ಕನ್ನಡ ಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೊಪ್ಪ ಹೋಬಳಿ ರಾಂಪುರ ಗ್ರಾಮದ ರೈತ ಚಂದ್ರಶೇಖರ್ ಅವರ ಸೇವಿಂಗ್ಸ್ ಖಾತೆಯಲ್ಲಿದ್ದ 1,60,79,890 ರು. ಗಳನ್ನು ಗ್ರಾಹಕರ ಗಮನಕ್ಕೆ ಬಾರದೇ ಯುಪಿಐ ಸಂಪರ್ಕ ಸಾಧಿಸಿ ವಂಚಕರು ಪಂಗನಾಮ ಹಾಕಿದ್ದಾರೆ. ಈ ಪ್ರಕರಣ ಕುರಿತು ಚಂದ್ರಶೇಖರ್ ಮಂಡ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಹಿಂದೆ ಚಂದ್ರಶೇಖರ್ ಮದ್ದೂರಿನ ಟಿಎಪಿಸಿಎಂಎಸ್ ಕಟ್ಟಡದಲ್ಲಿದ್ದ ಸಿಂಡಿಕೇಟ್ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದು ಹಣಕಾಸಿನ ವ್ಯವಹಾರ ಮಾಡುತ್ತಿದ್ದರು. ಆ ನಂತರ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ನಲ್ಲಿ ವಿಲೀನಗೊಂಡ ಬಳಿಕ ಖಾತೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಈ ಬ್ಯಾಂಕ್ನಲ್ಲಿ ವ್ಯವಹಾರ ನಡೆಸುತ್ತಿದ್ದರು.ಅನಾರೋಗ್ಯದ ಹಿನ್ನೆಲೆಯಲ್ಲಿ ಚಂದ್ರಶೇಖರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಆನ್ಲೈನ್ ವಂಚಕರು ಯುಪಿಐ ಕೋಡ್ ಬಳಸಿ ಕಳೆದ ಜುಲೈ 24ರಂದು ಅವರ ಖಾತೆಯಲ್ಲಿದ್ದ 1 ಕೋಟಿ 10 ಲಕ್ಷ, ಆ ನಂತರ ಜುಲೈ 27 ರಂದು 49, 99,299.99 ಲಕ್ಷ ಸೇರಿದಂತೆ 1.60 ಲಕ್ಷ ದ 798 ರು.ಗಳನ್ನು ಯುಪಿಐ ಕೋಡ್ ಬಳಸಿ ಆನ್ ಲೈನ್ ಮೂಲಕ ಹಂತ ಹಂತವಾಗಿ ಲಪಟಾಯಿಸಲಾಗಿದೆ ಎಂದು ರೈತ ಚಂದ್ರಶೇಖರ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ದಿನಸಿ ಅಂಗಡಿಗಳಲ್ಲಿ ಕಳ್ಳತನ
ಪಾಂಡವಪುರ: ಪಟ್ಟಣದ ಎರಡು ಅಂಗಡಿಯಲ್ಲಿ ಕಳ್ಳರು ನಗದು, ಆಹಾರ ಪದಾರ್ಥಗಳನ್ನು ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.ಪಟ್ಟಣದ ಹೆಗ್ಗಡಹಳ್ಳಿ ರಾಮಕೃಷ್ಣೇಗೌಡರಿಗೆ ಸೇರಿದ ಜನತಾಭಂಡಾರ ದಿನಸಿ ಅಂಗಡಿಯಲ್ಲಿ ಬೀಗ ಮುರಿದು ಒಳನುಗ್ಗಿರುವ ಕಳ್ಳರು 9 ಸಾವಿರ ನಗದು, ಸನ್ ಪ್ಯೂರ್ ಎಣ್ಣೆ 15 ಬಾಕ್ಸ್, 5 ಲೀಟರ್ 13 ಕ್ಯಾನ್, ರುಚಿಗೋಲ್ಡ್ 8 ಬಾಕ್ಸ್, ಬಾದಾಮಿ ಸೇರಿದಂತೆ ಇತರೆ ಪದಾರ್ಥಗಳನ್ನು ಕದ್ದಿದ್ದಾರೆ.
ನಂತರ ಸೋಮಶೇಖರ್ ಅವರಿಗೆ ಸೇರಿದ ರಾಜ ರಾಜೇಶ್ವರಿ ಎಂಟರ್ ಪ್ರೈಸಸ್ ದಿನಸಿ ಅಂಗಡಿಯಲ್ಲಿ ಸನ್ ಪ್ಯೂರ್ ಎಣ್ಣೆ ಬಾಕ್ಸ್ 15, ಎಣ್ಣೆ ಟಿನ್ 1, 5 ಲೀಟರ್ ಕ್ಯಾನ್ ಮೂರು, 4-5ಸಾವಿರ ನಗದು, ಮೊಬೈಲ್ ಚಾರ್ಜರ್ 2, ದಿನನಿತ್ಯ ಬಳಸುವ ಪದಾರ್ಥಗಳನ್ನು ಕಳವು ಮಾಡಿದ್ದಾರೆ. ಬೊಲೇರೋ ವಾಹನದಲ್ಲಿ ಬಂದಿದ್ದ ನಾಲ್ವರು ಕಳ್ಳರ ಚಲನವಲನಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 2022ರ ಸೆ.7ರಂದು ಇದೇ ಅಂಗಡಿಯಲ್ಲಿ ಕಳ್ಳತನ ನಡೆದಿದ್ದನ್ನು ಸ್ಮರಿಸಬಹುದು.ಬೆಳಗಿನ ಜಾವಾ 3 ಗಂಟೆ 50 ನಿಮಿಷದಲ್ಲಿ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಇನ್ ಸ್ಪೆಕ್ಟರ್ ಶರತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಂಡವಪುರದಲ್ಲಿ ರಾತ್ರಿಯಿಡೀ ಮಳೆ ಬಿದ್ದುದನ್ನು ಕಳ್ಳರು ಉಪಯೋಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ.
ಮಂಡ್ಯದಿಂದ ಬೆರಳಚ್ಚು ತಂಡದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.