ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ದರ್ಶನ್‌ಗೆ ಮತ್ತಷ್ಟು ಸಂಕಷ್ಟ

Published : Aug 11, 2026, 05:22 AM IST
vinay pradosh darshan renukaswamy case

ಸಾರಾಂಶ

ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿ ಪ್ರದೋಷ್‌ ಸಲ್ಲಿಸಿರುವ ಅರ್ಜಿ ವಿರುದ್ಧ ವಾದ ಮಂಡಿಸಲು ಸಹ ಆರೋಪಿಗಳಿಗೆ ಹಕ್ಕಿಲ್ಲ ಎಂದು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಆದೇಶಿಸಿದೆ

ಬೆಂಗಳೂರು : ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿ 14ನೇ ಆರೋಪಿ ಪ್ರದೋಷ್‌ ಸಲ್ಲಿಸಿರುವ ಅರ್ಜಿ ವಿರುದ್ಧ ವಾದ ಮಂಡಿಸಲು ಸಹ ಆರೋಪಿಗಳಿಗೆ ಹಕ್ಕಿಲ್ಲ ಎಂದು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಆದೇಶಿಸಿದೆ. ನ್ಯಾಯಾಲಯದ ಈ ಆದೇಶದಿಂದ ದರ್ಶನ್‌ ಮತ್ತು ಇತರೆ ಆರೋಪಿಗಳಿಗೆ ತೀವ್ರ ಹಿನ್ನಡೆಯಾಗಿದೆ.

ಪ್ರಕರಣದಲ್ಲಿ ಕ್ಷಮಾದಾನ ನೀಡಬೇಕು ಹಾಗೂ ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿ ದರ್ಶನ್‌ ಆಪ್ತ ಪ್ರದೋಷ್‌ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣಾ ಪ್ರಕ್ರಿಯೆಯಲ್ಲಿ ತಮ್ಮ ವಾದ ಆಲಿಸಬೇಕು ಎಂದು ದರ್ಶನ್‌ ಸೇರಿ ಇತರೆ ಆರೋಪಿಗಳು ಮನವಿ ಮಾಡಿದ್ದರು.

ಆದೇಶ ಪ್ರಕಟಿಸಿದ ಜಡ್ಜ್‌:

ಕಾಮಾಕ್ಷಿಪಾಳ್ಯ ಠಾಣೆ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್‌, ಪ್ರದೋಷ್‌ ಅರ್ಜಿಯನ್ನು ಒಪ್ಪಬೇಕು. ಈ ಅರ್ಜಿ ಸಂಬಂಧ ಸಹ ಆರೋಪಿಗಳ ವಾದ ಆಲಿಸುವ ಅಗತ್ಯವಿಲ್ಲ ಎಂದು ವಾದಿಸಿದ್ದರು. ಈ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶೆ ಸುಜಾತಾ ಎಂ.ಸಾಂಬ್ರಾಣಿ ಅವರು ಸೋಮವಾರ ಪ್ರಕಟಿಸಿದ್ದಾರೆ.

ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಕೋರಿ ಪ್ರದೋಷ್‌ ಸಲ್ಲಿಸಿರುವ ಅರ್ಜಿ ಸಂಬಂಧ ತಮ್ಮ ವಾದ ಮಂಡಿಸುವ ಹಕ್ಕು ಸಹಆರೋಪಿಗಳಿಗೆ ಇಲ್ಲ. ಹಾಗಾಗಿ ಪ್ರದೋಷ್‌ ಅರ್ಜಿ ಸಂಬಂಧ ವಾದ ಮಂಡನೆಗೆ ಅನುಮತಿ ನೀಡಬೇಕೆಂಬ ದರ್ಶನ್‌ ಹಾಗೂ ಇತರೆ ಆರೋಪಿಗಳ ಮನವಿ ತಿರಸ್ಕರಿಸಲಾಗಿದೆ. ಈ ಆದೇಶ ಆರೋಪಿಗಳ ಅನುಮತಿ ಕೋರಿರುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಕ್ಷಮಾದಾನ ಕೋರಿ ಮತ್ತು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿ ದರ್ಶನ್‌ ಸ್ನೇಹಿತ ಹಾಗೂ ಸ್ಟೋನಿ ಬ್ರೂಕ್‌ ಮಾಲೀಕರೂ ಆದ ಪ್ರಕರಣದ 10ನೇ ಆರೋಪಿ ವಿನಯ್‌ ಮತ್ತು 14ನೇ ಆರೋಪಿ ಪ್ರದೋಷ್ ಸಲ್ಲಿಸಿರುವ ಅರ್ಜಿಯನ್ನು ಮೆರಿಟ್‌ ಆಧಾರದಲ್ಲಿ ಮಂಗಳವಾರ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.

