ಕನ್ನಡಪ್ರಭ ವಾರ್ತೆ ಬೆಂಗಳೂರು
ರೈಲುಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಮಹಿಳೆಯರನ್ನು ಮಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಗಾಯಿತ್ರಿ ಅಲಿಯಾಸ್ ರೂಪಾ ಹಾಗೂ ಸಂಧ್ಯಾ ಅಲಿಯಾಸ್ ಶರಣ್ಯಾ ಬಂಧಿತರಾಗಿದ್ದು, ಆರೋಪಿಗಳಿಂದ ₹38 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಇತ್ತೀಚಿಗೆ ಮುರುಡೇಶ್ವರ-ಬೆಂಗಳೂರು ಎಕ್ಸ್ಪ್ರೆಸ್ನ ಎಸಿ ಬೋಗಿಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಕಳವಾಗಿದ್ದವು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಎಸಿ ಬೋಗಿಗಳೇ ಟಾರ್ಗೆಟ್: ಗಾಯಿತ್ರಿ ಹಾಗೂ ಸಂಧ್ಯಾ ವೃತ್ತಿಪರ ಕ್ರಿಮಿನಲ್ಗಳಾಗಿದ್ದು, ಇವರ ವಿರುದ್ಧ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಬಸ್ ಹಾಗೂ ರೈಲುಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಣಿಸುತ್ತಿದ್ದ ಈ ಆರೋಪಿಗಳು, ಆ ವೇಳೆ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದರು.
ಈ ಕೃತ್ಯದ ವೇಳೆ ಮಗು ಜತೆ ಪ್ರಯಾಣಿಸುತ್ತಿದ್ದರಿಂದ ಅವರ ಮೇಲೆ ಸಹಪ್ರಯಾಣಿಕರು ಅನುಮಾನ ಪಡುತ್ತಿರಲಿಲ್ಲ. ಅದರಲ್ಲೂ ರೈಲುಗಳಲ್ಲಿ ಎಸಿ ಹಾಗೂ ಮಹಿಳೆಯರ ಬೋಗಿಗಳನ್ನು ಗುರಿಯಾಗಿಸಿಕೊಂಡು ಆರೋಪಿಗಳು ಈ ಕೃತ್ಯ ಎಸಗುತ್ತಿದ್ದರು.
ಇತ್ತೀಚೆಗೆ ಮುರುಡೇಶ್ವರ-ಬೆಂಗಳೂರು ಎಕ್ಸ್ಪ್ರೆಸ್ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನಾಭರಣವನ್ನು ಗಾಯಿತ್ರಿ ಹಾಗೂ ಸಂಧ್ಯಾ ದೋಚಿದ್ದರು.
ಈ ಕೃತ್ಯದ ತನಿಖೆ ನಡೆಸಿದ ಮಂಗಳೂರು ರೈಲ್ವೆ ಠಾಣೆ ಇನ್ಸ್ಪೆಕ್ಟರ್ ಸಂಜೀವಗೌಡ ಮತ್ತು ಮೈಸೂರು ರೈಲ್ವೆ ಠಾಣೆಯ ಇನ್ಸ್ಪೆಕ್ಟರ್ ಕೆ.ಎಂ.ಮಂಜು ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಡಾ। ಎಸ್.ಕೆ.ಸೌಮ್ಯಲತಾ ಹೇಳಿದ್ದಾರೆ.