ಬಾಂಗ್ಲಾ ಸರ್ಕಾರದ ವಿರುದ್ಧ ಶೀಘ್ರ ಸೇನಾ ಕ್ಷಿಪ್ರಕ್ರಾಂತಿ?

KannadaprabhaNewsNetwork | Published : Mar 26, 2025 1:38 AM

ಸಾರಾಂಶ

ಬಾಂಗ್ಲಾದೇಶದಲ್ಲೀಗ ಸೇನಾ ದಂಗೆಯ ವದಂತಿಗಳು ದಟ್ಟವಾಗಿವೆ. ಹಿಂದಿನ ಪ್ರಧಾನಿ ಶೇಖ್‌ ಹಸೀನಾ ಸರ್ಕಾರ ಪದಚ್ಯುತಿ ಬಳಿಕ ಅಧಿಕಾರಕ್ಕೆ ಬಂದ ಮೊಹಮ್ಮದ್‌ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ದೇಶ ಮುನ್ನಡೆಸಲು ಹಾಗೂ ಹಿಂಸಾಚಾರ ನಿಯಂತ್ರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಸೇನೆಯೇ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಯೂನುಸ್‌ ಸರ್ಕಾರದ ವಿರುದ್ಧ ವೈಫಲ್ಯದ ಆರೋಪ

ಸೇನಾ ಮುಖ್ಯಸ್ಥ ಸಭೆ ಬಳಿಕ ಇಂಥ ಪುಕಾರು ಜೋರು

=

ಸೇನಾದಂಗೆ ಏಕೆ?

ಮಾಜಿ ಪ್ರಧಾನಿ ಹಸೀನಾ ಪದಚ್ಯುತಿ ಬಳಿಕ ದೇಶ ಮುನ್ನಡೆಸಲು, ಹಿಂಸಾಚಾರ ನಿಯಂತ್ರಿಸಲು ಯೂನುಸ್‌ ವಿಫಲ ಎಂಬ ಆರೋಪ

ಯೂನುಸ್‌ ನೇತೃತ್ವದ ಮಧ್ಯಂತರ ಸರ್ಕಾರದ ವೈಫಲ್ಯ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಪದೇ ಪದೇ ವಿದ್ಯಾರ್ಥಿಗಳ ಪ್ರತಿಭಟನೆ

ಈ ಹಿನ್ನೆಲೆಯಲ್ಲಿ ಹಿರಿಯ ಸೇನಾ ಅಧಿಕಾರಿಗಳ ಜೊತೆ ಸೇನಾ ಮುಖ್ಯಸ್ಥ ವಾಕರ್‌-ಉಜ್‌-ಜಮಾನ್‌ ಅವರು ಸೋಮವಾರ ತುರ್ತು ಸಭೆ

==

ಢಾಕಾ: ಬಾಂಗ್ಲಾದೇಶದಲ್ಲೀಗ ಸೇನಾ ದಂಗೆಯ ವದಂತಿಗಳು ದಟ್ಟವಾಗಿವೆ. ಹಿಂದಿನ ಪ್ರಧಾನಿ ಶೇಖ್‌ ಹಸೀನಾ ಸರ್ಕಾರ ಪದಚ್ಯುತಿ ಬಳಿಕ ಅಧಿಕಾರಕ್ಕೆ ಬಂದ ಮೊಹಮ್ಮದ್‌ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ದೇಶ ಮುನ್ನಡೆಸಲು ಹಾಗೂ ಹಿಂಸಾಚಾರ ನಿಯಂತ್ರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಸೇನೆಯೇ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸೇನಾ ಮುಖ್ಯಸ್ಥ ವಾಕರ್‌-ಉಜ್‌-ಜಮಾನ್‌ ಅವರು ಸೋಮವಾರ ತುರ್ತು ಸಭೆ ಕರೆದಿದ್ದು, ಇದು ಮುಂದಿನ ದಿನಗಳಲ್ಲಿ ದೇಶದಲ್ಲಿ ನಡೆಯಲಿರುವ ಪ್ರಮುಖ ಬೆಳವಣಿಗೆಗಳ ತಯಾರಿ ಎಂದು ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಐದು ಲೆಫ್ಟಿನೆಂಟ್‌ ಜನರಲ್‌ಗಳು, ಎಂಟು ಮೇಜರ್‌ ಜನರಲ್‌ಗಳು, ಸ್ವತಂತ್ರ ಬ್ರಿಗೇಡ್‌ಗಳ ಕಮಾಂಡಿಂಗ್‌ ಆಫೀಸರ್‌ಗಳು ಮತ್ತು ಸೇನಾ ಮುಖ್ಯ ಕಚೇರಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೊಹಮ್ಮದ್‌ ಯೂನುಸ್‌ ನೇತೃತ್ವದ ಮಧ್ಯಂತರ ಸರ್ಕಾರ ಕುರಿತು ದೇಶದ ಜನರಲ್ಲಿ ಅಪನಂಬಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದಲ್ಲಿ ಸ್ಥಿರತೆ ತರುವ ನಿಟ್ಟಿನಲ್ಲಿ ಸೇನೆಯ ಪಾತ್ರದ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಹೇಳಲಾಗುತ್ತಿದೆ.

