ಬೆಂಗಳೂರು : 10 ದಿನಗಳ ಹಳೆಯ ವಾಹನವೆಂದು ಹೇಳಿ 82 ದಿನಗಳ ಹಳೆಯ ವಾಹನವನ್ನು(ಕಾರು) ನೀಡಿದ ಆರೋಪದ ಮೇಲೆ ದಾಖಲಾದ ದೂರು ರದ್ದುಪಡಿಸುವಂತೆ ಕೋರಿ ಆಟೋಮೊಬೈಲ್ಸ್ ಕಂಪನಿಯೊಂದರ ನಿರ್ದೇಶಕ ಸಲ್ಲಿಸಿರುವ ಅರ್ಜಿಯ ಸಂಬಂಧ ವೈಯಾಲಿಕಾವಲ್ ಠಾಣೆ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ
ಪ್ರಕರಣ ಸಂಬಂಧ ತಮ್ಮ ವಿರುದ್ಧದ ನಗರದ 1ನೇ ಎಸಿಜೆಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಸ್ಯಾಂಕಿ ರಸ್ತೆಯ ಟ್ರೈಡೆಂಟ್ ಆಟೋ ಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸಮಿರ್ ಚೌಧರಿ ಮತ್ತು ರಕ್ಷಿತ್ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿತು.
ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ಅರ್ಜಿದಾರರು 82 ದಿನಗಳ ಹಳೆಯ ವಾಹನವನ್ನು 10 ದಿನಗಳ ವಾಹನವೆಂದು ತಿಳಿಸಿ ದೂರುದಾರರಿಗೆ ಏಕೆ ಮಾರಾಟ ಮಾಡಿದ್ದೀರಿ ಎಂದು ಪ್ರಶ್ನಿಸಿತು. ಅದಕ್ಕೆ ಅರ್ಜಿದಾರರ ಪರ ವಕೀಲರು, ಲಭ್ಯವಿದ್ದ ವಾಹನವನ್ನು ನೀಡಲಾಗಿದೆ ಎಂದರು. ಇದರಿಂದ ಪೀಠ, ನೀವು (ಅರ್ಜಿದಾರರು) ಇದೇ ರೀತಿಯಲ್ಲಿ ಹಳೆಯ ವಾಹನಗಳನ್ನು ಮಾರಾಟ ಮಾಡುತ್ತೀರಾ? ಟ್ರೈಡೆಂಟ್ ಹುಂಡೈ ಕಂಪನಿಯು ಹಳೆಯ ವಾಹನಗಳನ್ನು ಮಾರಾಟ ಮಾಡುತ್ತದೆಯೇ? ಈ ವಾಹನವನ್ನು ಹೇಗೆ ಮಾರಾಟ ಮಾಡಿದಿರಿ ಎಂದು ಪ್ರಶ್ನಿಸಿತು.
ಅಂತಿಮವಾಗಿ ಅರ್ಜಿಯಲ್ಲಿ ಪ್ರತಿವಾದಿಗಳಾದ ವೈಯಾಲಿಕಾವಲ್ ಠಾಣಾ ಪೊಲೀಸರು ಮತ್ತು ದೂರುದಾರಾದ ಕೆ.ಬಿ.ವೆಂಕಟೇಶ್ ಕುಮಾರ್ ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರರಿಂದ 2025ರಲ್ಲಿ ವಾಹನ ಖರೀದಿಸಿದ್ದ ದೂರುದಾರ ವೆಂಕಟೇಶ್
ಅರ್ಜಿದಾರರಿಂದ 2025ರಲ್ಲಿ ವಾಹನ ಖರೀದಿಸಿದ್ದ ದೂರುದಾರ ವೆಂಕಟೇಶ್ ಕುಮಾರ್, 2025ರ ಅ.18ರಂದು 1ನೇ ಎಸಿಜೆಎಂ ಕೋರ್ಟ್ ಖಾಸಗಿ ದೂರು ದಾಖಲಿಸಿದ್ದರು. ಅರ್ಜಿದಾರರು 10 ದಿನಗಳ ಹಳೆಯ ವಾಹನವೆಂದು ತಿಳಿಸಿ ನನಗೆ 82 ದಿನಗಳ ಹಳೆಯ ವಾಹನವನ್ನು ಮಾರಾಟ ಮಾಡಿದ್ದಾರೆ. ಆ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣವನ್ನು ತನಿಖೆ ನಡೆಸುವಂತೆ 2026ರ ಜ.8ರಂದು ವೈಯಾಲಿಕಾವಲ್ ಠಾಣಾ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿತ್ತು.
ದೂರಿನೊಂದಿಗೆ ಲಗತ್ತಿಸಿದ ಪ್ರಮಾಣ ಪತ್ರ ಹಾಗೂ ಇತ್ಯಾದಿ ದಾಖಲೆಗಳನ್ನು ಪರಿಶೀಲಿಸಿದ್ದು ತನಿಖೆಗೆ ಇದು ಅರ್ಹ ದೂರವಾಗಿದೆ. ಅದರಂತೆ ವೈಯಾಲಿಕಾವಲ್ ಠಾಣಾ ಪೊಲೀಸರು ದೂರಿನ ಕುರಿತು ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಎಸಿಜೆಎಂ ನ್ಯಾಯಾಲಯ ನಿರ್ದೇಶನ ನೀಡಿತ್ತು. ಇದರಿಂದ ತಮ್ಮ ವಿರುದ್ಧದ ದೂರಿನ ಸಂಬಂಧ ಎಸಿಜೆಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
