318 ಪಾತಕಿಗಳಿಗೆ ಗುಂಡಿಕ್ಕಿದ್ದ ಸೂಪರ್‌ಕಾಪ್‌ಗೆ ಜೀವಾವಧಿ!

KannadaprabhaNewsNetwork | Updated : Mar 20 2024, 12:18 PM IST

ಸಾರಾಂಶ

ಭೂಗತ ಪಾತಕಿ ಛೋಟಾ ರಾಜನ್‌ನ ಆಪ್ತ ರಾಮ್‌ನಾರಾಯಣ್‌ ಗುಪ್ತಾನನ್ನು ನಕಲಿ ಎನ್ಕೌಂಟರ್‌ ನಡೆಸಿ ಹತ್ಯೆಗೈದ ಪ್ರಕರಣದಲ್ಲಿ ಮುಂಬೈನ ಎನ್ಕೌಂಟರ್‌ ಸ್ಪೆಷಲಿಸ್ಟ್‌, ನಿವೃತ್ತ ಪೊಲೀಸ್‌ ಅಧಿಕಾರಿ ಪ್ರದೀಪ್‌ ಶರ್ಮಾಗೆ ಬಾಂಬೆ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

ಮುಂಬೈ: ಭೂಗತ ಪಾತಕಿ ಛೋಟಾ ರಾಜನ್‌ನ ಆಪ್ತ ರಾಮ್‌ನಾರಾಯಣ್‌ ಗುಪ್ತಾನನ್ನು ನಕಲಿ ಎನ್ಕೌಂಟರ್‌ ನಡೆಸಿ ಹತ್ಯೆಗೈದ ಪ್ರಕರಣದಲ್ಲಿ ಮುಂಬೈನ ಎನ್ಕೌಂಟರ್‌ ಸ್ಪೆಷಲಿಸ್ಟ್‌, ನಿವೃತ್ತ ಪೊಲೀಸ್‌ ಅಧಿಕಾರಿ ಪ್ರದೀಪ್‌ ಶರ್ಮಾಗೆ ಬಾಂಬೆ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದಲ್ಲಿ ಶರ್ಮಾಗೆ ಕ್ಲೀನ್‌ಚಿಟ್‌ ನೀಡಿದ್ದ ಅಧೀನ ನ್ಯಾಯಾಲಯದ ಆದೇಶ ವಜಾಗೊಳಿಸಿದ ಹೈಕೋರ್ಟ್‌, ಮೂರು ವಾರಗಳಲ್ಲಿ ಶರಣಾಗುವಂತೆ ದೋಷಿಗೆ ಸೂಚಿಸಿದೆ. 

ಶರ್ಮಾ ಜೊತೆಗೆ ಇದೇ ಪ್ರಕರಣದಲ್ಲಿ ಪೊಲೀಸರು ಸೇರಿದಂತೆ ಇತರೆ 23 ಜನರಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನೂ ಹೈಕೋರ್ಟ್‌ ಎತ್ತಿಹಿಡಿದಿದೆ. 

ಪ್ರಕರಣದಲ್ಲಿ 13 ಪೊಲೀಸರು ಸೇರಿದಂತೆ 23 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಆದರೆ ವಿಚಾರಣಾ ನ್ಯಾಯಾಲಯ ಸಾಕ್ಷ್ಯಗಳ ಕೊರತೆ ಆಧಾರ ನೀಡಿ ಶರ್ಮಾರಿಗೆ ಕ್ಲೀನ್‌ಚಿಟ್‌ ನೀಡಿದ್ದರೆ ಇತರೆ 23 ಜನರಿಗೆ ಜೀವಾವಧಿ ಶಿಕ್ಷೆ ನೀಡಿತ್ತು.

ಏನಿದು ಪ್ರಕರಣ?
2006ರ ನ.11ರಂದು ಪ್ರದೀಪ್‌ ಶರ್ಮಾ ಮತ್ತು ಇತರೆ ಪೊಲೀಸರು ತಂಡ ಛೋಟಾ ರಾಜನ್‌ನ ಆಪ್ತ ಎಂಬ ಶಂಕೆ ಮೇರೆಗೆ ಗುಪ್ತಾ ಅಲಿಯಾಸ್‌ ಲಖ್ಖನ್‌ ಭಯ್ಯಾನನ್ನು ವಿಚಾರಣೆ ಕರೆದೊಯ್ದಿತ್ತು. ಬಳಿಕ ನಕಲಿ ಎನ್ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು.

ತಮ್ಮ 25 ವರ್ಷಗಳ ಪೊಲೀಸ್‌ ಅಧಿಕಾರವಧಿಯಲ್ಲಿ ಪ್ರದೀಪ್‌ ಶರ್ಮಾ, ನೇರವಾಗಿ 110ಕ್ಕೂ ಹೆಚ್ಚು ಪಾತಕಿಗಳನ್ನು ಎನ್ಕೌಂಟರ್‌ ಮೂಲಕ ಬಲಿ ಪಡೆದಿದ್ದರೆ, 300ಕ್ಕೂ ಹೆಚ್ಚು ಎನ್ಕೌಂಟರ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು.

Share this article