ಬೆಂಗಳೂರು/ನವದೆಹಲಿ : ‘ಮೆಟಾ’ ವೇದಿಕೆಗಳಲ್ಲಿ ಕನ್ನಡದ ವಿಷಯಗಳ ಸ್ವಯಂ ಅನುವಾದದ ವೇಳೆ ಭಾರೀ ಲೋಪ ಹಾಗೂ ನೈಜ ಅರ್ಥವೇ ನಾಶವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ, ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಫೇಸ್ಬುಕ್ ಮಾತೃಸಂಸ್ಥೆ ಮೆಟಾ ಈ ಕುರಿತು ಕ್ಷಮೆಯಾಚಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸ್ಥೆ, ‘ಅನುವಾದದಲ್ಲಿ ಕೆಲಕಾಲ ದೋಷ ಕಂಡುಬರಲು ಕಾರಣವಾಗಿದ್ದ ಅಂಶಗಳನ್ನು ನಾವು ಸರಿಪಡಿಸಿದ್ದೇವೆ. ಇಂಥ ಘಟನೆ ನಡೆದಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ’ ಎಂದು ಹೇಳಿದೆ.
ಇದಕ್ಕೂ ಮುನ್ನ, ಪ್ರಮುಖ ಸಾಮಾಜಿಕ ಜಾಲತಾಣ ‘ಮೆಟಾ’ ವೇದಿಕೆಗಳಲ್ಲಿ ಕನ್ನಡದ ವಿಷಯಗಳ ಸ್ವಯಂ ಅನುವಾದದ ವೇಳೆ ಭಾರೀ ಲೋಪ ಹಾಗೂ ನೈಜ ಅರ್ಥವೇ ನಾಶವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಗುರುವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಅವರು, ಮೆಟಾ ಪ್ಲಾಟ್ಫಾರ್ಮ್ಗಳಲ್ಲಿ ಆಗುತ್ತಿರುವ ಕನ್ನಡದ ವಿಷಯಗಳ ದೋಷಪೂರಿತ ಅನುವಾದವು ವಿಷಯಗಳ ಸತ್ಯಾಂಶಗಳನ್ನೇ ನಾಶಪಡುತ್ತಿದ್ದು, ಈ ವೇದಿಕೆಯ ಬಳಕೆದಾರರನ್ನು ತಪ್ಪುಗ್ರಹಿಕೆಗೆ ಒಳಪಡಿಸುತ್ತಿದೆ. ಇದು ಅಧಿಕೃತ ಸಂವಹನಗಳಿಗೆ ಬಂದಾಗ ಅತ್ಯಂತ ಅಪಾಯಕಾರಿಯಾಗಲಿದೆ ಎಂದಿದ್ದರು.
ಕನ್ನಡ ಅನುದಾದದಲ್ಲಿ ಆಗುತ್ತಿರುವ ಲೋಪ ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿ ನನ್ನ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಮೆಟಾಗೆ ಔಪಚಾರಿಕವಾಗಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.ಇತ್ತೀಚೆಗೆ ನಿಧನರಾದ ಕರ್ನಾಟಕದ ಹಿರಿಯ ನಟಿ ಬಹುಭಾಷಾ ತಾರೆ ಬಿ.ಸರೋಜಾದೇವಿ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪನಮನ ಸಲ್ಲಿಸಿ ಅಂತಿಮ ದರ್ಶನ ಪಡೆದ ವಿಚಾರವು ‘ಮೆಟಾ’ದಲ್ಲಿ ಇಂಗ್ಲಿಷ್ನಿಂದ ಕನ್ನಡಕ್ಕೆ ಆದ ಸ್ವಯಂ ಅನುವಾದ ಬಹಳ ಕೆಟ್ಟದಾಗಿ ಆಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ನಾಗರಿಕರು ಕೂಡ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಆಗಾಗ ಬರುವ ಇಂತಹ ತಪ್ಪಾದ ಅನುವಾದಗಳ ಬಗ್ಗೆ ಎಚ್ಚರವಹಿಸಬೇಕು. ತಂತ್ರಜ್ಞಾನ ದೈತ್ಯ ಸಂಸ್ಥೆಗಳಿಂದ ಆಗುವ ಇಂತಹ ನಿರ್ಲಕ್ಷ್ಯ ಸಾರ್ವಜನಿಕ ತಿಳಿವಳಿಕೆ ಮತ್ತು ನಂಬಿಕೆಗೆ ಹಾನಿಯುಂಟು ಮಾಡುತ್ತದೆ ಎಂದು ಹೇಳಿ
ಸರಿಪಡಿಸಿದ್ದೇವೆ
ಅನುವಾದದಲ್ಲಿ ಕೆಲಕಾಲ ದೋಷ ಕಂಡುಬರಲು ಕಾರಣವಾಗಿದ್ದ ಅಂಶಗಳನ್ನು ನಾವು ಸರಿಪಡಿಸಿದ್ದೇವೆ. ಇಂಥ ಘಟನೆ ನಡೆದಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ.
- ಮೆಟಾ, ಫೇಸ್ಬುಕ್ ಮಾತೃಸಂಸ್ಥೆ