ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಉದ್ಯೋಗ ಆಕಾಂಕ್ಷಿಗಳಿಂದ ಲಕ್ಷಾಂತರ ರು. ಪಡೆದು ವಂಚಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ಸಿಸಿಬಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಸಾದ್‌ ಎಂಬುವರು ನೀಡಿದ ದೂರಿನನ್ವಯ ಮಾಗಡಿ ತಾಲೂಕಿನ ಚಿಕ್ಕತೊರೆಪಾಳ್ಯದ ರುದ್ರೇಶ್‌ ಎಸ್‌. ನಾಯಕ್‌ ಮತ್ತು ಬೆಂಗಳೂರು ನಿವಾಸಿ ಶಶಿಭೂಷಣ್‌ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ವಿವರ: ಪ್ರಸಾದ್‌ ಅವರು ನೀಡಿರುವ ದೂರಿನಲ್ಲಿ 2022-23 ನೇ ಸಾಲಿನಲ್ಲಿ ತಾನು ಕಾನೂನು ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾಗ ರುದ್ರೇಶ್ ಎಸ್. ನಾಯಕ್ ಎಂಬ ಸಹಪಾಠಿಯ ಪರಿಚಯವಾಗಿ ಸ್ನೇಹವಾಗಿತ್ತು. ಆತ ತಾನು ಕೆ.ಎಸ್.ಆರ್.ಟಿ.ಸಿಯ ಸೆಲೆಕ್ಷನ್ ವಿಭಾಗದಲ್ಲಿ ಉನ್ನತ ಅಧಿಕಾರಿಯಾಗಿದ್ದು, ಕೆಎಸ್‌ಆರ್ ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ ತನ್ನ ಹೆಂಡತಿ ಮಕ್ಕಳ ಮೇಲೆ ಆಣೆ ಮಾಡಿ ನಮ್ಮನ್ನು ನಂಬಿಸಿದ್ದನು. ನಂತರ ರುದ್ರೇಶ್ ಮೊದಲು 26 ಸಾವಿರ ರು. ಕೊಡಿ ನಿಮಗೆ ಕೆಲಸ ಕೊಡಿಸುತ್ತೇನೆ ಎಂದು ತಿಳಿಸಿದ್ದ. ಆತನ ಮಾತು ನಂಬಿ ತಾನು ಸೇರಿದಂತೆ ಹಲವು ಉದ್ಯೋಗ ಆಕಾಂಕ್ಷಿಗಳ ಪರವಾಗಿ ತಲಾ 26 ಸಾವಿರ ರು. ಹಣವನ್ನು ತನ್ನ ಮೂಲಕ ಪಡೆದುಕೊಂಡಿದ್ದನು ಎಂದು ವಿವರಿಸಿದ್ದಾರೆ.

ನಂಬಿಕೆ ಇಲ್ಲದಿದ್ದರೆ ಬ್ಯಾಂಕ್‌ಗೆ ಹಾಕಿ:


ನಂತರ ಆತ ಕೆಲಸ ಮಾಡುವ ಕಚೇರಿಗೆ ಹೋಗಿ ನೋಡಿದಾಗ ಆತ ಕೈಗೆ ಸಿಗದೇ ನಿಮ್ಮ ಸೆಲೆಕ್ಷನ್ ಆದ ನಂತರ ನಾನೇ ಕರೆಯುತ್ತೇನೆ. ಆಗ ಬನ್ನಿ ಎಂದಿದ್ದ. ಕೊನೆಗೆ ನನ್ನ ಮೇಲೆ ನಂಬಿಕೆ ಇಲ್ಲ ಎಂದರೆ ಹಣವನ್ನು ಬ್ಯಾಂಕ್ ಮೂಲಕ ಕೊಡಿ ಎಂದು ಹೇಳಿದ್ದ. ಹೀಗಾಗಿ 12 ಲಕ್ಷ ರು.ಗಳನ್ನು ಆತನ ರಾಮನಗರದ ಕರ್ಣಾಟಕ ಬ್ಯಾಂಕ್‌ ಬ್ರಾಂಚ್ ಖಾತೆಗೆ ಕಳುಹಿಸಿದ್ದೆ. ಸ್ವಲ್ಪ ದಿನದ ನಂತರ ಆತ ನಮಗೆ ಕರೆ ಮಾಡಿ ನಿಮ್ಮ ಸೆಲೆಕ್ಷನ್ ಆಗಿದೆ. ಸಮಿತಿಯಿಂದ ಪತ್ರ ಬಂದಿದೆ ಅದಕ್ಕೆ ಸಹಿ ಹಾಕಬೇಕು ಎಂದು ಹೇಳಿ ನಮ್ಮನ್ನು ಬೆಂಗಳೂರಿನ ಹೋಟೆಲ್‌ವೊಂದಕ್ಕೆ ಕರೆಸಿಕೊಂಡಿದ್ದ. ಅಲ್ಲಿ ಕೆಎಸ್‌ಆರ್‌ಟಿಸಿಯ ಲೆಟರ್‌ ಹೆಡ್‌ನಲ್ಲಿ ಕೆಎಸ್‌ಆರ್‌ಟಿಸಿಯ ಮೊಹರು ಇದ್ದ ಪತ್ರಕ್ಕೆ ನಮ್ಮ ಸಹಿಯನ್ನು ಪಡೆದುಕೊಂಡಿದ್ದ. ಇದರಿಂದ ನಮಗೆ ಆತನ ಮೇಲೆ ನಂಬಿಕೆ ಬಂದಿತ್ತು.

