ಸೆಕ್ಯೂರಿಟಿ ಗಾರ್ಡ್‌ ಎದೆಗೆ ಚಾಕು ಇರಿದು ಕೊಂದ ವಿದ್ಯಾರ್ಥಿ!

KannadaprabhaNewsNetwork |  
Published : Jul 04, 2024, 01:13 AM ISTUpdated : Jul 04, 2024, 04:32 AM IST
ಕೊಲೆ  | Kannada Prabha

ಸಾರಾಂಶ

ಚಾಕುವಿನಿಂದ ವಿದ್ಯಾರ್ಥಿಯೊಬ್ಬ ಕಾಲೇಜಿನ ಸೆಕ್ಯೂರಿಟಿ ಗಾರ್ಡ್ ಎದೆಗೆ ಇರಿದು ಕೊಲೆ ಮಾಡಿರುವುದು.

 ಬೆಂಗಳೂರು :  ಮದ್ಯ ಸೇವಿಸಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ತಡೆದ ಕಾರಣಕ್ಕೆ ಕೋಪಗೊಂಡು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್‌ ಎದೆಗೆ ಚಾಕುವಿನಿಂದ ಇರಿದು ವಿದ್ಯಾರ್ಥಿಯೊಬ್ಬ ಹತ್ಯೆಗೈದಿರುವ ದಾರುಣ ಘಟನೆ ಹೆಬ್ಬಾಳ ಸಮೀಪ ಖಾಸಗಿ ಕಾಲೇಜಿನ ‍ಆ‍ವರಣದಲ್ಲಿ ಬುಧವಾರ ನಡೆದಿದೆ.

ಯಲಹಂಕ ನಿವಾಸಿ ಜೈ ಕಿಶೋರ್ ರೈ (45) ಮೃತ ದುರ್ದೈವಿ. ಹತ್ಯೆ ಸಂಬಂಧ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಅಸ್ಸಾಂ ಮೂಲದ ಭಾರ್ಗವ್ ಬರ್ಬನ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರ್ಗವ್ ಬಂದಾಗ ಈ ಕೃತ್ಯ ನಡೆದಿದೆ.

ಹೆಬ್ಬಾಳದ ಕೆಂಪಾಪುರ ಸಮೀಪದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಭಾರ್ಗವ್‌, ಕಾಲೇಜಿನ ಸಮೀಪದಲ್ಲಿ ಪಿಜಿಯಲ್ಲಿ ನೆಲೆಸಿದ್ದ. ಕಳೆದ ಏಳೆಂಟು ವರ್ಷಗಳಿಂದ ಆ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಿಶೋರ್‌ ಕುಟುಂಬದ ಜತೆ ಯಲಹಂಕ ಸಮೀಪ ವಾಸವಾಗಿದ್ದರು. ಕಾಲೇಜಿನಲ್ಲಿ ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಮಾರಂಭದ ಜೋಶ್‌ನಲ್ಲಿ ಮದ್ಯ ಸೇವಿಸಿ ಕಾಲೇಜಿಗೆ ಭಾರ್ಗವ್ ಬಂದಿದ್ದಾನೆ. ಆಗ ಕಾಲೇಜಿನ ಗೇಟ್‌ನಲ್ಲೇ ಆತನನ್ನು ಸೆಕ್ಯೂರಿಟಿ ಗಾರ್ಡ್ ಕಿಶೋರ್ ತಡೆದು ಮದ್ಯ ಸೇವಿಸಿ ಕಾಲೇಜಿನೊಳಗೆ ಹೋಗಲು ಅ‍ವಕಾಶ ಕೊಡುವುದಿಲ್ಲವೆಂದು ಹೇಳಿದ್ದಾರೆ. ಈ ಹಂತದಲ್ಲಿ ಇಬ್ಬರ ನಡುವೆ ಮಾತಿನ ಚಕಿಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿದೆ. ಆಗ ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಈ ಗಲಾಟೆ ಬಳಿಕ ಕೋಪದಲ್ಲಿ ಅಲ್ಲಿಂದ ತೆರಳಿದ ಭಾರ್ಗವ್‌, ಕೆಲ ಹೊತ್ತಿನ ನಂತರ ಅಂಗಡಿಯಲ್ಲಿ ಚಾಕು ಖರೀದಿಸಿ ಮತ್ತೆ ಕಾಲೇಜಿಗೆ ಬಂದು ಗೇಟ್ ಬಳಿ ನಿಂತಿದ್ದ ಸೆಕ್ಯೂರಿಟಿ ಗಾರ್ಡ್‌ ಕಿಶೋರ್ಗೆ ಏಕಾಏಕಿ ಎದೆಗೆ ಎರಡ್ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ. ಈ ಅನಿರೀಕ್ಷಿತ ದಾಳಿಯಿಂದ ಆತಂಕಗೊಂಡ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲೇ ಇದ್ದ ಮತ್ತೊಬ್ಬ ಸೆಕ್ಯೂರಿಟಿ ಗಾರ್ಡ್ ಕೂಡ ರಕ್ಷಣೆಗೆ ಧಾವಿಸುವ ವೇಳೆಗೆ ಕಿಶೋರ್ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ಜಿದ್ದಿನಿಂದ ಸೆಕ್ಯೂರಿಟಿ ಗಾರ್ಡ್ ಹತ್ಯೆ?

ಈ ಹಿಂದೆ ಕೂಡ ಕೆಲ ಕಾರಣಗಳಿಗೆ ಸೆಕ್ಯೂರಿಟಿ ಗಾರ್ಡ್ ಕಿಶೋರ್ ಹಾಗೂ ವಿದ್ಯಾರ್ಥಿ ಭಾರ್ಗವ್ ಮಧ್ಯೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನನ್ನು ಕಾಲೇಜಿನ ಗೇಟ್‌ನಲ್ಲಿ ತಡೆದು ಸಹಪಾಠಿಗಳ ಮುಂದೆ ಅವಮಾನ ಮಾಡಿದ ಎಂದು ಕೋಪಗೊಂಡು ಸೆಕ್ಯೂರಿಟಿ ಗಾರ್ಡ್‌ನನ್ನು ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ವಿದ್ಯಾರ್ಥಿ ಭಾರ್ಗವ್ ಹೇಳಿದ್ದಾನೆ ಎನ್ನಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