ಬುಕ್‌ ಮಾಡಿದ್ದ ಆಟೋ ಕ್ಯಾನ್ಸಲ್‌ : ಕೋಪಗೊಂಡ ಚಾಲಕನೋರ್ವ ವಿದ್ಯಾರ್ಥಿನಿಗೆ ಹಲ್ಲೆ ಮಾಡಿ ಜೈಲು ಪಾಲು

KannadaprabhaNewsNetwork |  
Published : Sep 06, 2024, 01:47 AM ISTUpdated : Sep 06, 2024, 03:56 AM IST
Muthuraj | Kannada Prabha

ಸಾರಾಂಶ

ಬುಕ್‌ ಮಾಡಿದ್ದ ಆಟೋ ಕ್ಯಾನ್ಸಲ್‌ ಮಾಡಿದ್ದಕ್ಕೆ ಕೋಪಗೊಂಡ ಚಾಲಕನೋರ್ವ ವಿದ್ಯಾರ್ಥಿನಿಗೆ ಹಲ್ಲೆ ಮಾಡಿ ಜೈಲು ಸೇರಿದ್ದಾನೆ.

  ಬೆಂಗಳೂರು :  ಓಲಾ ಆಟೋ ಬುಕಿಂಗ್ ಕ್ಯಾನ್ಸಲ್‌ ಮಾಡಿದ್ದಕ್ಕೆ ಹೊರರಾಜ್ಯದ ವಿದ್ಯಾರ್ಥಿನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ ಆರೋಪದಡಿ ಆಟೋ ಚಾಲಕನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಕಲ್ಲಸಂದ್ರದ ಮುತ್ತುರಾಜ್‌ ಬಂಧಿತ ಆಟೋ ಚಾಲಕ. ಸೆ.2ರಂದು ರಾಜಾಜಿನಗರದ ಡಾ। ರಾಜ್ ಕುಮಾರ್‌ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ವಿದ್ಯಾರ್ಥಿನಿ ನೀತಿ ಶರ್ಮಾ ಎಂಬುವವರು ನೀಡಿದ ದೂರಿನ ಮೇರೆಗೆ ಆಟೋ ಚಾಲಕನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀತಿ ಶರ್ಮಾ ಮತ್ತು ಆಕೆಯ ಸ್ನೇಹಿತೆ ಪ್ರತ್ಯೇಕವಾಗಿ ಓಲಾ ಆ್ಯಪ್‌ನಲ್ಲಿ ಆಟೋರಿಕ್ಷಾ ಬುಕ್‌ ಮಾಡಿದ್ದರು. ನೀತಿ ಶರ್ಮಾ ಬುಕ್ ಮಾಡಿದ್ದ ಆಟೋ ನಿಗದಿತ ಸ್ಥಳಕ್ಕೆ ಮೊದಲು ಬಂದಿದೆ. ಈ ವೇಳೆ ಸ್ನೇಹಿತೆ ಬುಕ್‌ ಮಾಡಿದ್ದ ಆಟೋವನ್ನು ಕ್ಯಾನ್ಸಲ್‌ ಮಾಡಿದ್ದಾರೆ. ಬಳಿಕ ಇಬ್ಬರು ಒಂದೇ ಆಟೋ ರಿಕ್ಷಾ ಏರಿ ಹೊರಟ್ಟಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಬಂದಿದ್ದ ಆಟೋ ಚಾಲಕ ಮುತ್ತುರಾಜ್‌, ನೀತಿ ಹಾಗೂ ಆಕೆಯ ಸ್ನೇಹಿತೆ ಪ್ರಯಾಣಿಸುತ್ತಿದ್ದ ಆಟೋ ತಡೆದು ಏಕೆ ಬುಕಿಂಗ್‌ ಕ್ಯಾನ್ಸಲ್‌ ಮಾಡಿದ್ದು ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ನೀತಿ ಸ್ನೇಹಿತೆ ಬೇಗ ಕಾಲೇಜಿಗೆ ಹೋಗಬೇಕಿತ್ತು. ನಾನು ಬುಕ್ ಮಾಡಿದ್ದ ಆಟೋ ಬೇಗ ಬಂದಿದ್ದರಿಂದ ನಿಮ್ಮ ಆಟೋ ಕ್ಯಾನ್ಸಲ್‌ ಮಾಡಿ ತೆರಳುತ್ತಿದ್ದೇವೆ ಎಂದಿದ್ದಾರೆ.

ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ

ಇದರಿಂದ ಕೋಪಗೊಂಡ ಆಟೋ ಚಾಲಕ ಮುತ್ತುರಾಜ್‌, ನೀತಿಶರ್ಮಾ ಅವರನ್ನು ಅಚಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಲು ಮುಂದಾದಾಗ, ಆಕೆಯ ಕೈಗೆ ಹಲ್ಲೆ ಮಾಡಿ ಮೊಬೈಲ್‌ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಬಳಿಕ ನೀತಿಶರ್ಮಾ ಪ್ರಯಾಣಿಸುತ್ತಿದ್ದ ಆಟೋ ಚಾಲಕ ಮಧ್ಯ ಪ್ರವೇಶಿಸಿ, ಮುತ್ತುರಾಜ್‌ನನ್ನು ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿದ್ದಾರೆ.

ಈ ಘಟನೆ ಸಂಬಂಧ ನೀತಿಶರ್ಮಾ ತಮ್ಮ ಎಕ್ಸ್‌ ಖಾತೆಯಲ್ಲಿ ಆಟೋ ಚಾಲಕ ಮುತ್ತುರಾಜ್‌ ವರ್ತನೆ ವಿಡಿಯೋ ಹಂಚಿಕೊಂಡು ಘಟನೆ ಬಗ್ಗೆ ಬರೆದುಕೊಂಡಿದ್ದರು. ಓಲಾ ಕಂಪನಿ ಹಾಗೂ ನಗರ ಪೊಲೀಸರಿಗೂ ಟ್ಯಾಗ್‌ ಮಾಡಿದ್ದರು. ಘಟನೆ ನಡೆದ ಸ್ಥಳದ ಆಧಾರದ ಮೇಲೆ ಮಾಗಡಿ ರಸ್ತೆ ಠಾಣೆ ಪೊಲೀಸರು, ನೀತಿಶರ್ಮಾ ಅವರ ದೂರಿಗೆ ಸ್ಪಂದಿಸಿದ್ದಾರೆ. ನೀತಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿ, ಆಟೋ ಚಾಲಕ ಮುತ್ತುರಾಜ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