ಕನ್ನಡಪ್ರಭ ವಾರ್ತೆ ಪಾಂಡವಪುರ
ಅನುಮಾನಾಸ್ಪದ ರೀತಿಯಲ್ಲಿ ಗಂಡು, ಹೆಂಗಸಿನ ಮೃತ ದೇಹಗಳು ಪಟ್ಟಣದ ಹಿರೋಡೆಯಲ್ಲಿ ಪತ್ತೆಯಾಗಿದೆ.
ಪಟ್ಟಣದ ನಾಗಮಂಗಲ ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಹಿಂಭಾಗದ ಹಿರೋಡೆ ಕೆರೆ ದಡದ ಕೆಸರಿನಲ್ಲಿ ಗಂಡು-ಹೆಂಗಸ್ಸಿನ ಮೃತದೇಹಗಳು ತಬ್ಬಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆರೆ ಪಕ್ಕದಲ್ಲಿ ಸ್ಥಳೀಯರು ಎಮ್ಮೆಯನ್ನು ಕಟ್ಟುಹಾಕಲು ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಮೃತಪಟ್ಟಿರುವ ಗಂಡು ಹಾಗೂ ಹೆಂಗಸ್ಸಿಗೆ 45 ಮತ್ತು 50 ವರ್ಷ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಮೃತ ದೇಹಗಳು ಕೆರೆ ದಡದದಲ್ಲಿರುವ ಕೆಸರಿನಲ್ಲಿ ಬಿದ್ದಿರುವುದರಿಂದ ಇದು ಕೊಲೆಯೋ?, ಇಲ್ಲಾ ಆತ್ಮಹತ್ಯೆಯೋ? ಎಂಬ ಹಲವು ಅನುಮಾನಗಳು ವ್ಯಕ್ತವಾಗಿವೆ.
ಎರಡು ಮೃತ ದೇಹಗಳು ತಬ್ಬಿಕೊಂಡಿರುವ ಸ್ಥಿತಿಯಲ್ಲಿ ದೊರಕಿರುವುದರಿಂದ ಇವರು ಗಂಡಹೆಂಡತಿ ಇರುಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಎರಡು ಮೃತವ್ಯಕ್ತಿಗಳು ಮುಖಗಳು ಊದುಕೊಂಡಿರುವುದರಿಂದ ಇವರು ಮೃತಪಟ್ಟು ಮೂರ್ನಾಲ್ಕು ದಿನಗಳಾಗಿರಬಹುದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೃತಪಟ್ಟಿರುವ ಮಹಿಳೆ ಸೀರೆ, ರವಿಕೆ ಹಾಕಿದ್ದಾರೆ. ಪುರುಷ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾರೆ. ಸಂಬಂಧಿಸಿದವರು ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ ಎಂದು ಸಬ್ ಇನ್ಸ್ಪೆಕ್ಟರ್ ಧನಲ್ಪಾಲ್ ತಿಳಿಸಿದ್ದಾರೆ. ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಪರಿಚಿತ ವಾಹನ ಡಿಕ್ಕಿ: ಪಾದಚಾರಿಗೆ ಗಂಭೀರ ಗಾಯ
ಭಾರತೀನಗರ: ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ ಮಾಡಿ ಕಾಲು ಮುರಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಜರುಗಿದೆ.
ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕ್ಯಾತಘಟ್ಟದ ಗ್ರಾಮದ ಪಾಪಣ್ಣ (58) ಅವರಿಗೆ ಅಪರಿಚಿತ ವಾಹನ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಆ್ಯಂಬುಲೆನ್ಸ್ ಕರೆಸಿ ಕೆ.ಎಂ.ದೊಡ್ಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆ.ಎಂ.ದೊಡ್ಡಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಜಖಂಗೊಂಡಿದ್ದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.