ಕರಾರು ಪತ್ರಕ್ಕೆ ಸಹಿ ಮಾಡಿಸಿಕೊಂಡಿದ್ದ!

ನಂತರ ಅವರು ನೀವು ಮಂಗಳೂರಿನ ಡಿಪೋದಲ್ಲಿ ಕೆಲಸ ಮಾಡಲು 1 ಲಕ್ಷವನ್ನು ಮತ್ತು ಉನ್ನತ ಹುದ್ದೆ ಬೇಕಾದರೆ 2 ಲಕ್ಷವನ್ನು, ಉಳಿದವರು ತಲಾ 1 ಲಕ್ಷ ರು. ಅನ್ನು ನೀಡಬೇಕು ಎಂದು ತಿಳಿಸಿದ್ದ. ನಾನು 2 ಲಕ್ಷ ರು. ಉಳಿದವರು 1 ಲಕ್ಷ ನಗದನ್ನು ನೀಡಿದ್ದರು. ಆ ಸಮಯದಲ್ಲಿ ಆತ ನಮಗೆ ನಂಬಿಕೆ ಬರುವಂತೆ ಆತನ ಕುಟುಂಬಸ್ಥರ ಆಸ್ತಿ ಮಂಜೂರಾತಿ ಪತ್ರದ ಮೂಲ ಪ್ರತಿಯನ್ನು ನಮಗೆ ನೀಡಿದ್ದನು. ಅಷ್ಟಾದರೂ ನಂಬಿಕೆ ಬಾರದಿದ್ದಾಗ ನೀಡಿರುವ ಹಣಕ್ಕೆ ಸಾಕ್ಷಿ ಬೇಕು ಎಂದಿದ್ದಕ್ಕೆ ಆತ ಒಂದು ಕರಾರು ಪತ್ರಕ್ಕೆ ಸಹಿ ಮಾಡಿ ಅದರಲ್ಲಿ 20 ಲಕ್ಷವನ್ನು ಅಗತ್ಯದ ಉದ್ದೇಶಕ್ಕಾಗಿ ತೆಗೆದುಕೊಂಡಿದ್ದು ಯಾವುದೇ ತಂಟೆ ತಕರಾರು ಇಲ್ಲದೇ ವಾಪಸು ನೀಡುವುದಾಗಿ ಬರೆದು ಸಹಿ ಮಾಡಿ ಕೊಟ್ಟಿದ್ದ.

ಫೋನ್‌ ಸ್ವಿಚ್ ಆಫ್!

ಇದಾದ ನಂತರ ರುದ್ರೇಶ್‌ ತನ್ನ ಫೋನ್‌ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ನಾವು ಮೊದಲು 26 ಸಾವಿರ ರು. ವರ್ಗಾವಣೆ ಮಾಡಿದ್ದ ಆತನ ಸ್ನೇಹಿತ ಶಶಿಭೂಷಣ್‌ನನ್ನು ವಿಚಾರಿಸಿದಾಗ ಆತನ ತಮ್ಮ ದಿನೇಶ್‌ನಾಯಕ್ ಪೊಲೀಸ್ ಇಲಾಖೆಯಲ್ಲಿ ಇದ್ದಾರೆ. ಅವರನ್ನು ಕೇಳಿ ಎಂದು ಹೇಳಿದ್ದ. ನಂತರ ನಾವು ರುದ್ರೇಶ್ ಅವರ ಸ್ವಂತ ಊರಿಗೆ ಹೋಗಿ ವಿಚಾರ ಮಾಡಿದಾಗ ಆತ ಇದೇ ರೀತಿ ಹಲವರಿಗೆ ಮೋಸ ಮಾಡಿ ತಲೆಮರೆಸಿಕೊಂಡಿರುವ ಮಾಹಿತಿ ತಿಳಿದು ಬಂದಿತು.

ಕೆಲಸ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿರುವ ರುದ್ರೇಶ್ ನಾಯಕ್ ಮತ್ತು ಶಶಿಭೂಷಣ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ವಂಚನೆಗೊಳಗಾದ ಪ್ರಸಾದ್‌ ಮನವಿ ಮಾಡಿದ್ದಾರೆ.