ನವದೆಹಲಿ: ಉಕ್ರೇನ್ ಮೇಲೆ ದಾಳಿ ತೀವ್ರಗೊಂಡ ಹೊತ್ತಿನಲ್ಲೇ, ‘ಆ ದೇಶದ ಮೇಲೆ ರಷ್ಯಾ ಪರಮಾಣು ದಾಳಿ ನಡೆಸದಂತೆ ತಡೆದಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ’ ಎಂದು ಉಕ್ರೇನ್ ಪಕ್ಕದ ದೇಶವಾದ ಪೋಲೆಂಡ್ನ ವಿದೇಶಾಂಗ ಖಾತೆ ಉಪ ಸಚಿವ ವ್ಲಾಡಿಸ್ಲಾ ಥಿಯೋಫಿಲ್ ಬಾರ್ಟೋಸ್ಜೆವೆಸ್ಕಿ ಅಚ್ಚರಿಯ ವಿಷಯ ಬಹಿರಂಗಪಡಿಸಿದ್ಧಾರೆ.
ತಮ್ಮ ಭಾರತ ಪ್ರವಾಸದ ವೇಳೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸಚಿವ ವ್ಲಾಡಿಸ್ಲಾ, ‘ರಷ್ಯಾ- ಉಕ್ರೇನ್ ಯುದ್ಧದ ತೀವ್ರತೆ ಕಡಿಮೆ ಮಾಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದ್ದಕ್ಕೆ ನಮ್ಮ ದೇಶ ಕೃತಜ್ಞವಾಗಿದೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದ ವೇಳೆ ಉಕ್ರೇನ್ ಮೇಲೆ ಪರಮಾಣು ದಾಳಿ ನಡೆಸದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಮೋದಿ ಮನವೊಲಿಸಿದ್ದರು’ ಎಂದು ಹೇಳಿದ್ದಾರೆ.
ಭಾನುವಾರಷ್ಟೇ ಫ್ರಿಡ್ಮನ್ ಜೊತೆಗಿನ ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ‘ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೋದಿಮಿರ್ ಜೆಲೆನ್ಸ್ಕಿ ಇಬ್ಬರಿಗೂ ಯುದ್ಧ ನಿಲ್ಲಿಸಿ ಎಂದು ಪಾಠ ಹೇಳುವ ಸ್ನೇಹ ನನಗಿದೆ. ಪುಟಿನ್ ಪಕ್ಕದಲ್ಲಿಯೇ ಕುಳಿತು ಇದು ಯುದ್ಧದ ಸಮಯವಲ್ಲ ಎಂದು ಹೇಳುತ್ತೇನೆ. ಅದೇ ರೀತಿ ಜೆಲೆನ್ಸ್ಕಿಗೂ ‘ಎಷ್ಟೇ ಜನರು ನಿಮ್ಮ ಬೆಂಬಲಕ್ಕೆ ನಿಂತರೂ ಯುದ್ಧ ಭೂಮಿಯಲ್ಲಿ ನಿರ್ಣಯ ಆಗುವುದಿಲ್ಲ ಎಂದು ಸ್ನೇಹಪೂರ್ವಕವಾಗಿ ಹೇಳುತ್ತೇನೆ. ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ದೇಶವಲ್ಲ. ಅಂದು ಇಂದು ಮುಂದು ಶಾಂತಿ ಪರ ವಹಿಸುತ್ತದೆ. ನಮ್ಮದು ಗೌತಮ ಬುದ್ಧ ಮತ್ತು ಮಹಾತ್ಮ ಗಾಂಧಿ ಅವರ ದೇಶ. ಶಾಂತಿ ನೆಲೆಸಲು ಶ್ರಮಿಸಲು ನಾವು ಸಿದ್ಧ. ಈಗ ಸಮಯ ತಿಳಿಯಾಗುತ್ತಿದೆ. ಶಾಂತಿ ಸ್ಥಾಪಿಸಲು ಇದು ಸೂಕ್ತ ಸಮಯ’ ಎಂದು ಹೇಳಿದ್ದರು.
- ಉಕ್ರೇನ್-ರಷ್ಯಾ ಯುದ್ಧ ತಾರಕಕ್ಕೇರಿದಾಗ ಮೋದಿ ಮಧ್ಯಪ್ರವೇಶ
- ಇದು ಯುದ್ಧದ ಸಮಯವಲ್ಲ ಎಂದು ಪುಟಿನ್ಗೆ ಹೇಳಿದ್ದ ಮೋದಿ
- ಮೋದಿ ಅವರ ಮನವಿಯಿಂದ ಸಾಕಷ್ಟು ಸಕಾರಾತ್ಮಕ ಪರಿಣಾಮ
- ಉಕ್ರೇನ್ ಮೇಲೆ ಅಣುದಾಳಿ ತಡೆಯಲು ಈ ಮನವಿ ಸಹಕಾರಿ
- ಯುದ್ಧದ ತೀವ್ರತೆ ಕಡಿಮೆ ಮಾಡುವಲ್ಲಿ ಮೋದಿ ಪಾತ್ರ ಹಿರಿದು
- ಇದಕ್ಕಾಗಿ ನಮ್ಮ ದೇಶ ಮೋದಿಗೆ ಕೃತಜ್ಞ: ಪೋಲೆಂಡ್ ಸಚಿವ