ಮರದ ಕೊಂಬೆ ಬಿದ್ದು ಮೃತಪಟ್ಟ ಅಕ್ಷಯ್‌ ಕುಟುಂಬಕ್ಕೆ ಬಿಬಿಎಂಪಿ ₹5 ಲಕ್ಷ ವಿತರಣೆ

KannadaprabhaNewsNetwork | Updated : Jun 21 2025, 07:53 AM IST

ಮರದ ಕೊಂಬೆ ಬಿದ್ದು ಮೃತಪಟ್ಟ ಅಕ್ಷಯ್‌ ಕುಟುಂಬಕ್ಕೆ ಬಿಬಿಎಂಪಿಯಿಂದ ಐದು ಲಕ್ಷ ರು. ಮೊತ್ತದ ಪರಿಹಾರದ ಚಕ್‌ ಅನ್ನು ಶುಕ್ರವಾರ ವಿತರಣೆ ಮಾಡಲಾಗಿದ್ದು, ಹೆಚ್ಚಿನ ಮೊತ್ತದ ಪರಿಹಾರ ನೀಡುವಂತೆ ಅಕ್ಷಯ್‌ ಕುಟಂಬ ಸದಸ್ಯರ ಮನವಿ ಮಾಡಿದ್ದಾರೆ.

  ಬೆಂಗಳೂರು :  ಮರದ ಕೊಂಬೆ ಬಿದ್ದು ಮೃತಪಟ್ಟ ಅಕ್ಷಯ್‌ ಕುಟುಂಬಕ್ಕೆ ಬಿಬಿಎಂಪಿಯಿಂದ ಐದು ಲಕ್ಷ ರು. ಮೊತ್ತದ ಪರಿಹಾರದ ಚಕ್‌ ಅನ್ನು ಶುಕ್ರವಾರ ವಿತರಣೆ ಮಾಡಲಾಗಿದ್ದು, ಹೆಚ್ಚಿನ ಮೊತ್ತದ ಪರಿಹಾರ ನೀಡುವಂತೆ ಅಕ್ಷಯ್‌ ಕುಟಂಬ ಸದಸ್ಯರ ಮನವಿ ಮಾಡಿದ್ದಾರೆ.

ಕಳೆದ ಭಾನುವಾರ ಶ್ರೀನಗರದ ನಿವಾಸಿ ಅಕ್ಷಯ್‌ (29) ಬನಶಂಕರಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಏಕಾಏಕಿ ಮರದ ಕೊಂಬೆ ಬಿದ್ದು ತಲೆಗೆ ತೀವ್ರವಾಗಿ ಗಾಯಗೊಂಡಿದ್ದರು. ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಿಬಿಎಂಪಿಯಿಂದ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸುವುದರೊಂದಿಗೆ ₹5 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಅದರಂತೆ ಶುಕ್ರವಾರ ದಕ್ಷಿಣ ವಲಯ ಆಯುಕ್ತ ದಿಗ್ವಿಜಯ ಬೋಡ್ಕೆ ಅವರು ಅಕ್ಷಯ್‌ ಕುಟುಂಬಸ್ಥರಿಗೆ ₹5 ಲಕ್ಷ ಮೊತ್ತದ ಚೆಕ್‌ ವಿತರಣೆ ಮಾಡಿದರು.

ಈ ವೇಳೆ ಕುಟುಂಬಸ್ಥರು ಹೆಚ್ಚಿನ ಪರಿಹಾರ ನೀಡುವಂತೆ ವಲಯ ಆಯುಕ್ತರಿಗೆ ಮನವಿ ಸಲ್ಲಿಸಿದರು. ಹೆಚ್ಚಿನ ಮೊತ್ತದ ಪರಿಹಾರ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕೆ ಮನವಿಯನ್ನು ತಿರಸ್ಕಾರ ಮಾಡಿದ್ದಾರೆ. ಇದಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಹೆಚ್ಚಿನ ಮೊತ್ತ ಹಾಗೂ ಕೆಲಸ ಬೇಕೆಂದರೆ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡುವಂತೆ ಬಿಬಿಎಂಪಿಯ ಅಧಿಕಾರಿಗಳು ಹೇಳುತ್ತಾರೆ. ಕಾಲ್ತುಳಿತಕ್ಕೆ ಒಳಗಾಗಿ ಸಾವಾದರೆ ಇವರೇ ಮನೆಗೆ ಹೋಗಿ ₹25 ಲಕ್ಷ ಕೊಟ್ಟು ಬಂದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರ ಬಿದ್ದು ರಸ್ತೆಯಲ್ಲಿ ಸಾವಾಗಿದೆ. ಇದು ದೊಡ್ಡ ಅನ್ಯಾಯ ಎಂದು ಅಕ್ಷಯ್ ಸಹೋದರ ಬೆನಕರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಲಸ ನೀಡಲು ಆಗದು:

ಈ ಕುರಿತು ಮಾಹಿತಿ ನೀಡಿದ ದಕ್ಷಿಣ ವಲಯ ಆಯುಕ್ತ ದಿಗ್ವಿಜಯ್ ಬೋಡ್ಕೆ, ಅಕ್ಷಯ್ ಕುಟುಂಬಸ್ಥರಿಗೆ ₹5 ಲಕ್ಷ ಪರಿಹಾರ ನೀಡಲಾಗಿದ್ದು, ಈಗಾಗಲೇ ₹4 ಲಕ್ಷ ಆಸ್ಪತ್ರೆ ಬಿಲ್ ಪಾವತಿ ಮಾಡಲಾಗಿದೆ. ಅಕ್ಷಯ್‌ ಅವಲಂಬಿತರಿಗೆ ಸರ್ಕಾರಿ ಕೆಲಸ ನೀಡಬೇಕೆಂದು ಮನವಿ ಮಾಡಿದ್ದಾರೆ. ನಮಗೆ ಇರುವ ಅಧಿಕಾರದಲ್ಲಿ ಹೆಚ್ಚಿನ ಪರಿಹಾರ ನೀಡಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ ಎಂದರು.

Read more Articles on