ತುಮಕೂರು : ಪುನಃ ಒಂದಾದ ಲೋಕ್ ಅದಾಲತ್ ನಲ್ಲಿ ವಿಚ್ಛೇದನ ಮತ್ತು ಜೀವನಾಂಶಕ್ಕೆ ಬಂದಿದ್ದ 21 ಜೋಡಿಗಳು

KannadaprabhaNewsNetwork | Updated : Sep 16 2024, 04:28 AM IST

ಸಾರಾಂಶ

ಲೋಕ್ ಅದಾಲತ್ ನಲ್ಲಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯಗಳಿಗೆ ವಿಚ್ಛೇದನ ಮತ್ತು ಜೀವನಾಂಶಕ್ಕೆ ಬಂದಿದ್ದ ದಂಪತಿಗಳನ್ನು ಪುನಃ ಒಂದು ಮಾಡಿ ಬುದ್ಧಿ ಹೇಳಿ ಸಿಹಿ ನೀಡಿ ಮನೆಗೆ ಕಳಿಸಿದರು.

 ತುಮಕೂರು ಗಂಡ ಹೆಂಡತಿ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಜೀವನ ನಡೆಸಬೇಕು. ಚಿಕ್ಕ ಚಿಕ್ಕ ವಿಚಾರಗಳಿಗೆ ಮನಸ್ಸುಗಳನ್ನು ಕೆಡಿಸಿಕೊಂಡು ವಿಚ್ಛೇದನಕ್ಕೆ ಅರ್ಜಿ ಹಾಕಬಾರದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಯಂತ್ ಕುಮಾರ್ ರವರು ದಂಪತಿಗಳಿಗೆ ಬುದ್ಧಿ ಹೇಳಿದರು.ಅವರು ಲೋಕ್ ಅದಾಲತ್ ನಲ್ಲಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯಗಳಿಗೆ ವಿಚ್ಛೇದನ ಮತ್ತು ಜೀವನಾಂಶಕ್ಕೆ ಬಂದಿದ್ದ ದಂಪತಿಗಳನ್ನು ಪುನಃ ಒಂದು ಮಾಡಿ ಬುದ್ಧಿ ಹೇಳಿ ಸಿಹಿ ನೀಡಿ ಮನೆಗೆ ಕಳಿಸಿದರು.

ಇಂದಿನ ದಿನಗಳಲ್ಲಿ ಚಿಕ್ಕ ವಿಚಾರಗಳನ್ನೇ ದೊಡ್ಡದಾಗಿ ಮಾಡಿಕೊಂಡು ಕೌಟುಂಬಿಕ ನ್ಯಾಯಾಲಯಗಳಿಗೆ ವಿಚ್ಛೇದನ,ಜೀವನಾಂಶ ಇತ್ಯಾದಿಗಳಿಗೆ ಗಂಡ ಹೆಂಡತಿ ಬರುತ್ತಿರುವುದು ದುರಂತವೇ ಸರಿ ಎಂದರು.ಹಿರಿಯರ ಮಾರ್ಗದರ್ಶನದಲ್ಲಿ ಜೀವನ ನಡೆಸಬೇಕು,ತಂದೆ-ತಾಯಿ ಕಷ್ಟ ಪಟ್ಟು ದುಡಿದು ನಿಮ್ಮನ್ನು ಓದಿಸಿ, ಬುದ್ಧಿ ಕಲಿಸಿ,ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ನಿಮಗೆ ಮದುವೆ ಮಾಡಿರುವುದು ನೀವು ವಿಚ್ಛೇದನ ಪಡೆಯುವುದಕ್ಕಲ್ಲ, ಮಕ್ಕಳ ಮುಖ ನೋಡಿಕೊಂಡು,ತಂದೆ-ತಾಯಿಗಳ ಮುಖ ನೋಡಿಕೊಂಡು ಪರಸ್ಪರರು ನಂಬಿಕೆಯಿಂದ ಜೀವನ ನಡೆಸಬೇಕು ಎಂದು ತಿಳಿಸಿದರು.

 ಸಿರಾ-2,ಮಧುಗಿರಿ-1,ಪಾವಗಡ-2,ತುರುವೇಕೆರೆ-1,ಗುಬ್ಬಿ-1,ತಿಪಟೂರು-2,ಚಿಕ್ಕನಾಯಕನಹಳ್ಳಿ-1,ಇಲ್ಲಿ 10 ಜೋಡಿಗಳು ಪುನರ್ ಮಿಲನವಾಗಿದ್ದಾರೆ. ಜಿಲ್ಲೆಯ 2 ಕೌಟುಂಬಿಕ ನ್ಯಾಯಾಲಯದಲ್ಲಿ 10 ಜೋಡಿ ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ರವರ ಮುಂದೆ 1 ಜೋಡಿ ಒಟ್ಟು-21 ದಂಪತಿಗಳು ಪುನರ್ ಮಿಲನವಾಗಿ ಸಂತೋಷವಾಗಿ ಒಂಟಿಯಾಗಿ ಬಂದು ನ್ಯಾಯಾಲಯದಿಂದ ಜೋಡಿಯಾಗಿ ಹೋದ ಸಂತೋಷ ಇಂದು ನಮ್ಮೆಲ್ಲರಿಗೆ ಉಂಟಾಗಿದೆ ಎಂದರು.

ಈ ಸಂದರ್ಭದಲ್ಲಿ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ, ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ಮುನಿರಾಜ,1ನೇ ಅಧಿಕ ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ಜಯಪ್ರಕಾಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share this article