;Resize=(412,232))
ಅಮರಾವತಿ (ಆಂಧ್ರ ಪ್ರದೇಶ): ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಗ್ರವಾದವನ್ನು ಪಸರಿಸಿ, ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ 12 ಮಂದಿಯನ್ನು ಆಂಧ್ರ ಪ್ರದೇಶದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಅಬ್ದುಲ್ ಸಲಾಂ (ಕರ್ನಾಟಕ), ಅಜ್ಮಾನುಲ್ಲಾ ಖಾನ್ (ಬಿಹಾರ), ಲಕ್ಕಿ ಅಹ್ಮದ್ (ದೆಹಲಿ), ಮೀರ್ ಆಸಿಫ್ ಅಲಿ (ಪ. ಬಂಗಾಳ), ಜೀಶನ್ (ರಾಜಸ್ಥಾನ), ಶಾರುಖ್ ಖಾನ್ ಮತ್ತು ಶಿಯಾಕ್ ಪಿಯಾಜ್ ಉರ್ ರೆಹಮಾನ್ (ಮಹಾರಾಷ್ಟ್ರ) ಹಾಗೂ ಆಂಧ್ರಪ್ರದೇಶದ ಮೊಹಮ್ಮದ್ ರಹಮತುಲ್ಲಾ ಶರೀಫ್, ಮಿರ್ಜಾ ಸೊಹೈಲ್ ಬೇಗ್ ಮತ್ತು ಮೊಹಮ್ಮದ್ ಡ್ಯಾನಿಶ್ ಬಂಧಿತ ಆರೋಪಿಗಳು.
ಇವರು ನಿಷೇಧಿತ ಉಗ್ರ ಸಂಘಟನೆಗಳಾದ ಅಲ್ ಖೈದಾ ಮತ್ತು ಐಸಿಸ್ ಜೊತೆ ಸಂಪರ್ಕ ಹೊಂದಿದ್ದರು. ಆಂಧ್ರದ ಮೂವರು ‘ಅಲ್ ಮಾಲಿಕ್ ಇಸ್ಲಾಮಿಕ್ ಯೂತ್’ ಎಂಬ ಗುಂಪನ್ನು ರಚಿಸಿ, ಯುವಕರನ್ನು ತೀವ್ರವಾದಿ ಚಿಂತನೆಗಳತ್ತ ಆಕರ್ಷಿಸುವುದು, ಜಿಹಾದ್ಗೆ ತಯಾರು ಮಾಡುವುದು ಮತ್ತು ದೇಶಾದ್ಯಂತ ತಮ್ಮ ನೆಟ್ವರ್ಕ್ ವಿಸ್ತರಿಸುವ ಕೆಲಸದಲ್ಲಿ ತೊಡಗಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾದಿ ವಿಡಿಯೋಗಳನ್ನು ಹಂಚುತ್ತಾ, ಯುವಕರನ್ನು ಉಗ್ರ ಚಟುವಟಿಕೆಗಳತ್ತ ಆಕರ್ಷಿಸುತ್ತಿದ್ದರು.
ಒಸಾಮಾ ಬಿನ್ ಲಾಡೆನ್ನ ವಿಡಿಯೋಗಳನ್ನು ನೋಡಿ ಆತನ ಅವರ ಉಡುಪು ಮತ್ತು ವರ್ತನೆಯನ್ನು ಅನುಕರಿಸುತ್ತಿದ್ದರು. ಭಾರತವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡುವ ಗುರಿಯಿಂದ, ಒಂದು ತಿಂಗಳಲ್ಲಿ ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆಯುವ ಯೋಜನೆಯನ್ನು ರೂಪಿಸಿದ್ದರು. ಇತರ ಯುವಕರಿಗೂ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆಯಲು ಪ್ರೇರೇಪಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
- ಅಲ್ಖೈದಾ, ಐಸಿಸ್ ನಂಟು ಹೊಂದಿದ್ದ 12 ಶಂಕಿತ ಉಗ್ರರ ಅರೆಸ್ಟ್
- ಜಾಲತಾಣ ಮೂಲಕ ಜಿಹಾದಿ, ಉಗ್ರರ ಕೃತ್ಯಕ್ಕೆ ಸೆಳೆಯುವ ಯತ್ನ
- ಉಗ್ರ ಲಾಡೆನ್ ರೀತಿ ವಸ್ತ್ರ ಧರಿಸಿ ಅವನಂತೆ ವರ್ತಿಸುತ್ತಿದ್ದ ತಂಡ
- ಭಾರತವನ್ನು ಇಸ್ಲಾಮಿಕ್ ರಾಜ್ಯ ಮಾಡುವ ಗುರಿ ರೂಪಿಸಿದ್ದ ಟೀಮ್
- ಇದಕ್ಕೆಂದೇ ಪಾಕಿಸ್ತಾನಕ್ಕೆ ತೆರಳಿ ತರಬೇತಿ ಪಡೆಯಲೂ ಯೋಜನೆ