ಕೆಆರ್‌ಎಸ್‌ನಲ್ಲಿ ಹಾಡಹಗಲೇ ಪುಡಿರೌಡಿಗಳಿಂದ ವ್ಯಕ್ತಿಯ ವ್ಯಕ್ತಿ ಬರ್ಬರ ಹತ್ಯೆ ..!

KannadaprabhaNewsNetwork | Updated : Dec 13 2024, 04:15 AM IST

ಹಾಡಹಗಲೇ ಪುಡಿ ರೌಡಿಗಳು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆಆರ್‌ಎಸ್‌ನಲ್ಲಿ ಗುರುವಾರ ಸಂಜೆ ನಡೆದಿದೆ. ಮೂಲತಃ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಬಸವರಾಜಪುರ ಗ್ರಾಮದ ರೇವಣ್ಣರ ಪುತ್ರ ಚೇತನ್ (40) ಕೊಲೆಯಾದ ವ್ಯಕ್ತಿ.  

 ಶ್ರೀರಂಪಟ್ಟಣ : ಹಾಡಹಗಲೇ ಪುಡಿ ರೌಡಿಗಳು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆಆರ್‌ಎಸ್‌ನಲ್ಲಿ ಗುರುವಾರ ಸಂಜೆ ನಡೆದಿದೆ.

ಮೂಲತಃ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಬಸವರಾಜಪುರ ಗ್ರಾಮದ ರೇವಣ್ಣರ ಪುತ್ರ ಚೇತನ್ (40) ಕೊಲೆಯಾದ ವ್ಯಕ್ತಿ. ಪೊಲೀಸ್ ಠಾಣೆ ಮುಂಭಾಗದ ಕೇವಲ 200 ರಿಂದ 300 ಮೀಟರ್ ಹಂತರದಲ್ಲೇ ಯುವಕ ಹತ್ಯೆ ನಡೆದಿರುವುದು ಸಾರ್ವಜನಿಕರಿಗೆ ಆತಂಕ ಮೂಡಿಸಿದೆ.

ಮೃತ ಚೇತನ್ ಸುಮಾರು 10 ವರ್ಷಗಳ ಹಿಂದೆ ಬಾರೆ ಆನಂದೂರು ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದು, ಈತನಿಗೆ 7 ರಿಂದ 8 ವರ್ಷದ ಮಗನಿದ್ದಾನೆ. ಈತ ಹಲವು ವರ್ಷಗಳಿಂದ ಕೆಆರ್‌ಎಸ್‌ನಲ್ಲಿ ಬೇಕರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಗುರುವಾರ ಸಂಜೆ ಬೈಕ್‌ನಲ್ಲಿ ಬಂದ ಮೂರ್‍ನಾಲ್ಕು ಮಂದಿ ಪುಡಿ ರೌಡಿಗಳ ತಂಡ ಮೊದಲಿಗೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರನ್ನು ಹೆದರಿಸಿ ಬೇಕರಿ ಮುಂಭಾಗದಲ್ಲಿದ್ದ ವಸ್ತುಗಳನ್ನು ಒಡೆದು ರಸ್ತೆಗೆ ಚೆಲ್ಲಿದ್ದಾರೆ. ಅಷ್ಟರಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ಚೇತನ್ ಬೇಕರಿ ಬಳಿ ಬರುತ್ತಿದ್ದಂತೆ ಏಕಾಏಕಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಜ್ಞೆತಪ್ಪಿದ್ದು ಚೇತನನ್ನು ಅಕ್ಕ-ಪಕ್ಕದ ಅಂಗಡಿಯವರು ಹಾಗೂ ಸ್ಥಳಿಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಬಗ್ಗೆ ಸ್ಥಳೀಯರ ಆಕ್ರೋಶ:

ಹಾಡಹಗಲೇ ಪೊಲೀಸ್ ಠಾಣಾ ಕೂಗಳತೆ ದೂರದಲ್ಲೇ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಿರುವುದು ಸಾಮಾನ್ಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಕೆಆರ್‌ಎಸ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೌಡಿ ಹಾಗೂ ಪುಡಿರೌಡಿಗಳು ಹೆಚ್ಚಾಗಿದ್ದಾರೆ. ಇದನ್ನು ತಡೆಯುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ರೌಡಿಶೀಟರ್‌ಗಳೊಂದಿಗೆ ಸಭೆ, ಸಮಾರಂಭಗಳಲ್ಲಿ ಭಾಗಿಯಾಗಿ ಫೋಟೋ ತೆಗೆಸಿಕೊಳ್ಳುತ್ತಿರುವುದು ರೌಡಿಗಳನ್ನು ಹತೋಟಿಗೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.