ಭಾರತಕ್ಕೆ ವಾಪಸ್‌?

KannadaprabhaNewsNetwork | Updated : Jun 14 2024, 04:26 AM IST

ಸಾರಾಂಶ

ಮುಖ್ಯ ತಂಡದಲ್ಲಿರುವ ಆಟಗಾರರಿಗೆ ಗಾಯವಾಗಿ, ಟೂರ್ನಿಯಿಂದ ಹೊರಬೀಳದ ಹೊರತು ಮೀಸಲು ತಂಡದಲ್ಲಿರುವವರಿಗೆ ಅವಕಾಶ ಸಿಗಲ್ಲ. ಆದರೆ ಖಲೀಲ್‌ ಅಹ್ಮದ್‌, ರಿಂಕು ಸಿಂಗ್‌ ಸೂಪರ್‌-8 ಹಂತದಲ್ಲೂ ತಂಡದ ಜೊತೆಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಫ್ಲೋರಿಡಾ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಜೊತೆ ಮೀಸಲು ಆಟಗಾರರಾಗಿ ಅಮೆರಿಕಕ್ಕೆ ಪ್ರಯಾಣಿಸಿರುವ ತಾರಾ ಬ್ಯಾಟರ್‌ ಶುಭ್‌ಮನ್ ಗಿಲ್‌ ಹಾಗೂ ವೇಗಿ ಆವೇಶ್‌ ಖಾನ್‌, ಜೂ.15ರ ಕೆನಡಾ ವಿರುದ್ಧದ ಪಂದ್ಯದ ಬಳಿಕ ಭಾರತಕ್ಕೆ ಮರಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಆದರೆ ಖಲೀಲ್‌ ಅಹ್ಮದ್‌, ರಿಂಕು ಸಿಂಗ್‌ ಸೂಪರ್‌-8 ಹಂತದಲ್ಲೂ ತಂಡದ ಜೊತೆಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯ ತಂಡದಲ್ಲಿರುವ ಆಟಗಾರರಿಗೆ ಗಾಯವಾಗಿ, ಟೂರ್ನಿಯಿಂದ ಹೊರಬೀಳದ ಹೊರತು ಮೀಸಲು ತಂಡದಲ್ಲಿರುವವರಿಗೆ ಅವಕಾಶ ಸಿಗಲ್ಲ. 

ತಂಡದಲ್ಲಿ ಈಗಾಗಲೇ ಹೆಚ್ಚುವರಿ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್‌ ಇರುವುದರಿಂದ ಗಿಲ್‌ಗೆ ಅವಕಾಶ ಸಿಗುವ ಸಾಧ್ಯತೆಯಿಲ್ಲ. ಅಲ್ಲದೆ ಭಾರತ ಸೂಪರ್‌-8 ಪಂದ್ಯಗಳನ್ನು ಕೆರಿಬಿಯನ್‌ನಲ್ಲಿ ಆಡಲಿರುವ ಕಾರಣ ಸ್ಪಿನ್ನರ್ಸ್‌ಗೆ ಹೆಚ್ಚಿನ ಆದ್ಯತೆ ಸಿಗಲಿದ್ದು, ಹೀಗಾಗಿ ಆವೇಶ್‌ ಮುಖ್ಯ ತಂಡಕ್ಕೇರುವ ಸಾಧ್ಯತೆ ಕಡಿಮೆ. ಹೀಗಾಗಿ ಅವರನ್ನು ಭಾರತಕ್ಕೆ ವಾಪಸ್‌ ಆಗಬಹುದು ಎಂದು ತಿಳಿದುಬಂದಿದೆ.

ಪಪುವಾ ವಿರುದ್ಧು ಜಯಗಳಿಸಿ ಸೂಪರ್‌-8ಗೇರುತ್ತಾ ಆಫ್ಘನ್?

ಟ್ರಿನಿಡಾಡ್‌: ಸತತ 2 ಪಂದ್ಯಗಳ ಬೃಹತ್‌ ಗೆಲುವಿನೊಂದಿಗೆ ಸೂಪರ್‌-8 ಹಂತದ ಸನಿಹಕ್ಕೆ ಬಂದು ನಿಂತಿರುವ ಅಫ್ಘಾನಿಸ್ತಾನ ಶುಕ್ರವಾರ ಟಿ20 ವಿಶ್ವಕಪ್‌ನ 3ನೇ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಆಫ್ಘನ್‌ ‘ಸಿ’ ಗುಂಪಿನಿಂದ 2ನೇ ತಂಡವಾಗಿ ಸೂಪರ್‌-8 ಪ್ರವೇಶಿಸಲಿದ್ದು, ನ್ಯೂಜಿಲೆಂಡ್‌ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.ಆಫ್ಘನ್‌ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಉಗಾಂಡ ವಿರುದ್ಧ 125 ರನ್‌, ನ್ಯೂಜಿಲೆಂಡ್‌ ವಿರುದ್ಧ 84 ರನ್‌ ಜಯಗಳಿಸಿದೆ. ತಂಡದ ನೆಟ್‌ ರನ್‌ರೇಟ್‌(+5.225) ಅತ್ಯುತ್ತಮವಾಗಿದ್ದು, ಇನ್ನುಳಿದ 2 ಪಂದ್ಯದಲ್ಲಿ ಸೋತರೂ ಸೂಪರ್‌-ಗೇರುವ ಅವಕಾಶ ಸಿಗಬಹುದು. ಅತ್ತ ಪಪುವಾ ಮೊದಲೆರಡು ಪಂದ್ಯಗಳಲ್ಲೂ ಸೋಲನುಭವಿಸಿದ್ದು, ಟೂರ್ನಿಯ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಪಂದ್ಯ ಆರಂಭ: ಬೆಳಗ್ಗೆ 6 ಗಂಟೆಗೆ

Share this article