ಬೆಂಗಳೂರು : ಬೈಕ್ ಮತ್ತು ಕಾರುಗಳ ಗ್ಯಾರೇಜ್ ಹಾಗೂ ಬಟ್ಟೆ ಅಂಗಡಿಗೆ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಸುಮಾರು 2 ಕೋಟಿ ಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿಂಗಸಂದ್ರ ಸಮೀಪದ ಮಣಿಪಾಲ್ ಕಂಟ್ರಿ ರಸ್ತೆಯಲ್ಲಿದ್ದ ಸೆಂಟ್ರಿಂಗ್ ಮರಗಳ ಮಾರಾಟದ ಮಳಿಗೆಯಲ್ಲಿ ಮಂಗಳವಾರ ರಾತ್ರಿ 12.30ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಪಕ್ಕದ ಬೈಕ್ ಹಾಗೂ ಕಾರು ಗ್ಯಾರೇಜ್ಗೆ ಸಹ ಅಗ್ನಿ ಜ್ವಾಲೆ ಹಬ್ಬಿದೆ. ಅಲ್ಲಿಂದ ಕ್ರೀಡಾ ಗಾರ್ಮೆಂಟ್ಸ್ ಮಳಿಗೆ ಕಿಡಿ ತಾಕಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ ಸತತ ಆರು ತಾಸುಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿದ್ದಾರೆ ಎಂದು ಅಧಿಕಾರಿಗಳು ಹೇಲಿದ್ದಾರೆ.
ಈ ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಮೊದಲು ಟಿಂಬರ್ ಯಾರ್ಡ್ನಲ್ಲಿ ಒಣಗಿದ ಮರಕ್ಕೆ ಬೆಂಕಿ ತಾಕಿದೆ. ಆಗ ದಟ್ಟಾ ಹೊಗೆ ಆವರಿಸಿದ್ದನ್ನು ನೋಡಿದ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ವಿಷಯ ಗೊತ್ತಾದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಟಿಂಬರ್ ಯಾರ್ಡ್ನಿಂದ ಸಮೀಪದಲ್ಲೇ ಇದ್ದ ಗ್ಯಾರೇಜ್ಗೆ ಅಗ್ನಿ ಜ್ವಾಲೆ ಹರಿಡಿದೆ. ಕೂಡಲೇ ಗ್ಯಾರೇಜ್ನಲ್ಲಿ ಸಹ ಬೆಂಕಿ ಆರಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಆದರೆ ಆ ವೇಳೆ ಗ್ಯಾರೇಟ್ನಲ್ಲಿ ನಿಲ್ಲಿಸಲಾಗಿದ್ದ ಬೈಕ್ಗಳ ಟೈರ್ ಸ್ಫೋಟಗೊಂಡ ಪರಿಣಾಮ ಅಲ್ಲಿಂದ 50 ಮೀ. ದೂರವಿದ್ದ ಗಾರ್ಮೆಂಟ್ಸ್ಗೆ ಬೆಂಕಿ ಕಿಡಿ ತಾಕಿದೆ. ಇದರಿಂದ ಬೆಂಕಿ ತೀವ್ರತೆ ಹೆಚ್ಚಾಗಿ ಪರಿಸ್ಥಿತಿ ಗಂಭೀರವಾಯಿತು. ಕೊನೆಗೆ ಹೆಚ್ಚುವರಿ ಅಗ್ನಿಶಾಮಕ ದಳ ವಾಹನಗಳನ್ನು ಕರೆಸಿ ಬೆಂಕಿ ನಂದಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.