;Resize=(412,232))
ಬೆಂಗಳೂರು : ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಪ್ಯಾರಾ ಅಥ್ಲೀಟ್ ಶಿಲ್ಪಾ ಕೆ.ಶೈಲಾ ಅವರಿಗೆ ಗುರುವಾರ ನಗರದಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ಅಲ್ಲದೆ, ಈ ಹಿಂದೆ ಭರವಸೆ ನೀಡಿದಂತೆ ₹15 ಲಕ್ಷ ರು. ನಗದು ಬಹುಮಾನ ಹಾಗೂ ಗ್ರೂಪ್ ‘ಬಿ’ ಹುದ್ದೆ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿಲ್ಪಾ, ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಸತ್ಯನಾರಾಯಣ ಹಾಗೂ ಮಹಿಳಾ ತಂಡದ ಕೋಚ್ ಪುಷ್ಪ ನಿರಂಜನ್ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ ವತಿಯಿಂದ, ಫಿಬಾ ಏಷ್ಯಾ ಅಧ್ಯಕ್ಷ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಡಾ.ಕೆ. ಗೋವಿಂದರಾಜು ಹಾಗೂ ಇತರ ಗಣ್ಯರಿಂದ ಸ್ವಾಗತ, ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್.ಅನುಚೇತ್, ‘ಕ್ರೀಡಾಕೂಟದಲ್ಲಿ ಭಾಗವಹಿಸಿದ ರಾಜ್ಯದ 8 ಜನರಿಗೆ ಸರ್ಕಾರದ ವತಿಯಿಂದ ತಲಾ ₹5 ಲಕ್ಷ ನೀಡಲಾಗಿದೆ. ಅಲ್ಲದೆ ಪದಕ ಗೆದ್ದಿರುವ ಶಿಲ್ಪಾಗೆ ₹15 ಲಕ್ಷ ನಗದು ಬಹುಮಾನ ಹಾಗೂ ಗ್ರೂಪ್ ‘ಬಿ’ ಹುದ್ದೆ ನೀಡಿ ಗೌರವಿಸಲಾಗುವುದು. ಇತರ ಸವಲತ್ತುಗಳನ್ನೂ ಒದಗಿಸಲಾಗುವುದು’ ಎಂದರು.