ಕನ್ನಡಪ್ರಭ ವಾರ್ತ ರಾಮನಗರ
ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಯನ್ನು ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ವಿರುದ್ಧ ಜೆಡಿಎಸ್ ಮುಖಂಡರು -ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಸೇರಿದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರು-ಉಪಾಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಮಹಿಳಾ ಕಾರ್ಯಕರ್ತೆಯರು ಮಹಿಳಾ ಮಸೂದೆ ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಅಗೌರವ ತೋರಿದೆ ಎಂದು ಟೀಕಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರು ಆದ ಮಾಜಿ ಶಾಸಕ ಎ.ಮಂಜುನಾಥ್, 1996ರಲ್ಲಿ ಎಚ್.ಡಿ.ದೇವೇಗೌಡರ ನೇತೃತ್ವದ ಸರ್ಕಾರವು ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಲು ಕ್ರಾಂತಿಕಾರಿ ಮಸೂದೆ ಮಂಡಿಸಿತ್ತು. ಅಂದು ಕಾಂಗ್ರೆಸ್ ಮತ್ತು ಅದರ ಸಹಚರರು ಸಂಘಟಿತವಾಗಿ ಆ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಈ ಅನ್ಯಾಯವನ್ನು ಸರಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇರಿಸಿದ್ದರು. ಈಗಲೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ಪಕ್ಷಗಳು ಮಸೂದೆಗೆ ತಡೆಯೊಡ್ಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಅವರು ಮಹಿಳಾ ವಿರೋಧಿಗಳು. ಹೆಣ್ಣು ಮಕ್ಕಳು ರಾಜಕೀಯಕ್ಕೆ ಬಾರದಂತೆ ತಡೆಯುತ್ತಿದ್ದಾರೆ. ಕೇವಲ ಒಂದು ಕುಟುಂಬದ ಮಹಿಳೆಯರು ಅಧಿಕಾರದಲ್ಲಿರಬೇಕೆಂಬ ದುರಾಸೆ ಹೊಂದಿದ್ದಾರೆ. ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ವಿರೋಧಿಸುವ ಮೂಲಕ ತನ್ನ ನೀಚ ಸಂಸ್ಕೃತಿ ಪ್ರದರ್ಶಿಸಿದೆ. ಆ ಮೂಲಕ ಪ್ರಜಾಪ್ರಭುತ್ವ ಹಾಗೂ ಮಹಿಳೆಯರಿಗೆ ಅವಮಾನ ಮಾಡಿದೆ . ಮಹಿಳಾ ಮೀಸಲಾತಿಗೆ ಅಡ್ಡಲಾಗಿರುವ ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದರು.ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರಗಳೊಂದಿಗೆ ನಾರಿಶಕ್ತಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದರು. ಅದರಂತೆ ದೇಶದ ಮಹಿಳೆಯರು ಖುಷಿಯಲ್ಲಿದ್ದರು. ಆದರೆ ಮಸೂದೆ ವಿರೋಧಿಸಿರುವುದು ಕಾಂಗ್ರೆಸ್ನ ಮಹಿಳಾ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನಾಯಕರು ಈ ಮಸೂದೆ ವಿರೋಧಿಸಿ ಜಯ ಸಾಧಿಸಿರುವುದಾಗಿ ಭಾವಿಸುತ್ತಿದ್ದರೂ, ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.ಶತಮಾನದ ದುರಂತ: ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು ಮಾತನಾಡಿ, ಮಹಿಳೆಯರಿಗೆ ರಾಜಕೀಯದಲ್ಲಿ ಶೇಕಡ 33ರಷ್ಟು ಮೀಸಲಾತಿ ಒದಗಿಸಬೇಕೆಂಬುದು ದಶಕಗಳ ಬೇಡಿಕೆ. ಮಹಿಳೆ ಸಬಲೀಕರಣಗೊಂಡರೆ ದೇಶ ಸಬಲೀಕರಣಗೊಳ್ಳುತ್ತದೆ ಎಂಬುದು ಮಸೂದೆಯ ಆಶಯ. ಆದರೆ, ದಶಕಗಳಿಂದಲೂ ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ತನ್ನ ನಿಜ ಬಣ್ಣವನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಟೀಕಿಸಿದರು.ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮಸೂದೆಯ ಅಂಗೀಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿತು. ಆದರೆ, 21ನೇ ಶತಮಾನದ ಭಾರತದಲ್ಲಿ ಮಹಿಳೆಯರನ್ನು ರಾಜಕೀಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ದೂರವಿಟ್ಟಿದ್ದು, ಶತಮಾನದ ದುರಂತ. ಇದಕ್ಕಾಗಿ ಆ ಪಕ್ಷ ಮಹಿಳೆಯರಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ರಾಮನಗರ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಕನಕಪುರ ತಾಲೂಕು ಅಧ್ಯಕ್ಷ ನಾಗರಾಜು (ಚಿಕ್ಕಪ್ಪ), ಮಾಗಡಿ ತಾಲೂಕು ಅಧ್ಯಕ್ಷ ರಾಮಣ್ಣ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಹಾರೋಹಳ್ಳಿ ತಾಲೂಕು ಅಧ್ಯಕ್ಷ ರಾಮು, ರಾಮನಗರ ನಗರಸಭೆ ಸದಸ್ಯ ಮಂಜುನಾಥ್, ಕನಕಪುರ ನಗರಸಭೆ ಸದಸ್ಯ ಸ್ಟುಡಿಯೋ ಚಂದ್ರು, ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ತಾಪಂ ಮಾಜಿ ಸದಸ್ಯ ಲಕ್ಷ್ಮಿಕಾಂತ್, ಮುಖಂಡರಾದ ಬಿ.ಉಮೇಶ್ , ನರಸಿಂಹಮೂರ್ತಿ, ಗೂಳಿ ಕುಮಾರ್ , ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಜಿ.ಟಿ.ಕೃಷ್ಣ, ಶೆಟ್ಟಿಗೌಡನದೊಡ್ಡಿ ನರಸಿಂಹಮೂರ್ತಿ, ದಿಶಾ ಸದಸ್ಯರಾದ ರೇಖಾ ಉಮಾಶಂಕರ್, ಶೋಭಾ, ಮಹಿಳಾ ಮುಖಂಡರಾದ ಸರಸ್ವತಿ, ಪೂರ್ಣಿಮಾ, ಪವಿತ್ರ, ಚಿತ್ರ, ರಮ್ಯಾ, ಮಮತಾ, ಸತ್ಯವತಿ ಇತರರು ಭಾಗಿಯಾಗಿದ್ದರು.
