ಮಂಡ್ಯ ಮಂಜುನಾಥ
ಮಂಡ್ಯ : 2025- 26 ನೇ ಸಾಲಿನಲ್ಲಿ ಒಂದೇ ತಿಂಗಳು ಜಿಲ್ಲೆಯಲ್ಲಿ 28 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿರುವುದು ಅಚ್ಚರಿ ಮತ್ತು ಆತಂಕದ ಸಂಗತಿಯಾಗಿದೆ.
ಕಳೆದ ವರ್ಷ 186 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ದಿನೇ ದಿನೇ ಹೆಚ್ಚುತ್ತಿರುವ ಬಾಲ್ಯ ವಿವಾಹಗಳನ್ನು ತಡೆಯುವುದು ಸಮಾಜಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ಬಾಲ್ಯ ವಿವಾಹಗಳನ್ನು ತಡೆಯುವುದಕ್ಕೆ ಎಷ್ಟೇ ಕಠಿಣ ಕಾನೂನುಗಳನ್ನು ರೂಪಿಸಿದ್ದರೂ ಅವು ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ಬಾಲ್ಯ ವಿವಾಹ ಹೆಚ್ಚಳಕ್ಕೆ ಕಾರಣವಾಗಿದೆ. ದಾಖಲಾಗುತ್ತಿರುವ ಪ್ರಕರಣಗಳೆಲ್ಲಾ ಕೇವಲ ಎಫ್ಐಆರ್ಗೆ ಮಾತ್ರ ಸೀಮಿತವಾಗುತ್ತಿವೆ.
25-26 ನೇ ಸಾಲಿನಲ್ಲಿ ಏಪ್ರಿಲ್ನಿಂದ ಮೇ 25 ರವರೆಗೆ ಜಿಲ್ಲೆಯಲ್ಲಿ 28 ಪ್ರಕರಣಗಳು ದಾಖಲಾಗಿವೆ. ಮಂಡ್ಯದಲ್ಲಿ ದಾಖಲಾದ 5 ಪ್ರಕರಣಗಳಲ್ಲಿ, 4 ಬಾಲ್ಯ ವಿವಾಹ ತಡೆದಿದ್ದರೆ, 1 ಮದುವೆ ನಡೆದಿದೆ. ಮದ್ದೂರು ತಾಲೂಕಿನಲ್ಲಿ 4 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ.
ಮಳವಳ್ಳಿ ತಾಲೂಕಿನಲ್ಲಿ 1 ಬಾಲ್ಯ ವಿವಾಹ ನಡೆದಿದ್ದು, ಮತ್ತೊಂದನ್ನು ತಡೆಯಲಾಗಿದೆ. ಶ್ರೀರಂಗಪಟ್ಟಣದಲ್ಲೂ 1 ಬಾಲ್ಯ ವಿವಾಹವನ್ನು ತಡೆದು ಇನ್ನೊಂದು ಬಾಲ್ಯವಿವಾಹಕ್ಕೆ ತಡೆಯೊಡ್ಡಲಾಗಿದೆ.
ಪಾಂಡವಪಪುರ ತಾಲೂಕಿನಲ್ಲಿ 6 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ೭ ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದೊಂದು ತಿಂಗಳಲ್ಲಿ 28 ಬಾಲ್ಯ ವಿವಾಹ ಪ್ರಕರಣಗಳಲ್ಲಿ ೨೫ ಬಾಲ್ಯವಿವಾಹಗಳನ್ನು ತಡೆದಿದ್ದು, 3 ಪ್ರಕರಣಗಳಿಗೆ ಎಫ್ಐಆರ್ ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಕಂಡುಬರುತ್ತಿರುವ ಬಾಲ್ಯ ವಿವಾಹ ಪ್ರಕರಣಗಳು ಇಷ್ಟೊಂದು ಸಂಖ್ಯೆಯಲ್ಲಿದ್ದರೆ ಇನ್ನು ಬೆಳಕಿಗೆ ಬಾರದ ರೀತಿಯಲ್ಲಿ ಇನ್ನೆಷ್ಟು ಪ್ರಕರಣಗಳು ನಡೆಯುತ್ತಿವೆ ಎಂಬುದು ಲೆಕ್ಕಕ್ಕೇ ಸಿಗದಂತಾಗಿದೆ.