ಬಾಂಗ್ಲಾ: ಮತ್ತೆ ಮತ್ತೊಂದು ಹಿಂದೂ ದೇಗುಲಕ್ಕೆ ಬೆಂಕಿ - ರಾಜಧಾನಿ ಢಾಕಾ ಇಸ್ಕಾನ್‌ ಕೇಂದ್ರಕ್ಕೆ ದಾಳಿ

KannadaprabhaNewsNetwork | Updated : Dec 08 2024, 05:01 AM IST

ಸಾರಾಂಶ

ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ, ದೇಗುಲ ದಾಳಿ ಹಾಗೂ ಇಸ್ಕಾನ್‌ ಸನ್ಯಾಸಿ ಬಂಧನ ಪ್ರಕರಣದ ಬೆನ್ನಲ್ಲೇ, ಮತ್ತೊಂದು ದೇಗುಲ ದಾಳಿ ಘಟನೆ ನಡೆದಿದೆ.

 ಢಾಕಾ/ಕೋಲ್ಕತಾ : ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ, ದೇಗುಲ ದಾಳಿ ಹಾಗೂ ಇಸ್ಕಾನ್‌ ಸನ್ಯಾಸಿ ಬಂಧನ ಪ್ರಕರಣದ ಬೆನ್ನಲ್ಲೇ, ಮತ್ತೊಂದು ದೇಗುಲ ದಾಳಿ ಘಟನೆ ನಡೆದಿದೆ. ಈ ಸಲ ಢಾಕಾದಲ್ಲಿರುವ ಇಸ್ಕಾನ್‌ ಕೇಂದ್ರಕ್ಕೆ ಬೆಂಕಿ ಹಚ್ಚಲಾಗಿದ್ದು, ಅದರಲ್ಲಿದ್ದ 2 ದೇಗುಲಗಳು ಹಾಗೂ ದೇವರ ಮೂರ್ತಿಗಳು ಭಾಗಶಃ ಸುಟ್ಟಿವೆ.

ಈ ಕುರಿತು ಕೋಲ್ಕತಾ ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಮಣ ದಾಸ್‌ ಹಾಗೂ ಬಾಂಗ್ಲಾ ಇಸ್ಕಾನ್‌ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರದಾಸ ಬ್ರಹ್ಮಚಾರಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಬಾಂಗ್ಲಾದ ಢಾಕಾ ಜಿಲ್ಲೆಯಲ್ಲಿರುವ ನಮ್ಹಟ್ಟಾ ಇಸ್ಕಾನ್‌ ಕೇಂದ್ರವನ್ನು ಸುಡಲಾಗಿದೆ. ಅದರಲ್ಲಿನ ಶ್ರೀ ಶ್ರೀ ರಾಧಾ ಕೃಷ್ಣ ದೇವಸ್ಥಾನ ಹಾಗೂ ಶ್ರೀ ಶ್ರೀ ಮಹಾಭಾಗ್ಯ ಲಕ್ಷ್ಮೀ ನಾರಾಯಣ ದೇವಸ್ಥಾನಗಳಿಗೆ ಬೆಳಗಿನ ಜಾವ 2ರಿಂದ 3 ಗಂಟೆಯ ನಡುವೆ ಮೇಲ್ಛಾವಣಿಯ ಮೂಲಕ ಪೆಟ್ರೋಲ್‌ ಹಾಗೂ ಆಕ್ಟೇನ್‌ ಸುರಿದು ಬೆಂಕಿ ಹಚ್ಚಲಾಗಿದೆ. ಇದರಿಂದ ಲಕ್ಷ್ಮೀ ನಾರಾಯಣ ಮೂರ್ತಿ ಸೇರಿದಂತೆ ಕೆಲವು ಮೂರ್ತಿಗಳಿಗೆ ಹಾನಿಯಾಗಿದೆ. ದೇಗುಲದ ಒಳಗಿನ ಕರ್ಟನ್‌ ಸುಟ್ಟಿದೆ. ಕೂಡಲೇ ಅಗ್ನಿಶಾಮಕ ಕಾರ್ಯ ನದೆದಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ’ ಎಂದು ತಿಳಿಸಿದ್ದಾರೆ.

‘ಈ ಘಟನೆಗಳನ್ನು ಮಧ್ಯಂತರ ಸರ್ಕಾರದ ಗಮನಕ್ಕೆ ತಂದರೂ ಸಹ ಪೊಲೀಸರು ಹಾಗೂ ಆಡಳಿತದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸುತ್ತಿಲ್ಲ’ ಎಂದೂ ದಾಸ್‌ ಆರೋಪಿಸಿದ್ದಾರೆ.

ಈ ನಡುವೆ, ಪೊಲೀಸರು ಪ್ರತಿಕ್ರಿಯೆ ನೀಡಿ, ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಕಳೆದ ವಾರವೂ 3 ದೇಗುಲಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು.

ಈ ಮೊದಲು, ದಾಳಿಯಿಂದ ತಪ್ಪಿಸಿಕೊಳ್ಳಲು ತಮ್ಮ ಧರ್ಮ ಪ್ರದರ್ಶಿಸುವ ತಿಲಕ ಧರಿಸದಂತೆ ಇಸ್ಕಾನ್‌ ಸನ್ಯಾಸಿಗಳು ಹಾಗೂ ಅನುಯಾಯಿಗಳಿಗೆ ಅವರು ಕರೆ ನೀಡಿದ್ದರು.

ಘಟನೆಯನ್ನು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಸುಕಾಂತ್‌ ಮಜುಂದಾರ್‌ ಖಂಡಿಸಿದ್ದು, ಇದು ಪೂಜಾ ಸ್ಥಳದ ವಿರುದ್ಧ ದ್ವೇಷ ಸಾಧಿಸುವ ಕೆಲಸವಾಗಿದೆ ಎಂದು ಕಿಡಿ ಕಾರಿದ್ದಾರೆ.

Share this article