ಮಹಿಳೆಯೇ ಜೆಡಿಎಸ್ ಪಕ್ಷದ ಚಿಹ್ನೆ. ಆದರೆ, ಮಹಿಳೆಯರನ್ನು ಅಧಿಕಾರದಿಂದ ದೂರವಿಡಬೇಕು ಎಂಬುದು ಕಾಂಗ್ರೆಸ್ನ ಸಿದ್ಧಾಂತವಾಗಿದೆ. ಕಾಂಗ್ರೆಸ್ ಪಕ್ಷ ಸ್ತ್ರೀ ವಿರೋಧಿ. ಮಹಿಳೆಯರಿಗೆ ಸಾಮಾಜಿಕ ನ್ಯಾಯ ಒದಗಿಸುವ ಎನ್ಡಿಎ ಆಶಯಕ್ಕೆ ಧಕ್ಕೆ ಉಂಟು ಮಾಡಿದೆ. ಮುಂದಿನ ಜನಗಳಲ್ಲಿ ಆ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ.-ಶೋಭಾ ಆರ್.ಗೌಡ, ಮಹಿಳಾ ಮುಖಂಡರು, ಜೆಡಿಎಸ್ವಿಧಾನಸಭೆಗಳು ಮತ್ತು ಲೋಕಸಭೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎನ್ನುವ ಭಯದಲ್ಲಿ ಕಾಂಗ್ರೆಸ್ ಪಕ್ಷ ಮಹಿಳಾ ಮಸೂದೆಯನ್ನು ವಿರೋಧಿಸಿದೆ. ಮಹಿಳೆಯರಿಗೆ ಆಗಿರುವ ಅವಮಾನವನ್ನು ಎಂದಿಗೂ ಕ್ಷಮಿಸುವುದಿಲ್ಲ. ಮಹಿಳಾ ಸಬಲೀಕರಣ ಮಾಡುವುದಾದರೆ ರಾಜಕೀಯದಲ್ಲಿ ಅವಕಾಶ ಕೊಡಬೇಕು. ಆದರೆ, ಕಾಂಗ್ರೆಸ್ನಿಂದ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಸರಿಯಾದ ಗೌರವ ನೀಡುತ್ತಿಲ್ಲ.ಶಾರದಾ ಗೌಡ, ಮಾಜಿ ಅಧ್ಯಕ್ಷರು ರಾ -ಚ ನಗರಾಭಿವೃದ್ಧಿ ಪ್ರಾಧಿಕಾರ1996ರಲ್ಲಿ ಪ್ರಧಾನಿಯಾಗಿದ್ದ ದೇವೇಗೌಡರು ಶಾಸನಸಭೆಗಳಲ್ಲಿ ಮಹಿಳೆಯರಿಗೆ ನ್ಯಾಯೋಚಿತ ಮೀಲಾತಿ ನೀಡುವ ಉದ್ದೇಶದಿಂದ ಮಹಿಳಾ ಮೀಸಲು ವಿಧೇಯಕ ಮಂಡಿಸಿದ್ದರು. ಅಂದು ಕೂಡ ಕಾಂಗ್ರೆಸ್ ಮತ್ತು ಸಂಯುಕ್ತ ರಂಗದ ಕೆಲ ಮಿತ್ರಪಕ್ಷಗಳ ಕುಯುಕ್ತಿಯಿಂದ ಆ ಮಸೂದೆಗೆ ಸೋಲಾಯಿತು. ಮತ್ತೆ ಅದೇ ಇತಿಹಾಸ ಮರುಕಳಿದೆ. ಮಹಿಳೆಯರ ಭವಿಷ್ಯಕ್ಕೆ ಕಾಂಗ್ರೆಸ್ ಪಕ್ಷ ಹಾಗೂ ಅದರ ಮಿತ್ರ ಪಕ್ಷಗಳು ಧಕ್ಕೆ ಉಂಟು ಮಾಡಿವೆ. ಪ್ರಶಾಂತಿ ಜೆಡಿಎಸ್ ರಾಜ್ಯ ವಕ್ತಾರೆ