ಆದೇಶದ ವಿವರ:

ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 306 ಮತ್ತು 307 ಅನ್ನು ಜಂಟಿಯಾಗಿ ಓದಿದಾಗ, ಕ್ಷಮಾದಾನ ಮನವಿ ವಿಚಾರಣೆಯು ಕ್ಷಮಾದಾನ ಕೋರಿದ ವ್ಯಕ್ತಿ, ಪ್ರಾಸಿಕ್ಯೂಷನ್ (ಸರ್ಕಾರ) ಮತ್ತು ನ್ಯಾಯಾಲಯದ ಮಧ್ಯೆ ನಡೆಯುತ್ತವೆ. ಆ ವಿಚಾರಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಸಹ-ಆರೋಪಿಗೂ ಭಾಗವಹಿಸುವ ಅಥವಾ ವಿಚಾರಣೆಗೆ ಒಳಗಾಗುವ ಹಕ್ಕು ಇಲ್ಲ. ಕ್ಷಮಾದಾನದ ಪ್ರಕ್ರಿಯೆ ಸಹ-ಆರೋಪಿಯ ವಿರುದ್ಧದ ಟ್ರಯಲ್‌ಗೆ (ವಿಚಾರಣೆ) ಸಮವಾಗಿರುವುದಿಲ್ಲ. ಆರೋಪಿಗೆ ಕ್ಷಮಾದಾನ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಪರಿಗಣಿಸುವ ಹಂತದಲ್ಲಿ ನ್ಯಾಯಾಲಯ ಪ್ರಕರಣದ ಸಂದರ್ಭವನ್ನು ಪರಿಶೀಲಿಸಬೇಕಾಗುತ್ತದೆ. ಕ್ಷಮಾದಾನ ಕೋರಿರುವ ಆರೋಪಿ ನಿಜವಾಗಿಯೂ ಪ್ರಜ್ಞಾಪೂರ್ವಕವಾಗಿ ಸಂಪೂರ್ಣ ಸತ್ಯ ಬಹಿರಂಪಡಿಸುತ್ತಾನೆಯೇ ಎಂಬುದನ್ನು ನ್ಯಾಯಾಲಯ ಪರಿಗಣಿಸಬೇಕಾಗುತ್ತದೆ. ಹಾಗಾಗಿ, ಈ ಹಂತದಲ್ಲಿ ನ್ಯಾಯಾಲಯ ಇತರೆ ಆರೋಪಿಗಳ ಅಪರಾಧ ಅಥವಾ ಮುಗ್ಧತೆಯ ಬಗ್ಗೆ ತೀರ್ಪು ನೀಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅರ್ಜಿ ಏನು?:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನನಗೆ ಕ್ಷಮಾದಾನ ನೀಡಬೇಕು. ರೇಣುಕಾಸ್ವಾಮಿ ಮೊಬೈಲ್‌ನಲ್ಲಿದ್ದ ಮೆಸೇಜ್‌ಗಳನ್ನು ಓದಿದ್ದು ಬಿಟ್ಟರೆ ಯಾವುದೇ ಅಪರಾಧ ಕೃತ್ಯವನ್ನು ನಾನು ಎಸಗಿಲ್ಲ. ರೇಣುಕಾಸ್ವಾಮಿ ಹಲ್ಲೆ ನಡೆಸುತ್ತಿದ್ದ ದರ್ಶನ್‌ ಅವರನ್ನು ನಾನೇ ತಡೆದೆ. ಹೀಗೆ ಹಲ್ಲೆ ಮಾಡಿದರೆ ರೇಣುಕಾಸ್ವಾಮಿ ಸಾವನ್ನಪ್ಪುತ್ತಾನೆ. ಹೊಡೆಯುವುದನ್ನು ನಿಲ್ಲಿಸಿ ಎಂದು ಹೇಳಿದ್ದೆ. ರೇಣುಕಾಸ್ವಾಮಿ ಸಾವನ್ನಪ್ಪಿದ ನಂತರ ಸಹಾಯ ಮಾಡುವಂತೆ ನನಗೆ ದರ್ಶನ್‌ ಕೋರಿದ್ದರು. ಸಹಾಯ ಮಾಡದೆ ಹೋದರೆ ಗನ್‌ನಿಂದ ಸುಟ್ಟು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದರು. ಇದರಿಂದ ದರ್ಶನ್‌ ಗೆ ನಾನು ಸಹಾಯ ಮಾಡಿದೆ.

