ಮುಂಬೈ: 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಅ.18ರಿಂದ ಆರಂಭಗೊಳ್ಳುವುದಾಗಿ ಟೂರ್ನಿಯ ಆಯೋಜಕರು ಘೋಷಿಸಿದ್ದಾರೆ. ಟೂರ್ನಿಯ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಟೂರ್ನಿ ಈ ಬಾರಿ 3 ನಗರಗಳ ಕ್ಯಾರವಾನ್ ಮಾದರಿಯಲ್ಲಿ ಹೈದರಾಬಾದ್, ನೋಯ್ಡಾ ಹಾಗೂ ಪುಣೆಯಲ್ಲಿ ನಡೆಯಲಿವೆ. ಅ.18ರಿಂದ ಹೈದರಾಬಾದ್ನಲ್ಲಿ ಪಂದ್ಯಗಳು ಆರಂಭಗೊಳ್ಳಲಿದ್ದು, ಬಳಿಕ ನ.10ರಿಂದ ನೋಯ್ಡಾ ಹಾಗೂ ಡಿ.3ರಿಂದ ಪುಣೆಯಲ್ಲಿ ಆಯೋಜನೆಗೊಳ್ಳಲಿವೆ.
ಬೆಂಗಳೂರಲ್ಲಿಲ್ಲ ಪಂದ್ಯ
ಈ ಹಿಂದಿನ ಬಹುತೇಕ ಎಲ್ಲಾ ಆವೃತ್ತಿಗಳಲ್ಲೂ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆಯುತ್ತಿದ್ದರು. 2021ರಲ್ಲಿ ಸಂಪೂರ್ಣ ಲೀಗ್ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜನೆಗೊಂಡಿತ್ತು. ಕಳೆದೆರಡು ಆವೃತ್ತಿಗಳಲ್ಲೂ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುವುದಿಲ್ಲ.
ಬಿಸಿಸಿಐ ಆಯ್ಕೆ ಸಮಿತಿಗೆ ಅಜಯ್ ರಾತ್ರಾ ಸೇರ್ಪಡೆ
ನವದೆಹಲಿ: ಅಜಿತ್ ಅಗರ್ಕರ್ ಮುಖ್ಯಸ್ಥರಾಗಿರುವ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ ಸೇರ್ಪಡೆಗೊಂಡಿದ್ದಾರೆ. ಅವರು ಪಶ್ಚಿಮ ವಲಯದ ಸಲೀಲ್ ಅಂಕೋಲಾ ಸ್ಥಾನಕ್ಕೆ ಆಯ್ಕೆಯಾಗಿದ್ದಾಗಿ ಮಂಗಳವಾರ ಬಿಸಿಸಿಐ ಮಾಹಿತಿ ನೀಡಿದೆ. ಸಮಿತಿಯಲ್ಲಿ ವಿವಿಧ 5 ವಲಯಗಳನ್ನು ಪ್ರತಿನಿಧಿಸುವ ಒಟ್ಟು ಐವರು ಇದ್ದಾರೆ. ಅಜಯ್ ಉತ್ತರ ವಲಯದಿಂದ ಆಯ್ಕೆಯಾಗಿದ್ದಾರೆ.2023ರ ಫೆಬ್ರವರಿಯಲ್ಲಿ ಉತ್ತರ ವಲಯದ ಚೇತನ್ ಶರ್ಮಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಬಳಿಕ ಪಶ್ಚಿಮ ವಲಯದ ಅಗರ್ಕರ್ ಸಮಿತಿಗೆ ಆಯ್ಕೆಯಾಗಿ, ಮುಖಸ್ಥರಾಗಿದ್ದರು. ಅಗರ್ಕರ್ ಹಾಗೂ ಸಲೀಲ್ ಇಬ್ಬರೂ ಪಶ್ಚಿಮ ವಲಯದವರಾಗಿದ್ದ ಕಾರಣ, ಸದ್ಯ ಸಲೀಲ್ರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಹರ್ಯಾಣದ ಅಜಯ್ 6 ಟೆಸ್ಟ್, 12 ಏಕದಿನ, 90 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ.ದೇಸಿ ಕ್ರಿಕೆಟ್ನಲ್ಲಿ ಅಸ್ಸಾಂ, ಪಂಜಾಬ್, ಉತ್ತರ ಪ್ರದೇಶ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.