ಭಾರತದ ಆರ್ಥಿಕ ಶಿಸ್ತಿಗೆ ಐಎಂಎಫ್‌ ಮುಕ್ತ ಪ್ರಶಂಸೆ

KannadaprabhaNewsNetwork |  
Published : Apr 20, 2024, 01:30 AM ISTUpdated : Apr 20, 2024, 04:10 AM IST
IMF India

ಸಾರಾಂಶ

ಲೋಕಸಭೆ ಚುನಾವಣೆಯ ವರ್ಷದಲ್ಲೂ ಭಾರತ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಪ್ರಶಂಸೆಯನ್ನು ವ್ಯಕ್ತಪಡಿಸಿದೆ.

  ವಾಷಿಂಗ್ಟನ್‌ : ಲೋಕಸಭೆ ಚುನಾವಣೆಯ ವರ್ಷದಲ್ಲೂ ಭಾರತ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಪ್ರಶಂಸೆಯನ್ನು ವ್ಯಕ್ತಪಡಿಸಿದೆ.

ಭಾರತದ ಆರ್ಥಿಕತೆ ಚೆನ್ನಾಗಿದೆ. ವಿಶ್ವದಲ್ಲಿ ಪ್ರಕಾಶಮಾನವಾಗಿ ಮುಂದುವರಿಯುತ್ತಿದೆ. ಜಿಡಿಪಿ ದರ ಶೇ.6.8ರಷ್ಟಿದ್ದು, ಅದು ಅತ್ಯುತ್ತಮವಾಗಿದೆ. ಹಣದುಬ್ಬರ ಇಳಿಯುತ್ತಿದೆ. ನಿಗದಿತ ಗುರಿಗೆ ಹಣದುಬ್ಬರ ಇಳಿಯುವಂತೆ ಮಾಡಬೇಕಾಗಿದೆ. ಸಮಗ್ರ ಆರ್ಥಿಕತೆ ಕೂಡ ಚೆನ್ನಾಗಿದೆ ಎಂದು ಐಎಂಎಫ್‌ನ ಏಷ್ಯಾ ಮತ್ತು ಪೆಸಿಫಿಕ್‌ ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್‌ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಚುನಾವಣೆ ವರ್ಷದಲ್ಲಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವುದು ನನ್ನ ಪ್ರಕಾರ ಹೆಗ್ಗುರುತು. ಏಕೆಂದರೆ, ಚುನಾವಣೆ ವರ್ಷದಲ್ಲಿ ದೇಶಗಳು ಆರ್ಥಿಕ ದುಸ್ಸಾಹಸಕ್ಕೆ ಇಳಿಯುತ್ತವೆ ಎಂದು ಅವರು ಹೇಳಿದ್ದಾರೆ.

ಭಾರತ ಕಳೆದ ಹಲವು ವರ್ಷಗಳಿಂದ ಹಲವಾರು ಬಗೆಯ ಆಘಾತಗಳನ್ನು ಎದುರಿಸಿದೆ. ಆದಾಗ್ಯೂ ಶರವೇಗದಲ್ಲಿ ಪ್ರಗತಿ ಹೊಂದುತ್ತಿರುವ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಖಾಸಗಿ ಬಳಕೆ ಹಾಗೂ ಸಾರ್ವಜನಿಕ ಹೂಡಿಕೆಯಿಂದಾಗಿ ಶೇ.6.8ರ ದರದಲ್ಲಿ ಭಾರತ ಪ್ರಗತಿ ಹೊಂದಬಹುದು ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಸರ್ಕಾರಗಳು ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತವೆ. ಆದರೆ ಚುನಾವಣೆಗೂ ಮುನ್ನ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಇಂತಹ ಯಾವುದೇ ಘೋಷಣೆಗಳೂ ಇರಲಿಲ್ಲ ಎಂಬುದು ಗಮನಾರ್ಹ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