ಕೊಲೆ ನಂತರ ಮೃತದೇಹವನ್ನು ಬಿಸಾಡಲು ಮತ್ತು ಪೊಲೀಸರ ಮುಂದೆ ಕೆಲ ಆರೋಪಿಗಳನ್ನು ಶರಣಾಗಿಸುವ ವಿಚಾರದಲ್ಲಿ ನಾನು ಮಾತುಕತೆ ನಡೆಸಿದೆ. ಆದ್ದರಿಂದ ನನ್ನನ್ನು ಕ್ಷಮಿಸಿ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಕರಣದ ಎಲ್ಲ ಸಂಗತಿಯನ್ನು ಬಹಿರಂಗಪಡಿಸುತ್ತೇನೆ ಎಂದು ಕೋರಿ ಆ.5ರಂದು ಪ್ರದೋಷ್‌ ಅರ್ಜಿ ಸಲ್ಲಿಸಿದ್ದರು. 10ನೇ ಆರೋಪಿ ವಿನಯ್‌ ಸಹ ಮಾಫಿ ಸಾಕ್ಷಿಯಾಗಿಸಲು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.

ಕೋರ್ಟ್‌ ಹೇಳಿದ್ದೇನು?

ಕ್ಷಮಾದಾನದ ಮನವಿಯು ಅರ್ಜಿದಾರ, ಕೋರ್ಟ್‌ ಮತ್ತು ಸರ್ಕಾರ ನಡುವಿನ ವಿಷಯ

ಈ ವಿಷಯದಲ್ಲಿ ಸಹ ಆರೋಪಿಗೆ ವಾದ ಮಂಡಿಸುವ ಯಾವುದೇ ಅವಕಾಶ ಇರುವುದಿಲ್ಲ

ಹೀಗಾಗಿ ಈ ವಿಷಯದಲ್ಲಿ ಸಹ ಆರೋಪಿಗಳು ಸಲ್ಲಿಸಿದ ಮನವಿ ತಿರಸ್ಕರಿಸಲಾಗುತ್ತಿದೆ

ಪ್ರದೋಶ್‌ರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಬಗ್ಗೆ ಮುಂದೆ ನಿರ್ಧರಿಸಲಾಗುತ್ತದೆ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಯುವ ರೈತ ಆತ್ಮಹತ್ಯೆ
ಬ್ಯಾಂಕ್‌ನಿಂದಲೇ ನಕಲಿ ಚಿನ್ನ ಅಡಮಾನ!