ಕದ್ದ ಚಿನ್ನಾಭರಣ ಮಾರಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳರು

KannadaprabhaNewsNetwork | Updated : Feb 17 2024, 03:34 PM IST

ಸಾರಾಂಶ

ಬೆಳಗಾವಿಯಿಂದ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಕಳ್ಳರು ಕದ್ದ ಚಿನ್ನ ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಮನೆಗಳವು ಹಾಗೂ ಸರಗಳ್ಳತನ ಕೃತ್ಯದಲ್ಲಿ ದೋಚಿದ ಆಭರಣಗಳನ್ನು ಮಾರಾಟಕ್ಕೆ ಯತ್ನಿಸಿದ್ದಾಗ ಮೂವರು ಕಿಡಿಗೇಡಿಗಳು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರಿಗೆ ಸೆರೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ನಾಸಿರ್ ಇರಾನಿ, ಅಮಿರ್‌ ಜಾಧ ಇರಾನಿ ಹಾಗೂ ಜಾಹೀರ್ ಅಬ್ಬಾಸ್ ಬಂಧಿತರಾಗಿದ್ದು, ಆರೋಪಿಗಳಿಂದ ₹7.62 ಲಕ್ಷ ಮೌಲ್ಯದ 127 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. 

ಇತ್ತೀಚೆಗೆ ಕುರುಬರಹಳ್ಳಿ 60 ಅಡಿ ರಸ್ತೆ ಸಮೀಪದ ಚಿನ್ನಾಭರಣ ಅಂಗಡಿಗೆ ಆಭರಣ ಮಾರಾಟಕ್ಕೆ ಅಪರಿಚಿತರು ಬಂದಿರುವ ಬಗ್ಗೆ ಬಾತ್ಮೀದಾರರ ಮೂಲಕ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಮಾಹಿತಿ ಸಿಕ್ಕಿತು. 

ತಕ್ಷಣವೇ ಅಂಗಡಿಗೆ ತೆರಳಿ ಶಂಕೆ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮೂರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿಗಳು, ಸುಲಭವಾಗಿ ಹಣ ಸಂಪಾದನೆಗೆ ಅಡ್ಡ ದಾರಿ ತುಳಿದಿದ್ದರು. ಅಂತೆಯೇ ಬೆಂಗಳೂರಿಗೆ ಬೆಳಗಾವಿಯಿಂದ ಬಂದು ಮನೆಗಳ್ಳತನ, ಸರಗಳ್ಳತನ ಹಾಗೂ ಗಮನ ಬೇರೆಡೆ ಸೆಳೆದು ಹಣ ದೋಚುವ ಕೃತ್ಯದಲ್ಲಿ ಈ ಮೂವರು ತೊಡಗಿದ್ದರು. 

ಹಲವು ದಿನಗಳಿಂದ ಅಪರಾಧ ಚಟುವಟಿಕೆಯಲ್ಲಿ ನಿರತರಾಗಿದ್ದ ಈ ತಂಡವು ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Share this article