;Resize=(412,232))
ಮನಿಲಾ: ದಕ್ಷಿಣ ಫಿಲಿಪ್ಪೀನ್ಸ್ನಲ್ಲಿ ಸೋಮವಾರ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 32 ಜನರು ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಭೂಕಂಪದ ಪರಿಣಾಮವಾಗಿ ಸಮೀಪದ ಕರಾವಳಿಯಲ್ಲಿ 1 ಮೀ. ಎತ್ತರದ ಸುನಾಮಿ ಎದ್ದಿದೆ.
ಭೂಕಂಪದ ತೀವ್ರತೆಗೆ ದಕ್ಷಿಣ ಫಿಲಿಪ್ಪೀನ್ಸ್ನ ಸಾರಂಗನಿ ಪ್ರಾಂತ್ಯದಲ್ಲಿ ಭೂಕುಸಿತ ಸಂಭವಿಸಿ 13 ಗ್ರಾಮಸ್ಥರು ಸಾವನ್ನಪ್ಪಿದ್ದಾರೆ. ಜನರಲ್ ಸ್ಯಾಂಟೋಸ್ ನಗರದಲ್ಲಿ ಕೆಲವು ಕಟ್ಟಡಗಳು ಕುಸಿದಿವೆ. ಪ್ರಮುಖ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಕನಿಷ್ಠ 1 ಕರಾವಳಿ ಹಳ್ಳಿ ಸುನಾಮಿಯಿಂದ ಸಂಪೂರ್ಣ ಹಾಳಾಯಾಗಿದ್ದು, ಇಂಡೋನೇಷ್ಯಾ, ಪಲಾವ್ ಮತ್ತು ದಕ್ಷಿಣ ಜಪಾನ್ನಷ್ಟು ದೂರದಲ್ಲಿಯೂ ಸುನಾಮಿಯ ಅಲೆಗಳು ವರದಿಯಾಗಿದೆ.
ಜನರಲ್ ಸ್ಯಾಂಟೋಸ್ನಲ್ಲಿ 2 ಅಂತಸ್ತಿನ ಶಾಲೆ ಕುಸಿದು, ಕೆಲವು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಇದೇ ಪ್ರದೇಶದಲ್ಲಿ 12 ಜನ ಕಾಣೆಯಾಗಿದ್ದಾರೆ. ಇನ್ನು ಕೆಲವು ಹಳ್ಳಿಗಳ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕಟ್ಟಡ ಕುಸಿತಕ್ಕೆ ಸಿಲುಕಿದ ಜನರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ವಿಶ್ವದ ಅತ್ಯಂತ ವಿಪತ್ತು ಪೀಡಿತ ದೇಶಗಳಲ್ಲಿ ಫಿಲಿಪ್ಪೀನ್ಸ್ ಒಂದು. ಈ ದ್ವೀಪಸಮೂಹದಲ್ಲಿ ಪ್ರತಿ ವರ್ಷ ಸುಮಾರು 20 ಚಂಡಮಾರುತಗಳು ಸಂಭವಿಸುತ್ತವೆ.
ನವದೆಹಲಿ: ಭಾರತವು ಪಾಕಿಸ್ತಾನಕ್ಕಿಂತ ತನ್ನ ಪರಮಾಣು ಸಂಗ್ರಹ ಪ್ರಾಬಲ್ಯ ಹೆಚ್ಚಿಸಿಕೊಂಡಿದ್ದು ಈ ವರ್ಷದ ಆರಂಭದ ವೇಳೆಗೆ 190 ಸಿಡಿತಲೆಗಳನ್ನು ಹೊಂದಿತ್ತು ಎಂದು ವರದಿಯೊಂದು ಹೇಳಿದೆ. ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್ಐಪಿಆರ್ಐ) ತನ್ನ ವಾರ್ಷಿಕ ಪುಸ್ತಕ ಬಿಡುಗಡೆ ಮಾಡಿದೆ. ಅದರಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದೆ. ಭಾರತವು ಪಾಕಿಸ್ತಾನಕ್ಕಿಂತ ಅಧಿಕ ಪರಮಾಣು ಸಂಗ್ರಹವನ್ನು ಹೊಂದಿದೆ. ಪಾಕಿಸ್ತಾನದಲ್ಲಿ 170 ಸಿಡಿತಲೆಗಳ ಸಂಗ್ರಹವಿದ್ದರೆ ಭಾರತಕ್ಕೆ ಅದಕ್ಕಿಂತ 20 ಜಾಸ್ತಿ ಹೊಂದಿದೆ ಎಂದು ವರದಿ ಹೇಳಿದೆ.
ವಾಯುಪಡೆ ಫ್ಲೈಟಲ್ಲಿ ಪ್ರಶ್ನೆಪತ್ರಿಕೆ ಸಾಗಣೆ
ಜೂ.21ರ ನೀಟ್-ಯುಜಿ ಮರುಪರೀಕ್ಷೆಗೆ ಪ್ರಶ್ನೆಪತ್ರಿಕೆ ಸಾಗಿಸಲು ಭಾರತೀಯ ವಾಯುಪಡೆಯ ನೆರವು ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶಾದ್ಯಂತ 18 ಸ್ಥಳಗಳಿಂದ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ಸಾಗಿಸಲು ವಾಯುಪಡೆಯ ಮಿ-17 ವಿಮಾನ ಬಳಸಿಕೊಳ್ಳಲಾಗುತ್ತಿದೆ. ನಂತರ ಪ್ರತಿ ಕೇಂದ್ರಕ್ಕೆ ಪ್ರಶ್ನೆಪತ್ರಿಕೆ ಸಾಗಣೆ ವೇಳೆ ಪ್ರತಿ ಹಂತದಲ್ಲಿ ಸೇನಾ ಭದ್ರತೆ ಇರುತ್ತದೆ ಎಂದು ಉನ್ನತ ರಕ್ಷಣಾ ಮೂಲಗಳು ತಿಳಿಸಿವೆ.
ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನೀಟ್-ಯುಜಿ-2026 ಪರೀಕ್ಷೆ ರದ್ದಾಗಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಕಾರಣ ಜೂ.21ರಂ ನೀಟ್ ಮರುಪರೀಕ್ಷೆ ಪ್ರಕ್ರಿಯೆಯನ್ನು ಭಾರೀ ಭದ್ರತೆಯೊಂದಿಗೆ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪ್ರಶ್ನೆಪತ್ರಿಕೆ ಸಿದ್ಧಪಡಿಸುವ, ತಿದ್ದುಪಡಿ ಮಾಡುವ ಹಾಗೂ ಅನುವಾದಿಸುವ ಕಾರ್ಯ ಸೇರಿ ಸಿದ್ಧತಾ ಕಾರ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಈಗಾಗಲೇ ಸುರಕ್ಷಿತ ಹಾಗೂ ರಹಸ್ಯ ಸ್ಥಳಕ್ಕೆ ಸ್ಥಳದಲ್ಲಿಡಲಾಗಿದೆ. ಅವರು ಬಾಹ್ಯ ಜಗತ್ತಿನ ಸಂಪರ್ಕದಿಂದ ದೂರವಿರುವಂತೆ ನೋಡಿಕೊಳ್ಳಲಾಗಿದೆ.
ಜೂ.21ರ ವರೆಗೆ ಅಂದರೆ ಪರೀಕ್ಷೆ ಮುಗಿಯುವವರೆಗೆ ಪ್ರಶ್ನೆಪತ್ರಿಕೆ ಸಿದ್ಧತಾ ಕಾರ್ಯದಲ್ಲಿ ಭಾಗಿಯಾದವರನ್ನು ಒಂದು ರೀತಿ ಲಾಕ್ಡೌನ್ ಸ್ಥಿತಿಯಲ್ಲಿಡಲಾಗಿದೆ. ಈ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ದೇಶದ ಪರೀಕ್ಷಾ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳಲ್ಲಿ ಮೂಡಿರುವ ಅಪನಂಬಿಕೆ ಹೋಗಲಾಡಿಸಲು ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ಈ ಬಾರಿ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ.
ರಹಸ್ಯ ಸ್ಥಳದಲ್ಲಿ ಲಾಕ್, ಹದ್ದಿನ ಕಣ್ಣು:
ಅಧಿಕಾರಿಗಳ ಪ್ರಕಾರ ಪ್ರಶ್ನೆಪತ್ರಿಕೆ ಸೆಟ್ ಮಾಡಿದವರು, ತಿದ್ದುಪಡಿ ಕಾರ್ಯದಲ್ಲಿ ತೊಡಗಿದವರು, ಭಾಷಾಂತರಕಾರರು ಹಾಗೂ ಪ್ರಶ್ನಾಪತ್ರಿಕೆ ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರನ್ನೂ ಸುರಕ್ಷಿತವಾದ ಸ್ಥಳದಲ್ಲಿರಿಸಲಾಗಿದೆ. ಮೊಬೈಲ್, ಲ್ಯಾಪ್ಟಾಪ್, ಸ್ಮಾರ್ಟ್ವಾಚ್ ಮತ್ತು ಇತರೆ ವೈಯಕ್ತಿಕ ಸಂವಹನ ವ್ಯವಸ್ಥೆಗಳಿಂದ ಅವರನ್ನು ದೂರವಿಡಲಾಗಿದೆ. ಇಂಟರ್ನೆಟ್ ಸೌಲಭ್ಯ ನಿಯಂತ್ರಿಸಲಾಗಿದೆ. ಅನುಮತಿ ಇರುವವರಿಗಷ್ಟೇ ಆ ಸ್ಥಳಕ್ಕೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. 24 ಗಂಟೆಯೂ ಈ ಸ್ಥಳದ ಮೇಲೆ ಕಣ್ಣಗಾವಲು ಇಡಲಾಗುತ್ತಿದೆ.
ಇದು ಮೊದಲ ಹಂತದ ಭದ್ರತೆ ಅಷ್ಟೆ:
ಈ ಲಾಕ್ಡೌನ್ ಪ್ರಕ್ರಿಯೆ ನೀಟ್ ಪರೀಕ್ಷೆ ಕುರಿತು ಕಲ್ಪಿಸಲಾಗಿರುವ ಮೊದಲ ಹಂತದ ಭದ್ರತೆ ಅಷ್ಟೆ. ಇನ್ನೂ ಇದೇ ರೀತಿಯ ಅನೇಕ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ.
ಏನಾಗಿತ್ತು?
ವೈದ್ಯಕೀಯ ಕೋರ್ಸ್ಗೆ ಪ್ರವೇಶ ಬಯಸುವವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಮೇ 3ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮೇ 27ರಂದು ರದ್ದು ಮಾಡಲಾಗಿತ್ತು. ಈ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.