ಸೇನೆಯು ರಾಷ್ಟ್ರಪತಿ ಅವರಿಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವಂತೆ ಒತ್ತಡ ಹೇರಬಹುದು ಅಥವಾ ಯೂನುಸ್‌ ಸರ್ಕಾರ ವಿರುದ್ಧ ಕ್ಷಿಪ್ರಕ್ರಾಂತಿ ನಡೆಸಲೂಬಹುದು. ಅಲ್ಲದೆ, ತನ್ನ ನಿಗಾದಲ್ಲಿ ''''''''''''''''ರಾಷ್ಟ್ರೀಯ ಏಕತೆಯ ಸರ್ಕಾರ'''''''''''''''' ರಚಿಸುವ ಕುರಿತೂ ಸೇನೆ ಚಿಂತನೆ ನಡೆಯುತ್ತಿದೆ ಎಂದು ಗುಸುಗುಸು ಜೋರಾಗಿದೆ.

ಆದರೆ ಸೇನೆಯಾಗಲಿ, ಮೊಹಮ್ಮದ್‌ ಯೂನುಸ್‌ ಅವರಾಗಲಿ ಈ ಕುರಿತು ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಹಿಂಸಾಚಾರಆತಂಕ ಹಿನ್ನೆಲೆಯಲ್ಲಿ ಸೇನೆ ಹೆಚ್ಚಿನ ನಿಗಾ ಇಟ್ಟಿದೆ. ಶುಕ್ರವಾರದಿಂದಲೇ ಸೇನೆಯು ಅಲ್ಲಲ್ಲಿ ಚೆಕ್‌ಪಾಯಿಂಟ್‌ ನಿರ್ಮಿಸಿ ಗಸ್ತು ಬಿಗಿಗೊಳಿಸಿದೆ.

ಸೇನೆ ಭಾರತಕ್ಕೆ ಹತ್ತಿರ?:

ಕಳೆದ ಕೆಲ ಸಮಯದ ಹಿಂದೆ ಫ್ರಾನ್ಸ್ ಮೂಲದ ಬಾಂಗ್ಲಾದೇಶಿ ಸೋಷಿಯನ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಪಿನಾಕಿ ಭಟ್ಟಾಚಾರ್ಯ ಅವರು ತೀವ್ರಗಾಮಿಗಳು ಹಾಗೂ ವಿದ್ಯಾರ್ಥಿಗಳಿಗೆ, ಸೇನಾ ಮುಖ್ಯಸ್ಥರ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದರು. ಸೇನಾ ಮುಖ್ಯಸ್ಥರು ಭಾರತದ ಪರವಾಗಿದ್ದಾರೆ ಎಂದು ಆರೋಪಿಸಿದ್ದರು.

ವಿದ್ಯಾರ್ಥಿಗಳ ಒಕ್ಕೂಟ ಕೂಡ, ‘ ಸೇನೆಯು ಅವಾಮಿ ಲೀಗ್‌ನ ಶೇಖ್ ಹಸೀನಾರನ್ನು ವಾಪಸ್‌ ಕರೆಸಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿತ್ತು. ಇದನ್ನು ಸೇನೆ ಮಾತ್ರ ತಳ್ಳಿಹಾಕಿತ್ತು.

Share this article